ಮೂಡಿಗೆರೆ ತಾಲೂಕಿನ ಬಣಕಲ್ ಹೋಬಳಿ ಕೊಡೆಬೈಲ್ ಗ್ರಾಮದಲ್ಲಿ ಹಸುವೊಂದು ಹುಲಿದಾಳಿಗೆ ಬಲಿಯಾಗಿದೆ.
ಕೊಡೆಬೈಲ್ ಗ್ರಾಮದ ಲಕ್ಷ್ಮಣಗೌಡ ಎಂಬುವವರ ಹಸುವಿನ ಮೇಲೆ ನಿನ್ನೆ ಮುಂಜಾನೆ ಹುಲಿ ದಾಳಿ ನಡೆಸಿದೆ. ಮನೆಯ ಸಮೀಪವೇ ಇರುವ ಕೊಟ್ಟಿಗೆ ಬಳಿ ಹುಲಿ ಹಸುವಿನ ಮೇಲೆ ದಾಳಿ ಮಾಡಿದೆ.
ಹುಲಿಯು ಹಸುವನ್ನು ಕೊಂದು ತಿನ್ನಲು ಪ್ರಯತ್ನಿಸಿದ್ದು ಕೊನೆಗೆ ತೀವ್ರ ಗಾಯಗೊಂಡ ಹಸುವನ್ನು ಬಿಟ್ಟು ತೆರಳಿತ್ತು.
ತೀವ್ರ ರಕ್ತಸ್ರಾವ ಮತ್ತು ಗಾಯದಿಂದ ಬಳಲಿದ್ದ ಹಸು ನಿನ್ನೆ ರಾತ್ರಿ ಪ್ರಾಣಬಿಟ್ಟಿದೆ.
ಸ್ಥಳಕ್ಕೆ ಅರಣ್ಯ ಇಲಾಖೆ ಸಿಬ್ಬಂದಿ ಭೇಟಿ ನೀಡಿ ಮಹಜರು ನಡೆಸಿದ್ದಾರೆ.
ಲಕ್ಷ್ಮಣಗೌಡರ ನಾಲ್ಕು ಗೋವುಗಳು ಈಗಾಗಲೆ ಹುಲಿದಾಳಿಗೆ ಬಲಿಯಾಗಿವೆ ಎಂದು ತಿಳಿದುಬಂದಿದೆ.
ಬಣಕಲ್ ಹೋಬಳಿಯಾದ್ಯಂತ ಹುಲಿದಾಳಿಗೆ ನಿರಂತರವಾಗಿ ಜಾನುವಾರುಗಳು ಬಲಿಯಾಗುತ್ತಿವೆ.
ಕೆಲ ದಿನಗಳ ಹಿಂದೆ ಸಮೀಪದ ಬಿನ್ನಡಿ ಗ್ರಾಮದಲ್ಲಿ ಒಂದು ಹಸು ಹುಲಿದಾಳಿಗೆ ಬಲಿಯಾಗಿತ್ತು.
ಈ ಬಗ್ಗೆ ಅರಣ್ಯ ಇಲಾಖೆ ಯಾವುದೇ ಕ್ರಮ ಜರುಗಿಸುತ್ತಿಲ್ಲ. ಇಲ್ಲಿ ದಾಳಿನಡೆಸುತ್ತಿರುವ ಹುಲಿಯನ್ನು ಹಿಡಿದು ಬೇರೆಡೆಗೆ ಸಾಗಿಸಬೇಕೆಂದು ಜನರು ಆಗ್ರಹಿಸುತ್ತಲೇ ಬಂದಿದ್ದಾರೆ.