ಚಿಕ್ಕಮಗಳೂರು ಜಿಲ್ಲೆಯ ಮಲೆನಾಡು ಭಾಗದಲ್ಲಿ ಅನೇಕ ಕಡೆ ಇಂದು ಗುಡುಗು ಸಹಿತ ಉತ್ತಮ ಮಳೆಯಾಗಿದೆ.
ಇಂದು ಮಧ್ಯಾಹ್ನ ಇದ್ದಕ್ಕಿದ್ದಂತೆ ವಾತಾವರಣದಲ್ಲಿ ಬದಲಾವಣೆಯಾಗಿದ್ದು ಮಲೆನಾಡಿನ ಮೂಡಿಗೆರೆ, ಕಳಸ, ಎನ್.ಆರ್.ಪುರ ತಾಲ್ಲೂಕಿನ ಅನೇಕ ಕಡೆ ಅಲ್ಲಲ್ಲಿ ಉತ್ತಮ ಮಳೆಯಾಗಿದೆ.
ಮೂಡಿಗೆರೆ ತಾಲ್ಲೂಕಿನ ಬೆಟ್ಟಗೆರೆ, ದಾರದಹಳ್ಳಿ ಸುತ್ತಮುತ್ತಲ ಪ್ರದೇಶಗಳಲ್ಲಿ ಉತ್ತಮ ಮಳೆಯಾಗಿದೆ.
ಕಳಸ ತಾಲ್ಲೂಕಿನ ಮುನ್ನೂರುಪಾಲು, ಬಾಳೆಹೊಳೆ, ಹೊರನಾಡು, ಕಾರಗದ್ದೆ ಸುತ್ತಮುತ್ತ ಗುಡುಗು ಸಹಿತ ಮಳೆಯಾಗಿದೆ.
ಎನ್.ಆರ್. ಪುರ ತಾಲ್ಲೂಕಿನ ಬಾಳೆಹೊನ್ನೂರು, ಚಿಕ್ಕ ಅಗ್ರಹಾರ, ಬನ್ನೂರು, ಸಂಗಮೇಶ್ವರ ಪೇಟೆ, ಕೊಪ್ಪ ತಾಲ್ಲೂಕಿನ ಜಯಪುರ ಸುತ್ತಮುತ್ತ ಮಳೆಯಾದ ವರದಿಯಾಗಿದೆ.
ಒಂದೇ ಪ್ರದೇಶದ ಬೇರೆ ಬೇರೆ ಕಡೆ ಮಳೆಯಲ್ಲಿ ವ್ಯತ್ಯಾಸವಾಗಿದೆ. 5 ಸೆಂಟ್ಸ್ ನಿಂದ 2 ಇಂಚುವರೆಗೆ ಮಳೆ ಬೇರೆ ಬೇರೆ ಪ್ರದೇಶದಲ್ಲಿ ವ್ಯತ್ಯಾಸವಾಗಿ ಬಿದ್ದಿದೆ.
ಉತ್ತಮ ಮಳೆಯಾಗಿರುವ ಪ್ರದೇಶದಲ್ಲಿ ಬೆಳೆಗಾರರ ಮೊಗದಲ್ಲಿ ಮಂದಹಾಸ ಮೂಡಿದೆ. ಇನ್ನು ಕೆಲವು ಕಡೆ ಅಲ್ಪ ಮಳೆಯಾಗಿದ್ದು ಕೃಷಿಕರ ಆತಂಕವನ್ನು ಹೆಚ್ಚಿಸಿದೆ.
ಮುಂದಿನ ಮೂರ್ನಾಲ್ಕು ದಿನಗಳ ವರೆಗೆ ರಾಜ್ಯದ ಹಲವು ಭಾಗದಲ್ಲಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.