ಮೂಡಿಗೆರೆ ತಾಲೂಕಿನ ಬಿಳಗುಳ ಗ್ರಾಮದಲ್ಲಿ ಜಲಜೀವನ್ ಮಿಷನ್ ಯೋಜನೆಯ ಕಾಮಗಾರಿ ನಡೆಯುತ್ತಿದ್ದು, ಕಾಮಗಾರಿ ಸಂಪೂರ್ಣ ಕಳೆಪೆಯಾಗಿ ಮಾಡಲಾಗುತ್ತಿದೆ. ಈ ಬಗ್ಗೆ ಸಮಗ್ರ ತನಿಖೆ ನಡೆಸಬೇಕೆಂದು ಒತ್ತಾಯಿಸಿ ಯೋಜನೆ ಜನರಿಗಾಗಿ ಹೋರಾಟ ವೇದಿಕೆಯ ಬಿಳಗುಳ ಗ್ರಾಮಸ್ಥರು ಶುಕ್ರವಾರ ಮೂಡಿಗೆರೆ ತಾ.ಪಂ. ಕಚೇರಿ ಎದುರು ಪ್ರತಿಭಟನೆ ನಡೆಸಿ ತಾ.ಪಂ. ಇಒ ಹರ್ಷಕುಮಾರ್ ಅವರಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಚಂದ್ರು ಒಡೆಯರ್ ಮಾತನಾಡಿ, ಕೇಂದ್ರ ಸರಕಾರದ ಮಹತ್ವಾಕಾಂಕ್ಷಿ ಜಲ ಜೀವನ್ ಯೋಜನೆಯಡಿ 2 ಕೋಟಿಗೂ ಅಧಿಕ ಅನುದಾನ ಹೆಸಗಲ್ ಗ್ರಾ.ಪಂ. ವ್ಯಾಪ್ತಿಗೆ ಬಿಡುಗಡೆಯಾಗಿದೆ. ಕಾಮಗಾರಿ ಪ್ರಾರಂಭಿಸಿದ್ದು, ಅಂದಾಜು ಪಟ್ಟಿಯಲ್ಲಿರುವ ಯವುದೇ ಮಾನದಂಡ ಬಳಸಿಲ್ಲ. ಈ ಬಗ್ಗೆ ಹೆಸಗಲ್ ಗ್ರಾ.ಪಂ. ಸದಸ್ಯರ ಗಮನಕ್ಕೆ ತಂದಿದ್ದು, ಕಳೆದ ಶುಕ್ರವಾರ ಸಭೆ ನಡೆಸಿ ಕಾಮಗಾರಿ ಕಳಪೆ ಬಗ್ಗೆ ಗ್ರಾಮಸ್ಥರು ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಕೂಡಲೇ ಕಾಮಗಾರಿ ನಿಲ್ಲಿಸಲು ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು.
ಮೂಡಿಗೆರೆ ತಾ.ಪಂ. ಇಒ ಹರ್ಷಕುಮಾರ್ ಅವರು ಕ್ರಮ ಕೈಗೊಂಡು ಗುಣಮಟ್ಟದ ಕಾಮಗಾರಿ ನಡೆಸಲು ಕ್ರಮ ವಹಿಸಬೇಕು. ಅಲ್ಲದೇ ಕಳಪೆ ಕಾಮಗಾರಿ ಮಾಡಿದ ಗುತ್ತಿಗೆದಾರರನ್ನು ಕಪ್ಪು ಪಟ್ಟಿಗೆ ಸೇರಿಸುವ ಮೂಲಕ ಎಂಜಿನಿಯರ್ನ್ನು ಅಮಾನತುಪಡಿಸಬೇಕೆಂದು ಒತ್ತಾಯಿಸಿದರು.
ಮನವಿ ಸ್ವೀಕರಿಸಿದ ಬಳಿಕ ತಾ.ಪಂ. ಇಒ ಹರ್ಷಕುಮಾರ್ ಮಾತನಾಡಿ, ಮಾ.2ಕ್ಕೆ ಖುದ್ದು ತಾನೆ ಬೇಟಿ ಮಾಡಿ ಪರಿಶೀಲನೆ ನಡೆಸಿ ಗುಣಮಟ್ಟದ ಕಾಮಗಾರಿ ನಡೆಸಲು ಸೂಚಿಸುತ್ತೇನೆ. ಕಳಪೆ ಕಾಮಗಾರಿ ಬಗ್ಗೆ ತನಿಖೆ ಕೈಗೊಂಡು ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲು ಮೇಲಾಧಿಕಾರಿಗಳಿಗೆ ಪತ್ರ ಬರೆಯಲಾಗುವುದು ಎಂದು ಹೇಳಿದರು. ಬಳಿಕ ಪ್ರತಿಭಟನೆ ಹಿಂಪಡೆದರು.
ಹೆಸಗಲ್ ಗ್ರಾ.ಪಂ. ಸದಸ್ಯ ಪೂರ್ಣೇಶ್, ಬಿಳಗುಳ ಗ್ರಾಮಸ್ಥರಾದ ಸಂಪತ್ಕುಮಾರ್, ಸಲ್ಲಾವುದ್ದೀನ್, ಮೋಹನ್, ಅಮರನಾಥ್, ಅಣ್ಣಪ್ಪ, ಅರುಣ್ಕುಮಾರ್, ಮಂಜುಳ, ಚಂದ್ರಾವತಿ ಮತ್ತಿತರರಿದ್ದರು.
https://www.darpananews.com/2023/02/25/coffee-pulpur-waste-to-japavathi-and-hemavathi-river/