ಪ್ರಪಂಚದ ಎಲ್ಲಾ ಮಾನವರಲ್ಲಿ ಪರಸ್ಪರ ಪ್ರೀತಿ, ವಿಶ್ವಾಸ, ಸ್ನೇಹ, ಸೌಹಾರ್ಧ, ಶಾಂತಿ ಸಮಾಧಾನದಿಂದ ಒಂದು ಕುಟುಂಬದಂತೆ ಒಂದಾಗಿ ಬಾಳಲು ವೇದಿಕೆಯನ್ನು ಹಾಕಿಕೊಳ್ಳುವುದೇ ಧರ್ಮವೆಂದು ಹರಿಹರಪುರದ ಶ್ರೀ ಆದಿಶಂಕರಾಚಾರ್ಯ ಶಾರದಾ ಲಕ್ಷ್ಮೀನೈಸಿಂಹ ಪೀಠಾಧೀಶ್ವರ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ಸ್ವಯಂಪ್ರಕಾಶ ಸಚ್ಚಿದಾನಂದ ಸರಸ್ವತಿ ಮಹಾ ಸ್ವಾಮೀಜಿ ಹೇಳಿದರು.
ಅವರು ಬುಧವಾರ ಮೂಡಿಗೆರೆ ಪಟ್ಟಣದ ಶ್ರೀ ಹಿರೇದೇವಿರಮ್ಮನ ಬನ ಶ್ರೀ ಅಯ್ಯಪ್ಪಸ್ವಾಮಿ ಪುಣ್ಯ ಕ್ಷೇತ್ರದಲ್ಲಿ ಶ್ರೀ ಅಯ್ಯಪ್ಪಸ್ವಾಮಿ ಸೇವಾ ಸಮಿತಿಯಿಂದ ಏರ್ಪಡಿಸಿದ್ದ ಬ್ರಹ್ಮಕಲಶೋತ್ಸವ ಕಾರ್ಯಕ್ರಮದ ಉದ್ಘಾಟಿಸಿ ಆಶೀರ್ವಚನ ನೀಡಿ ಮಾತನಾಡಿದರು.
ಜೀವನದುದ್ದಕ್ಕೂ ನಮ್ಮ ಭಾರತೀಯ ಸಂಸ್ಕøತಿಯಲ್ಲಿ ವೈವಿಧ್ಯತೆಯಲ್ಲಿ ಕಾಣುತ್ತಿದ್ದೇವೆ. ದೇವರ ಆರಾಧನೆ, ಸಿದ್ಧಾಂತದ ಅನುಷ್ಟಾನ, ಸತ್ಯದ ಅನಾವರಣ, ಸಂಪ್ರದಾಯ ಪಾಲನೆ ಹೀಗೆ ಜೀವನದ ಪ್ರತಿ ಕ್ಷಣದಲ್ಲೂ ಕೂಡ ಭಾರತೀಯ ಸಂಸ್ಕøತಿಯಲ್ಲಿ ವೈವಿದ್ಯತೆ ಕಾಣುತ್ತಿದ್ದೇವೆ. ಎಲ್ಲಾ ದೇವರ ಮೂಲ ಹುಡುಕಿದರೆ ದೇವರು ಒಬ್ಬನೇ. ಹಾಗಾಗಿ ಆ ದೇವರು, ಈ ದೇವರು ಶ್ರೇಷ್ಟ ಎಂಬ ಬೇಧಭಾವ ಇರಬಾರದು. ನಮ್ಮ ಇಷ್ಟ ದೇವರಲ್ಲಿ ಪರಿಶುದ್ಧವಾದ ಭಕ್ತಿಯಿಂದ ಜೀವನದಲ್ಲಿ ಪರಮಾತ್ಮಿಕ ಶ್ರೇಯಸ್ಸನ್ನು ಕಂಡುಕೊಳ್ಳಬಹುದು. ಅಯ್ಯಪ್ಪಸ್ವಾಮಿ ರೂಪಕ್ಕೆ ಮಹತ್ವವಿದೆ. ಇದು ವೈವಿದ್ಯತೆಯಲ್ಲಿ ಏಕತೆ ಸಾರುವ ರೂಪವಾಗಿದೆ. ಇಂತಹ ಸಮನ್ವಯ ದೃಷ್ಟಿಕೋನ ನಮ್ಮೆಲ್ಲರಲ್ಲೂ ಜಾಗೃತಿ ಆಗಬೇಕಿದೆ ಎಂದು ಹೇಳಿದರು.
