ಅರಣ್ಯ ಪ್ರದೇಶದಲ್ಲಿ ಹಬ್ಬಿದ್ದ ಕಾಡ್ಗಿಚ್ಚು ನಂದಿಸಲು ತೆರಳಿದ್ದ ಅರಣ್ಯ ಸಿಬ್ಬಂದಿಯೊಬ್ಬಳು ಬೆಂಕಿಯ ಉರಿಗೆ ಸಿಲುಕಿ ತೀವ್ರವಾಗಿ ಗಾಯಗೊಂಡು ಜೀವನ್ಮರಣೆ ಸ್ಥಿತಿಗೆ ತಲುಪಿದ್ದಾರೆ.
ಸಕಲೇಶಪುರ ತಾಲ್ಲೂಕು ಕಾಡುಮನೆ ಎಸ್ಟೇಟ್ ಬಳಿ ಅರಣ್ಯಕ್ಕೆ ಹಬ್ಬಿದ್ದ ಬೆಂಕಿಯನ್ನು ನಂದಿಸಲು ತೆರಳಿದ್ದಾಗ ಈ ಘಟನೆ ನಡೆದಿದೆ.
ಉಪವಲಯ ಅರಣ್ಯಾಧಿಕಾರಿ ಮಂಜುನಾಥ್, ಫಾರೆಸ್ಟ್ ಗಾರ್ಡ್ ಸುಂದರೇಶ್ ಬೆಂಕಿಯ ಕೆನ್ನಾಲಿಗೆಗೆ ಸಿಲುಕಿ ತೀವ್ರ ಗಾಯಗೊಂಡಿದ್ದಾರೆ. ಫಾರೆಸ್ಟ್ ವಾಚ್ ಮನ್ ಗಳಾದ ತುಂಗೇಶ್ ಮತ್ತು ಮಹೇಶ್ ಎಂಬುವವರಿಗೆ ಸಣ್ಣಪುಟ್ಟ ಗಾಯಗಳಾಗಿವೆ.
ರಸ್ತೆ ಸಂಪರ್ಕವಿಲ್ಲದ ದಟ್ಟ ಅರಣ್ಯದಲ್ಲಿ ಈ ಸಿಬ್ಬಂದಿಗಳು ಬೆಂಕಿಯ ಉರಿಯೊಳಗೆ ಸಿಲುಕಿದ್ದರು. ಕೊನೆಗೆ ಇತರೆ ಅರಣ್ಯ ಸಿಬ್ಬಂದಿ ಸ್ಥಳೀಯರ ಸಹಾಯದಿಂದ ನಾಲ್ವರನ್ನು ಸುಮಾರು 12 ಕಿಲೋಮೀಟರ್ ದೂರ ಬಟ್ಟೆಯಲ್ಲಿ ಡೋಲಿ ಮಾಡಿ ಅದರಲ್ಲಿ ಹೊತ್ತು ನಂತರ ಅಂಬುಲೆನ್ಸ್ ಮೂಲಕ ಆಸ್ಪತ್ರೆಗೆ ಸಾಗಿಸಲಾಗಿತ್ತು.
ತೀವ್ರವಾಗಿ ಗಾಯಗೊಂಡ ಇಬ್ಬರು ಸಿಬ್ಬಂದಿಗಳನ್ನು ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು ತೀವ್ರನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಉಳಿದಿಬ್ಬರನ್ನು ಹಾಸನದ ಸ್ಪರ್ಶ್ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಅರಣ್ಯಕ್ಕೆ ಬೆಂಕಿ ಬಿದ್ದಾಗ ಅರಣ್ಯ ರಕ್ಷಣೆಗೆ ತಮ್ಮ ಜೀವನ ಹಂಗು ತೊರೆದು ಕೆಲಸ ಮಾಡುವ ಅರಣ್ಯ ಸಿಬ್ಬಂದಿಗಳಿಗೆ ಒದಗಿರುವ ಸ್ಥಿತಿಯನ್ನು ಕಂಡು ಸಾರ್ವಜನಿಕರು ಮರುಗಿದ್ದಾರೆ.