ಹೆಣ್ಣು ಸಮಾಜದ ಕಣ್ಣಾಗಬೇಕು. ಬದುಕಿನಲ್ಲಿ ಅನೇಕ ಸಮಸ್ಯೆ, ಸವಾಲುಗಳು ಬರುತ್ತಿರುತ್ತವೆ. ಅವುಗಳನ್ನು ಎದುರಿಸಿ ಮುಂದೆ ಸಾಗಿದಾಗ ಮಾತ್ರ ಜೀವನದಲ್ಲಿ ಯಶಸ್ಸು ಕಾಣಲು ಸಾಧ್ಯ ಎಂದು ಮಾಜಿ ಸಚಿವೆ ಮೋಟಮ್ಮ ಹೇಳಿದರು.
ಅವರು ಶುಕ್ರವಾರ ಪಟ್ಟಣದ ತಾ.ಪಂ. ಸಭಾಂಗಣದಲ್ಲಿ ಗ್ರಾ.ಪಂ. ಚುನಾಯಿತ ಮಹಿಳೆ ಸದಸ್ಯರ ಒಕ್ಕೂಟ ಮತ್ತು ಸುಗ್ರಾಮ ಸಂಸ್ಥೆಯಿಂದ ಏರ್ಪಡಿಸಿದ್ದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಗ್ರಾ.ಪಂ. ಮಹಿಳಾ ಸದಸ್ಯರು ಹಾಗೂ ಸ್ವಸಹಾಯ ಸಂಘಗಳ ಒಕ್ಕೂಟದ ಸಮಾವೇಶದಲ್ಲಿ ಮಾತನಾಡಿದರು.
ಹಿಂದೆ ಮಹಿಳೆ 4 ಗೋಡೆಗಳ ನಡುವೆ ಇರುವಂತಹ ಕಾಲವಿತ್ತು. ಮಹಿಳೆಯರು ಎಲ್ಲಾ ರಂಗದಲ್ಲಿ ಪಾಲ್ಗೊಳ್ಳುವ ಜತೆಗೆ ಮಹಿಳೆಯರ ರಕ್ಷಣೆಗೆ ಕಾನೂನು ಕಾಯಿದೆ ತಂದ ಡಾ.ಬಿ.ಆರ್.ಅಂಬೇಡ್ಕರ್ ಅವರನ್ನು ಯಾರೂ ಮರೆಯಬಾರದು. ಮಹಿಳಾ ಜನಪ್ರತಿನಿಧಿಗಳು ಜನಪರ ಕಾರ್ಯ ವೈಖರಿ ಕಂಡು, ಪುರುಷರಲ್ಲಿ ಮಹಿಳೆಯರೇ ಆಡಳಿತ ನಡೆಸಬೇಕೆಂಬ ಭಾವನೆ ಮೂಡಿಸಬೇಕೆಂದು ಹೇಳಿದರು.
ಶಾಸಕ ಎಂ.ಪಿ.ಕುಮಾರಸ್ವಾಮಿ ಮಾತನಾಡಿ, ಮಹಿಳೆಯರ ಮೇಲೆ ಯಾವುದೇ ಭ್ರಷ್ಟಾಚಾರದ ಆರೋಪವಿಲ್ಲ. ಮುಖ್ಯವಾಗಿ ದೇಶ ಕಾಯುವ ಸೈನಿಕ ವೃತ್ತಿಯಲ್ಲೂ ಮಹಿಳೆ ಇದ್ದಾರೆ. ಮಹಿಳೆ ಎಲ್ಲಾ ರಂಗದಲ್ಲೂ ಗುರುತಿಸಿಕೊಂಡಿರುವುದಕ್ಕೆ ಇದಕ್ಕಿಂತ ಉದಾಹರಣೆ ಇನ್ನೊಂದು ಬೇಕಿಲ್ಲ ಎಂದು ಹೇಳಿದರು.
ಮಾಜಿ ಸಚಿವ ಬಿ.ಬಿ.ನಿಂಗಯ್ಯ ಮಾತನಾಡಿ, ಮಹಿಳೆಯರು ಎಲ್ಲಾ ರಂಗದಲ್ಲಿ ಗುರುತಿಸಿಕೊಂಡಿರುವುದು ಸಂತಸದ ವಿಚಾರ. ಸಂಘಟಿತರಾಗಿ ಮಹಿಳಾ ಸಬಲೀಕರಣಕ್ಕೆ ಶ್ರಮಿಸಬೇಕೆಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸುಗ್ರಾಮ ಒಕ್ಕೂಟದ ತಾಲೂಕು ಅಧ್ಯಕ್ಷೆ ರಾಧ ವಹಿಸಿದ್ದರು. ಊರುಬಗೆ ಗ್ರಾ.ಪಂ. ಉಪಾಧ್ಯಕ್ಷೆ ಕೆ.ಪಿ.ಭಾರತಿ, ವಿವಿಧ ಗ್ರಾಮಪಂಚಾಯಿತಿಗಳ ಮಹಿಳಾ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ಮೂಡಿಗೆರೆ ತಾ.ಪಂ. ಇಓ ಹರ್ಷಕುಮಾರ್, ಸಮಾಜ ಕಲ್ಯಾಣಾಧಿಕಾರಿ ಸೋಮಶೇಖರಪ್ಪ, ಸುಗ್ರಾಮ ಸಂಸ್ಥೆಯ ಶ್ರೀನಿವಾಸ್, ಸುಗ್ರಾಮ ಜಿಲ್ಲಾ ಮತ್ತು ತಾಲ್ಲೂಕು ಪದಾಧಿಕಾರಿಗಳು, ಗ್ರಾಮ ಪಂಚಾಯಿತಿ ಮಹಿಳಾ ಸದಸ್ಯರ ಒಕ್ಕೂಟದ ಪದಾಧಿಕಾರಿಗಳು, ಸಂಚಿಹೊನ್ನಮ್ಮ ಸಂಸ್ಥೆಯ ಕಮಲಾಕ್ಷಮ್ಮ, ಸಂಜೀವಿನಿ ಒಕ್ಕೂಟದ ಅಧ್ಯಕ್ಷೆ ಚಂದ್ರಾವತಿ, ಶಾಲಿನಿ, ಜಯಮ್ಮ , ಗಂಗಮ್ಮ, ಸೀತಮ್ಮ, ದಿಲ್ದಾರ್ ಬೇಗಂ, ಹಂಗರ್ ಪ್ರಾಜೆಕ್ಟ್, ಸಂಜೀವಿನಿ ಒಕ್ಕೂಟದ ಪದಾಧಿಕಾರಿಗಳು ಮತ್ತಿತರರಿದ್ದರು.
ಇದೇ ಸಂದರ್ಭದಲ್ಲಿ ಎರಡು ಮತ್ತು ಹೆಚ್ಚಿನ ಅವಧಿಗೆ ಗ್ರಾಮ ಪಂಚಾಯಿತಿ ಸದಸ್ಯರಾದವರನ್ನು, ಸಮಾಜದ ವಿವಿಧ ರಂಗಗಳಲ್ಲಿ ಸೇವೆ ಸಲ್ಲಿಸಿದ ಹಿರಿಯ ಮಹಿಳೆಯರನ್ನ, ಸಮಾಜ ಕಲ್ಯಾಣ ಇಲಾಖೆಯ ನಿವೃತ್ತ ಅಧಿಕಾರಿ ಶ್ರೀಮತಿ ಸೀತಮ್ಮ ಅವರನ್ನು ಸನ್ಮಾನಿಸಲಾಯಿತು.