ಭಾರತೀಯ ಸಂಸ್ಕøತಿ ಸಾರದಿಂದ ನಾವೆಲ್ಲರೂ ದೂರವಾಗುತ್ತಿದ್ದೇವೆ. ವೈವಿದ್ಯತೆಯನ್ನು ವಿಭಜಿಸುವ ದೃಷ್ಟಿಕೋನದಿಂದ ನೋಡುತ್ತಿದ್ದೇವೆ. ವಿಭಜಿಸುವುದು ಧರ್ಮವಲ್ಲ. ಇದರಿಂದಲೇ ನಮ್ಮ ಸಂಸ್ಕøತಿ ಮೇಲೆ ದಾಳಿ ನಡೆಯುತ್ತಿದೆ. ನಮ್ಮ ಭಾರತೀಯ ಸಂಸ್ಕøತಿ ಸಂರಕ್ಷಣೆ ಆಗಬೇಕೆಂದರೆ ನಾವೆಲ್ಲರೂ ಈ ವೈವಿದ್ಯತೆ ಏಕತೆಯ ತಳಹದಿ ಮೇಲೆ ವಿಕಾಸ ಮಾಡಿಕೊಳ್ಳಲು ಪೂರಕವಾಗಿ ನಡೆ, ನುಡಿ, ಆಚಾರಗಳನ್ನು ರೂಪಿಸಿಕೊಳ್ಳಬೇಕು. ಸಮನ್ವಯ ದೃಷ್ಟಿಕೋನ ಇಟ್ಟುಕೊಂಡು ನಮ್ಮ ಆಚಾರ, ವಿಚಾರ ಶ್ರದ್ಧೆಯಿಂದ ಪಾಲಿಸುತ್ತಾ, ಬೇರೆಯವರ ಆಚಾರ, ವಿಚಾರವನ್ನು ಗೌರವಿಸುತ್ತಾ ಜೀವನ ನಡೆಸಲು ದೃಢ ಸಂಕಲ್ಪ ಮಾಡಿಕೊಳ್ಳಬೇಕು. ಆಗ ಮಾತ್ರ ಕುಟುಂಬ ಕ್ಷೇಮ, ಸಮಾಜದ ಹಿತ, ವಿಶ್ವದ ಕಲ್ಯಾಣ ತಾನಾಗಿಯೇ ಆಗುತ್ತದೆ ಎಂದು ಹೇಳಿದರು.
ಶಾಸಕ ಎಂ.ಪಿ.ಕುಮಾರಸ್ವಾಮಿ, ಅಯ್ಯಪ್ಪಸ್ವಾಮಿ ಸೇವಾ ಸಮಿತಿ ಅಧ್ಯಕ್ಷ ಶ್ರೀಕಾಂತ್, ಗೌರವಾಧ್ಯಕ್ಷರಾದ ಮಂಚೇಗೌಡ, ವಿಜಯ ವಿಶ್ವನಾಥ್ ರೈ, ಖಜಾಂಚಿ ಉಮೇಶ್, ಶ್ರೀ ಬ್ರಹ್ಮ ಕಲಶೋತ್ಸವ ಸೇವಾ ಸಮಿತಿ ಅಧ್ಯಕ್ಷ ಮದೀಶ್, ವಕೀಲ ಪ್ರಶಾಂತ್, ಜಯಸಿಂಗ್ ನಾಯಕ್, ರಾಜು ಮತ್ತಿತರರಿದ್ದರು.