ಅಂಬುಲೆನ್ಸ್ ಒಂದು ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಮೃತಪಟ್ಟಿರುವ ಘಟನೆ ಮೂಡಿಗೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮಂಗಳವಾರ ಸಂಜೆ ನಡೆದಿದೆ. ಮಂಗಳೂರು ವಿಲ್ಲೂಪುರಂ ರಾಷ್ಟ್ರೀಯ ಹೆದ್ದಾರಿಯ ಮೂಡಿಗೆರೆ ಸಮೀಪದ ಮುತ್ತಿಗೆಪುರ ಬಳಿ ಈ ಘಟನೆ ನಡೆದಿದೆ.
ಮೃತರನ್ನು ಮೂಡಿಗೆರೆ ತಾಲ್ಲೂಕು ಬಿದರಹಳ್ಳಿ ವಾಸಿ ಸಿದ್ದಿಕ್ ಅಹಮದ್(57 ವರ್ಷ) ಎಂದು ಗುರುತಿಸಲಾಗಿದೆ. ಸಿದ್ದಿಕ್ ಅವರು ಬೇಲೂರು ತಾಲ್ಲೂಕಿನ ಅರೇಹಳ್ಳಿಯಲ್ಲಿ ವಿವಾಹ ಕಾರ್ಯಕ್ರಮ ಮುಗಿಸಿ Attachments ವಾಪಾಸ್ಸು ಬರುತ್ತಿದ್ದ ಸಂದರ್ಭದಲ್ಲಿ ಮಂಗಳವಾರ ಸಂಜೆ 6-15ರ ಸಮಯದಲ್ಲಿ ಮುತ್ತಿಗೆಪುರ ಬಳಿ ಅಂಬುಲೆನ್ಸ್ ಡಿಕ್ಕಿ ಹೊಡೆದಿದೆ.
ಡಿಕ್ಕಿಯ ರಭಸಕ್ಕೆ ಬೈಕ್ ನಜ್ಜುಗುಜ್ಜಾಗಿದ್ದು, ಬೈಕ್ ಓಡಿಸುತ್ತಿದ್ದ ಸಿದ್ದಿಕ್ ಮೂಡಿಗೆರೆ ಆಸ್ಪತ್ರೆಗೆ ಸಾಗಿಸುವ ಹೊತ್ತಿಗಾಗಲೇ ಮೃತಪಟ್ಟಿದ್ದರು ಎಂದು ತಿಳಿದುಬಂದಿದೆ.
ಅಂಬುಲೆನ್ಸ್ ಚಾಲಕ ಮುತ್ತಿಗೆಪುರದ ವಿನಯ್ ಅಜಾಗರೂಕತೆಯಿಂದ ಅಪಘಾತವೆಸಗಿದ್ದು ಈ ಬಗ್ಗೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಮೃತ ಸಿದ್ದಿಕ್ ಅವರ ಸಂಬಂಧಿ ಮಹಮ್ಮದ್ ಜಮೀರ್ ದೂರು ನೀಡಿದ್ದಾರೆ. ಮೂಡಿಗೆರೆ ಠಾಣೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಸಿದ್ದಿಕ್ ಅವರು ಪತ್ನಿ, ಇಬ್ಬರು ಹೆಣ್ಣುಮಕ್ಕಳು, ಅಪಾರ ಬಂದುಗಳನ್ನು ಅಗಲಿದ್ದಾರೆ.