ಮೂಡಿಗೆರೆ ವಿಧಾನಸಭಾ ಕ್ಷೇತ್ರದ ಶಾಸಕ ಎಂ.ಪಿ. ಕುಮಾರಸ್ವಾಮಿ ಜೆ.ಡಿ.ಎಸ್. ಪಕ್ಷ ಸೇರಿರುವುದಕ್ಕೆ ಮತ್ತು ಅವರಿಗೆ ಪಕ್ಷದ ಟಿಕೆಟ್ ನೀಡುವುದಕ್ಕೆ ನನ್ನ ಸಹಮತ ಇಲ್ಲವೆಂದು ಮಾಜಿ ಸಚಿವ ಬಿ.ಬಿ. ನಿಂಗಯ್ಯ ಅಸಮದಾನ ವ್ಯಕ್ತಪಡಿಸಿದ್ದಾರೆ.
ಎಂ.ಪಿ. ಕುಮಾರಸ್ವಾಮಿ ಜೆ.ಡಿ.ಎಸ್. ಪಕ್ಷ ಸೇರ್ಪಡೆಯಾಗಿರುವ ಮತ್ತು ಅವರು ಮೂಡಿಗೆರೆ ಕ್ಷೇತ್ರದಲ್ಲಿ ಅಭ್ಯರ್ಥಿಯಾಗುವ ವಿಚಾರವಾಗಿ ಪತ್ರಿಕೆ ನಿಂಗಯ್ಯನವರ ಅಭಿಪ್ರಾಯ ಕೇಳಿದಾಗ ಅವರು ಈ ಬೆಳವಣಿಗೆಯ ಬಗ್ಗೆ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.
ಕುಮಾರಸ್ವಾಮಿಯವರ ಯಾವ ನೈತಿಕ ಗುಣಗಳನ್ನು ನೋಡಿ ಅವರನ್ನು ಪಕ್ಷಕ್ಕೆ ಸೇರಿಸಿಕೊಂಡಿದೆ. ಅವರ ಸೇರ್ಪಡೆಗೆ ನನ್ನ ಸಹಮತವಿಲ್ಲ. ಈಗಾಗಲೇ ನನಗೆ ಟಿಕೆಟ್ ಘೋಷಣೆ ಮಾಡಿದ್ದು, ನನ್ನ ಬದಲಿಗೆ ಕುಮಾರಸ್ವಾಮಿಯವರಿಗೆ ಟಿಕೆಟ್ ನೀಡುವ ಬಗ್ಗೆ ಪಕ್ಷದ ವರಿಷ್ಠರು ನನ್ನ ಅಭಿಪ್ರಾಯ ಕೇಳಿಲ್ಲ.
ನಾನು ದೇವೇಗೌಡರನ್ನು ಭೇಟಿಯಾಗುತ್ತಿದ್ದು ನನ್ನ ಸ್ಪಷ್ಟ ವಿರೋಧವನ್ನು ತಿಳಿಸುತ್ತೇನೆ. ನಾನು ಕ್ಷೇತ್ರದಲ್ಲಿ ಪಕ್ಷ ಸಂಘಟನೆಗಾಗಿ ದುಡಿದಿದ್ದೇನೆ. ನನ್ನ ಕಾಫಿ ತೋಟದಲ್ಲಿ ಬಂದಂತಹ ಆದಾಯವನ್ನು ತಂದು ಪಕ್ಷದ ಸಂಘಟನೆಗೆ ವಿನಿಯೋಗಿಸಿದ್ದೇನೆ. ದಶಕಗಳ ಕಾಲ ನಾನು ಜೆ.ಡಿ.ಎಸ್. ಪಕ್ಷಕ್ಕೆ ಮತ್ತು ಕ್ಷೇತ್ರದ ಏಳಿಗೆಗೆ ದುಡಿದಿದ್ದೇನೆ.
ಕುಮಾರಸ್ವಾಮಿಯವರ ಬಗ್ಗೆ ಸಾಕಷ್ಟು ಆರೋಪಗಳು ಇವೆ. ನಮ್ಮ ಪಕ್ಷದ ಕೆಲವರು ವ್ಯಾವಹಾರಿಕ ದೃಷ್ಟಿಕೋನದಿಂದ ಅವರನ್ನು ಕರೆತಂದು ಪಕ್ಷಕ್ಕೆ ಸೇರಿಸಿದ್ದಾರೆ. ನನ್ನ ಬೆನ್ನಿಗೆ ಚೂರಿ ಹಾಕಿದ್ದಾರೆ.
ನಾನು ನಾಳೆ ನನ್ನ ಬೆಂಬಲಿಗರ ಮತ್ತು ಪಕ್ಷದ ಕಾರ್ಯಕರ್ತರ ಸಭೆಯನ್ನು ಕರೆಯುತ್ತಿದ್ದೇನೆ. ಅಲ್ಲಿ ನನ್ನ ಬೆಂಬಲಿಗರ ಅಭಿಪ್ರಾಯ ಕೇಳಿ ಮುಂದಿನ ರಾಜಕೀಯ ನಿರ್ಧಾರ ಕೈಗೊಳ್ಳುತ್ತೇನೆ. ಯಾವುದೇ ಕಾರಣಕ್ಕೂ ಎಂ.ಪಿ.ಕುಮಾರಸ್ವಾಮಿಯವರನ್ನು ಬೆಂಬಲಿಸುವ ಪ್ರಶ್ನೆಯೇ ಇಲ್ಲ ಎಂದು ಹೇಳಿದ್ದಾರೆ. ಈ ಬಗ್ಗೆ ಪಕ್ಷದ ವರಿಷ್ಠರ ಗಮನಕ್ಕೂ ತಂದಿದ್ದೇನೆ ಎಂದಿದ್ದಾರೆ.