ವಿವಾಹಿತೆಯೊಬ್ಬರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.
ಮೂಡಿಗೆರೆ ಪಟ್ಟಣ ಸಮೀಪದ ಕುನ್ನಹಳ್ಳಿ ಗ್ರಾಮದ ಸ್ವರೂಪ (28) ಆತ್ಮಹತ್ಯೆ ಮಾಡಿಕೊಂಡವರು.
ಕುನ್ನಹಳ್ಳಿ ಗ್ರಾಮದ ಅಕ್ಷಯ ಎಂಬುವವರ ಪತ್ನಿ ಸ್ವರೂಪ ಮಾರ್ಚ್ 5ರಂದು ಸಂಜೆ ಮನೆಯಲ್ಲಿಯೇ ವಿಷಕಾರಿ ರೌಂಡ್ ಅಪ್ ಕಳೆನಾಶಕ ಸೇವಿಸಿ ಆತ್ಮಹತ್ಯೆಗೆ ಪ್ರಯತ್ನಿಸಿದ್ದರು. ವಿಷಸೇವಿಸಿ ಅಸ್ವಸ್ಥಗೊಂಡಿದ್ದ ಸ್ವರೂಪ ಅವರನ್ನು ಮನೆಯವರು ತಕ್ಷಣ ಮೂಡಿಗೆರೆ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಮೂಡಿಗೆರೆ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗೆ ಹಾಸನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ನಿನ್ನೆ ಮಾರ್ಚ್ 7 ರ ಬೆಳಿಗ್ಗೆ ಕೊನೆಯುಸಿರೆಳೆದಿದ್ದಾರೆ.
ಈ ಬಗ್ಗೆ ಮೂಡಿಗೆರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸ್ವರೂಪ ಆಸ್ಪತ್ರೆಯಲ್ಲಿ ಪೊಲೀಸರೆದುರು ನಾನೆ ಆತ್ಮಹತ್ಯೆ ಮಾಡಿಕೊಂಡಿದ್ದೇನೆ ನನ್ನ ಸಾವಿಗೆ ನಾನೇ ಕಾರಣ. ಆನ್ ಲೈನ್ ಮೂಲಕ ವಿಷ ತರಿಸಿಕೊಂಡು ಅದನ್ನು ಸೇವಿಸಿದ್ದೇನೆ ಎಂದು ಹೇಳಿಕೆ ನೀಡಿದ್ದಾರೆ.
ಮೂಡಿಗೆರೆ ಪಟ್ಟಣದ ಛತ್ರಮೈದಾನದ ದಿವಂಗತ ಹರೀಶ್ ಎಂಬುವವರ ಪುತ್ರಿ ಸ್ವರೂಪ ಕುನ್ನಹಳ್ಳಿ ಗ್ರಾಮದ ಮೆಣಸೇಗೌಡ ಎಂಬುವವರ ಪುತ್ರ ಅಕ್ಷಯ್ ಅವರೊಂದಿಗೆ ಈಗ್ಗೆ 2 ವರ್ಷಗಳ ಹಿಂದೆ ವಿವಾಹವಾಗಿತ್ತು. ಬಿ.ಇ. ಪದವೀದರೆಯಾಗಿದ್ದ ಸ್ವರೂಪ ಮೂಡಿಗೆರೆ ಖಾಸಗಿ ಕಛೇರಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು ಎಂದು ತಿಳಿದುಬಂದಿದೆ.
ಮೂಡಿಗೆರೆ ಠಾಣೆಯಲ್ಲಿ ಸ್ವರೂಪ ತಾಯಿ ಮಮತ ಅವರು ನನ್ನ ಮಗಳ ಸಾವಿಗೆ ಯಾರು ಕಾರಣರಲ್ಲ ಅವಳೇ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಹೇಳಿಕೆ ನೀಡಿದ್ದಾರೆ.
ಎಲ್ಲರೊಂದಿಗೆ ಪ್ರೀತಿ ವಿಶ್ವಾಸದಿಂದಿದ್ದ, ಸದಾ ಲವಲವಿಕೆ ಆತ್ಮವಿಶ್ವಾಸದಿಂದ ಇರುತ್ತಿದ್ದ, ಇಂಜಿನಿಯರ್ ಪದವೀದರೆ ಸ್ವರೂಪ ಸಾವು ಅವರ ಕುಟುಂಬದವರಿಗೆ, ಬಂಧುಗಳಿಗೆ ಮತ್ತು ಸ್ನೇಹಿತರಿಗೆ ಅತೀವ ದುಃಖ ತಂದಿದ್ದು, ಇಂತಹ ದುಡುಕಿನ ನಿರ್ಧಾರ ಏಕೆ ತೆಗೆದುಕೊಂಡಳು ಎಂಬುದು ಎಲ್ಲರಿಗೂ ಪ್ರಶ್ನಾರ್ಥಕವಾಗಿದೆ.