ಅಖಿಲ ಭಾರತ ವೀರಶೈವ ಲಿಂಗಾಯಿತ ಮಹಾಸಭಾ ಚಿಕ್ಕಮಗಳೂರು ಜಿಲ್ಲಾ ಮತ್ತು ತಾಲ್ಲೂಕು ಸಮಿತಿ ವತಿಯಿಂದ ಚಿಕ್ಕಮಗಳೂರು ನಗರದ ಜಗದ್ಗುರು ರೇಣುಕಾಚಾರ್ಯ ಕಲ್ಯಾಣ ಮಂಟಪದಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಆಚರಿಸಲಾಯಿತು.
ಈ ಸಂದರ್ಭದಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯಿತ ಮಹಾಸಭಾದ ರಾಷ್ಟ್ರೀಯ ಉಪಾಧ್ಯಕ್ಷೆ ಚಂದ್ರಕಲಾ ಅವರು ಮಾತನಾಡಿ ಸಮಾಜ ಮತ್ತು ರಾಷ್ಟ್ರದ ಭವಿಷ್ಯ ಮಹಿಳೆಯರ ಮೇಲೆ ಅವಲಂಭಿತವಾಗಿದೆ. ಮಹಿಳೆ ಮನಸ್ಸು ಮಾಡಿದರೆ ಎಂತಹ ಸಾಧನೆಯನ್ನಾದರೂ ಮಾಡಬಹುದು. ಮಕ್ಕಳನ್ನು ತಿದ್ದಿ ತೀಡಿ ಅವರಿಗೆ ಉತ್ತಮ ಸಂಸ್ಕಾರ ನೀಡಿ ಅವರನ್ನು ಉತ್ತಮ ಪ್ರಜೆಗಳನ್ನಾಗಿ ರೂಪಿಸುವ ಹೊಣೆಗಾರಿಕೆಯನ್ನು ಮಹಿಳೆ ನಿರ್ವಹಿಸಿಕೊಂಡು ಬರುತ್ತಿದ್ದಾಳೆ. ಸಮಾಜದ ಶ್ರೇಷ್ಠತೆಯನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ಯುವ ಹೊಣೆಗಾರಿಕೆ ಮಹಿಳೆಯ ಮೇಲಿದೆ ಎಂದು ಅಭಿಪ್ರಾಯಿಸಿದರು.
ಮಹಾಸಭಾದ ಜಿಲ್ಲಾಧ್ಯಕ್ಷ ಹೆಚ್.ಎಂ.ಲೋಕೇಶ್ ಮಾತನಾಡಿ ಶತಮಾನಗಳ ಹಿಂದೆ ಹಾನಗಲ್ ಕುಮಾರಸ್ವಾಮಿಯವರು ವೀರಶೈವ ಲಿಂಗಾಯಿತ ಮಹಾಸಭಾವನ್ನು ಸ್ಥಾಪನೆ ಮಾಡಿದ್ದಾರೆ. ಇಂದು ದೇಶವಿದೇಶದಲ್ಲಿ ತನ್ನ ಛಾಪು ಮೂಡಿಸಿದ್ದು, ಸಮಾಜದ ಸಂಘಟನೆಯ ಜೊತೆಗೆ ಹಲವಾರು ಸಾಮಾಜಿಕ ಸೇವೆಗಳನ್ನು ನಡೆಸಿಕೊಂಡು ಬರುತ್ತಿದೆ ಎಂದರು.
ಮಹಾಸಭಾದ ಮಹಿಳಾ ಘಟಕದ ಚಿಕ್ಕಮಗಳೂರು ಜಿಲ್ಲಾ ಆಧ್ಯಕ್ಷೆ ಶ್ರೀಮತಿ ವನಮಾಲ ಮೃತ್ಯುಂಜಯ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ ಮಹಿಳೆ ಇಂದು ಎಲ್ಲಾ ಕ್ಷೇತ್ರಗಳಲ್ಲಿ ಪುರುಷರಿಗೆ ಸರಿಸಮಾನಾಗಿ ತಮ್ಮನ್ನು ಗುರುತಿಸಿಕೊಂಡಿದ್ದಾರೆ. 12ನೇ ಶತಮಾನದಲ್ಲಿಯೇ ಪುರುಷರಿಗೆ ಸರಿಸಮಾನಾಗಿ ಮಹಿಳೆಯರು ವಚನಸಾಹಿತ್ಯ ರಚನೆ ಮಾಡಿದ್ದಾರೆ ಎಂದರು.
ಈ ಸಂದರ್ಭದಲ್ಲಿ ರೈತಮಹಿಳೆ ಸುಶೀಲಾ ಶೇಖರ್ ಚಿನ್ನಿಗ ಮತ್ತು ದಿವ್ಯ ಲೀಲಾ ಬೀರೂರು ಇವರನ್ನು ಸನ್ಮಾನಿಸಲಾಯಿತು. ಮಮತಾ ಮಹೇಶ್ ಮಾನಸಿಕ ಖಿನ್ನತೆ ಮತ್ತು ಒತ್ತಡ ನಿವಾರಣೆ ಬಗ್ಗೆ ಉಪನ್ಯಾಸ ನೀಡಿದರು. ಮಹಿಳೆಯರಿಗೆ ವಿವಿಧ ಸ್ಪರ್ಧೆಗಳನ್ನು ಮತ್ತು ಸಾಂಸ್ಕøತಿಕ ಕಾರ್ಯಕ್ರಮ ಏರ್ಪಡಿಸಲಾಗಿತ್ತು.
ವೇದಿಕೆಯಲ್ಲಿ ರಾಜ್ಯ ಸಮಿತಿ ಪ್ರಧಾನ ಕಾರ್ಯದರ್ಶಿ ಮುಕ್ತಾಂಬ, ಜಿಲ್ಲಾ ಉಸ್ತುವಾರಿ ಪಂಕಜಾ ಮಲ್ಲಿಕಾರ್ಜುನ್, ಜಿಲ್ಲಾ ಉಪಾಧ್ಯಕ್ಷೆ ಶಾಲಿನಿ ಅನಿಲ್ ಕುಮಾರ್, ಲತಾರವಿ, ಹೊಸದುರ್ಗಾ ಅನಿತಾ ಮುಂತಾದವರು ಉಪಸ್ಥಿತರಿದ್ದರು.
ತಾಲ್ಲೂಕು ಅಧ್ಯಕ್ಷೆ ಕವಿತಾ ಗೋಪಾಲ್ ಸ್ವಾಗತಿಸಿದರು. ಮಧುಮತಿ ಶಿವಕುಮಾರ್ ವಂದಿಸಿದರು, ಭಾಗ್ಯಕುಮಾರ್, ಸಿಂಧುಮನು ನಿರೂಪಿಸಿದರು. ಮಂಜುಳಾ ಶಶಿಕುಮಾರ್, ಸಹನಾ ರಾಜೀವ್ ಅತಿಥಿಗಳನ್ನು ಪರಿಚಯಿಸಿದರು. ಸುಮಾಲೋಕೇಶ್, ಗುಣರತ್ನ ನಂದೀಶ್ ಪ್ರಾರ್ಥಿಸಿದರು.
ಬೀರೂರಿನ ಗೌರಿ ಪ್ರಸನ್ನ ತಂಡದಿಂದ ವಚನ ಗಾಯನ, ಶ್ರೀ ಪಾರ್ವತಿ ಮಹಿಳಾ ತಂಡದಿಂದ ರೇಣುಕಾ ಗೀತೆ ಗಾಯನ ಏರ್ಪಡಿಸಲಾಗಿತ್ತು.