ನಮ್ಮ ಜಿಲ್ಲೆಯ ಬಹುಮುಖ ಪ್ರತಿಭೆ ಶ್ರೀಶಾ ದೇವಾಂಗ್ ರಾಷ್ಟ್ರಮಟ್ಟದ ಕ್ರೀಡಾ ಸ್ಪರ್ಧೆಗಳಲ್ಲಿ ಸಾಧನೆ ಮಾಡಿ ಜಿಲ್ಲೆಗೆ ಹೆಮ್ಮೆ ತಂದಿದ್ದಾರೆ.
ಇತ್ತೀಚೆಗೆ ಜಮ್ಮು ಕಾಶ್ಮೀರದ ಗುಲ್ಮಾರ್ಗ್ನಲ್ಲಿ ನಡೆದ ಖೇಲೋ ಇಂಡಿಯಾ ಕ್ರೀಡಾಕೂಟದಲ್ಲಿ ಕರ್ನಾಟಕ ರಾಜ್ಯ ತಂಡವನ್ನು ಪ್ರತಿನಿಧಿಸಿದ್ದ ಶ್ರೀಶಾ ಐಸ್ ಕರ್ಲಿಂಗ್ ವಿಭಾಗದಲ್ಲಿ ಚಿನ್ನ ಗೆದ್ದ ತಂಡದ ಸದಸ್ಯೆ. ವೈಯುಕ್ತಿಕ ವಿಭಾಗದಲ್ಲಿ ಚಿನ್ನ ಮತ್ತು ಕಂಚಿನ ಪದಕ ಗಳಿಸಿ ಸಾಧನೆ ತೋರಿದ್ದಾರೆ.
ಮೂಡಿಗೆರೆ ನಳಂದ ಪಿ.ಯು. ಕಾಲೇಜಿನಲ್ಲಿ ದ್ವಿತೀಯ ಪಿ.ಯು.ಸಿ. ವಿಜ್ಞಾನ ವಿಭಾಗದಲ್ಲಿ ವ್ಯಾಸಾಂಗ ಮಾಡುತ್ತಿರುವ ಶ್ರೀಶಾ ಕ್ರೀಡೆ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಅತೀವ ಆಸಕ್ತಿಯಿಂದ ತೊಡಗಿಸಿಕೊಂಡಿದ್ದಾಳೆ.
ಕರಾಟೆಯಲ್ಲಿ ಬ್ಲಾಕ್ ಬೆಲ್ಟ್ ಪಡೆದಿದ್ದು, ಭಾರತ್ ಸ್ಕೌಟ್ಸ್ ಅಂಡ್ ಗೈಡ್ಸ್ ನಲ್ಲಿ ರಾಜ್ಯ ಪ್ರಶಸ್ತಿ ಪಡೆದಿದ್ದಾಳೆ. ಭಾರತ್ ಸ್ಕೌಟ್ಸ್ ಅಂಡ್ ಗೈಡ್ಸ್ ರಾಜ್ಯಮಟ್ಟದ ಗೀತಾ ಗಾಯನ ಸ್ಪರ್ಧೆಯಲ್ಲಿ ಪ್ರಥಮ, ಭರತನಾಟ್ಯದಲ್ಲಿ ದ್ವಿತೀಯ ಸ್ಥಾನ, ಜಂಪ್ ರೋಪ್ ಸ್ಪರ್ಧೆಯಲ್ಲಿ ಕಂಚಿನ ಪದಕ ಗಳಿಸಿದ್ದಾರೆ.
ಶ್ರೀಶಾ ಚಿಕ್ಕಮಗಳೂರಿನ ವಿವೇಕಾನಂದ ಫಿಟ್ನೆಸ್ ಅಕಾಡೆಮಿಯ ಗಿರೀಶ್ ಮತ್ತು ಮ್ಯಾನೇಜ್ ಮೆಂಟ್ ಆಫೀಸರ್ ಅಬ್ದುಲ್ ರಜಾಕ್ ಅವರಿಂದ ತರಬೇತಿ ಪಡೆದಿರುತ್ತಾರೆ.
ಶ್ರೀಶಾ ಮೂಡಿಗೆರೆ ತಾಲ್ಲೂಕಿನ ದಾರದಹಳ್ಳಿ ಪ್ರೌಢಶಾಲೆ ಇಂಗ್ಲೀಷ್ ಶಿಕ್ಷಕಿ ಸಿ.ಜಿ. ಮೀನಾ ಮತ್ತು ಮೋಹನ್ ರಾಜು ಅವರ ಪುತ್ರಿ. ಪೋಷಕರು ತಮ್ಮ ಮಗಳ ಸಾಧನೆಗೆ ಸದಾ ಪ್ರೋತ್ಸಾಹ ನೀಡುತ್ತಾ ಬಂದಿದ್ದಾರೆ.
ಶ್ರೀಶಾ ಸಾಧನೆಯನ್ನು ಗುರುತಿಸಿ ಇತ್ತೀಚೆಗೆ ಮೂಡಿಗೆರೆಯಲ್ಲಿ ನಡೆದ ತಾಲ್ಲೂಕು ಉತ್ಸವದಲ್ಲಿ ಶಾಸಕರಾದ ಎಂ.ಪಿ. ಕುಮಾರಸ್ವಾಮಿಯವರು ಗೌರವಿಸಿದ್ದಾರೆ. ಚಿಕ್ಕಮಗಳೂರು ಶಾಸಕ ಸಿ.ಟಿ.ರವಿಯವರು, ಜಿಲ್ಲಾಧಿಕಾರಿ ಕೆ.ಎನ್. ರಮೇಶ್ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ಅವರು ಪುರಸ್ಕಾರ ನೀಡಿ ಪ್ರೋತ್ಸಾಹಿಸಿದ್ದಾರೆ.
ಶ್ರೀಶಾ ತನ್ನ ಸಾಧನೆಯಿಂದ ಹೆತ್ತವರಿಗೆ, ಮೂಡಿಗೆರೆ ನಳಂದ ವಿದ್ಯಾಸಂಸ್ಥೆಗೆ, ಚಿಕ್ಕಮಗಳೂರು ವಿವೇಕಾನಂದ ಫಿಟ್ನೇಸ್ ಸೆಂಟರ್ ಗೆ, ಮೂಡಿಗೆರೆ ತಾಲ್ಲೂಕು ಮತ್ತು ಚಿಕ್ಕಮಗಳೂರು ಜಿಲ್ಲೆಗೆ ಹೆಮ್ಮೆ ತಂದಿದ್ದು, ಭವಿಷ್ಯದಲ್ಲಿ ಅವರ ಸಾಧನೆ ಇನ್ನಷ್ಟು ಉನ್ನತಿಯೆಡೆಗೆ ಸಾಗಲಿ ಎಂದು ಶುಭ ಹಾರೈಸೋಣ.