ಕಡಬ ಸಮೀಪದಲ್ಲಿ ಇತ್ತೀಚೆಗೆ ಇಬ್ಬರು ವ್ಯಕ್ತಿಗಳನ್ನು ಕೊಂದು ಹಾಕಿದ್ದ ಕಾಡಾನೆಯನ್ನು ಕಡಬದಲ್ಲಿ ಸೆರೆ ಹಿಡಿಯಲಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಕಡಬ ಸಮೀಪದಲ್ಲಿ ಈಗ್ಗೆ ಒಂದು ವಾರದ ಹಿಂದೆ ಕಾಡಾನೆಯೊಂದು ಇಬ್ಬರು ವ್ಯಕ್ತಿಗಳ ಮೇಲೆ ದಾಳಿ ಮಾಡಿ ಕೊಂದು ಹಾಕಿತ್ತು.
ಕಡಬ ತಾಲ್ಲೂಕಿನ ರೆಂಜಿಲಾಡಿ ಗ್ರಾಮದ ರಮೇಶ್ ರೈ (55 ವರ್ಷ) ಹಾಗೂ ರಂಜಿತಾ ( 21 ವರ್ಷ) ಎಂಬುವವರ ಮೇಲೆ ಒಂದೇ ಸ್ಥಳದಲ್ಲಿ ಕಾಡಾನೆ ದಾಳಿ ಮಾಡಿತ್ತು.
ಸ್ಥಳೀಯ ಸಹಕಾರ ಸಂಘದಲ್ಲಿ ಸಿಬ್ಬಂದಿಯಾಗಿದ್ದ ರಂಜಿತಾ ಕೆಲಸಕ್ಕೆ ತೆರಳುವ ಸಂದರ್ಭದಲ್ಲಿ ಕಾಡಾನೆ ದಾಳಿ ಮಾಡಿತ್ತು, ಅದೇ ಸಂದರ್ಭದಲ್ಲಿ ಸಮೀಪದಲ್ಲಿದ್ದ ರಮೇಸ್ ರೈ ಅವರು ಕೂಗಿಕೊಂಡಾಗ ಅವರ ಮೇಲೂ ದಾಳಿ ಮಾಡಿತ್ತು.
ಇಬ್ಬರು ಕಾಡಾನೆ ದಾಳಿಗೆ ಬಲಿಯಾದ ಸಂದರ್ಭದಲ್ಲಿ ಸಾರ್ವಜನಿಕರ ಆಕ್ರೋಶ ಕಟ್ಟೆಯೊಡೆದು ತೀವ್ರ ಪ್ರತಿಭಟನೆ ನಡೆಸಿದ್ದರು. ಇದೀಗ ಸಾರ್ವಜನಿಕರ ಪ್ರತಿಭಟನೆಗೆ ಮಣಿದು ಅರಣ್ಯ ಇಲಾಖೆ ಕಾಡಾನೆಯನ್ನು ಸೆರೆ ಹಿಡಿದಿದ್ದಾರೆ. ಐದು ಸಾಕಾನೆಗಳ ಸಹಾಯದೊಂದಿಗೆ ಕಾರ್ಯಾಚರಣೆ ನಡೆಸಿ ಕಾಡಾನೆಯನ್ನು ಹಿಡಿದು ಸಾಗಿಸಲಾಗಿದೆ.