ಮಾನವನಿಗೆ ಆರೋಗ್ಯ ಸಂಪತ್ತಿನ ಮುಂದೆ ಬೇರೆ ಯಾವ ಸಂಪತ್ತು ದೊಡ್ಡದಲ್ಲ. ಹಾಗಾಗಿ ಪ್ರತಿಯೊಬ್ಬರೂ ತಮ್ಮ ಆರೋಗ್ಯದ ಬಗ್ಗೆ ಮುತುವರ್ಜಿ ವಹಿಸಬೇಕೆಂದು ಫೂಟ್ ಪಲ್ಸ್ ಥೆರಪಿ ತಜ್ಞ ರತ್ನಾಕರ್ ಶೆಟ್ಟಿ ಹೇಳಿದರು.
ಅವರು ಬುಧವಾರ ಮೂಡಿಗೆರೆ ಪಟ್ಟಣದ ಜೇಸಿ ಭವನದಲ್ಲಿ ಜೇಸಿಐ ಮತ್ತು ಕಂಪಾನಿಯೋ ಸಂಸ್ಥೆ ವತಿಯಿಂದ ಏರ್ಪಡಿಸಿದ್ದ ಉಚಿತ ಫೂಟ್ ಪಲ್ಸ್ ಥೆರಪಿ ಹಾಗೂ ಆರೋಗ್ಯ ಮಾಹಿತಿ ಶಿಬಿರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. 2020ರ ಸಮೀಕ್ಷೆ ಪ್ರಕಾರ ದೇಶದಲ್ಲಿ 67 ಲಕ್ಷ ಮಂದಿ ಹೃದಯಘಾತದಿಂದ ಮೃತಪಟ್ಟಿದ್ದಾರೆ. ಡಯಾಬಿಟಿಸ್ ಎಲ್ಲರಲ್ಲೂ ಆವರಿಸಿಕೊಂಡಿದೆ. ಹಾಗಾಗಿ ಯೋಗ, ವ್ಯಾಯಾಮ, ಸಮಯಕ್ಕೆ ಸರಿಯಾಗಿ ಉತ್ತಮ ಆಹಾರ ಸೇವನೆ ಮೂಲಕ ಆರೋಗ್ಯ ಕಾಪಾಡಿಕೊಳ್ಳಬೇಕಾಗಿದೆ. ಪ್ರಸಕ್ತ ಕಾಲದಲ್ಲಿ ವಾಕಿಂಗ್, ವ್ಯಾಯಾಮವಿಲ್ಲದೇ ರಕ್ತದೊತ್ತಡದ ಸಮಸ್ಯೆ ಎದುರಿಸುವಂತಾಗಿದೆ. ಅದಕ್ಕಾಗಿ ಫೂಟ್ ಪಲ್ಸ್ ಥೆರಫಿ ಯಂತ್ರ ಬಳಕೆಯಿಂದ ದೇಹದ ವಿವಿಧ ಅಂಗಾಗಗಳ ನೋವುಗಳು, ರಕ್ತನಾಳಗಳ ಉಬ್ಬುವಿಕೆ, ರಕ್ತದೊತ್ತಡ, ಮಧುಮೇಹ ಸೇರಿದಂತೆ ಅನೇಕ ಕಾಯಿಲೆಗಳಿಂದ ಮುಕ್ತಿ ಪಡೆಯಲು ಸಾಧ್ಯವಿದೆ ಎಂದು ಮಾಹಿತಿ ನೀಡಿದರು.
ರೋಟರಿ ಸಂಸ್ಥೆ ಅಧ್ಯಕ್ಷ ಎಚ್.ಆರ್.ಪ್ರದೀಪ್ ಕುಮಾರ್ ಮಾತನಾಡಿ, ಇಂದಿನ ಆಹಾರ ಪದ್ಧತಿ ಗಮನಿಸಿದರೆ ಮುಂದಿನ ಪೀಳಿಗೆಯ ಭವಿಷ್ಯದ ಬಗ್ಗೆ ಭಯ ಮೂಡಿಸುತ್ತದೆ. ಆರೋಗ್ಯ ಕಾಪಾಡಿಕೊಳ್ಳಲು ವ್ಯಾಯಾಮ, ಗುಣಮಟ್ಟದ ಆಹಾರ ಸೇವನೆ ಮೂಲಕ ನಮ್ಮ ಜೀವನ ಶೈಲಿ ಕೂಡ ಬದಲಾಯಿಸಿಕೊಳ್ಳುವ ಅನಿವಾರ್ಯತೆ ಇದೆ. ಈಗಾಗಲೇ ಕಳೆದ 10 ದಿನದಿಂದ ಉಚಿತವಾಗಿ ಫೂಟ್ ಪಲ್ಸ್ ಥೆರಪಿ ಉಪಯೋಗ ಜನರು ಪಡೆದಿದ್ದಾರೆ. ಇನ್ನೂ ಉಳಿದ 5 ದಿನ ಇದರ ಸದ್ಬಳಕೆ ಮಾಡಿಕೊಳ್ಳಬೇಕೆಂದು ಮನವಿ ಮಾಡಿದರು.
ಜೇಸಿಐ ಅಧ್ಯಕ್ಷೆ ಸವಿತಾ ರವಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಜೇಸಿ ಕಾರ್ಯದರ್ಶಿ ಕೆ.ಕೆ.ಪ್ರದೀಪ್, ಕಾರ್ಯಕ್ರಮ ನಿರ್ದೇಶಕ ಶ್ರೇಷ್ಠಿ, ಲೇಡಿ ಜೇಸಿ ಕಾರ್ಯದರ್ಶಿ ರೇಖಾ ನಾಗರಾಜು, ಕಂಪಾನಿಯೋ ಸಂಸ್ಥೆಯ ರೋಹಿತ್ಶೆಟ್ಟಿ, ಮೇಘನಾ ಮಂಜುನಾಥ್ ಮತ್ತಿತರರಿದ್ದರು.