ಬೈಕಿನ ಹಿಂಬದಿಯಲ್ಲಿ ಕೂತಿದ್ದ ಮಹಿಳೆಯ ಸೀರೆ ಸೆರಗು ಬೈಕಿನ ಚಕ್ರಕ್ಕೆ ಸಿಲುಕಿ ಕಾಲು ಕೂಡ ಬೈಕಿನ ಚಕ್ರದೊಳಗೆ ಸಿಲುಕಿಕೊಂಡು ಸುಮಾರು ಒಂದು ಗಂಟೆಗಳ ಕಾಲ ಮಹಿಳೆ ನರಳಾಡಿದ ಘಟನೆ ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ಪಟ್ಟಣದಲ್ಲಿ ನಡೆದಿದೆ.
ತರೀಕೆರೆ ಪಟ್ಟಣ ಸಮೀಪದ ಇಟ್ಟಿಗೆ ಗ್ರಾಮದ ಯಶೋದಾ ಬಾಯಿ ಎಂಬ ಮಹಿಳೆ ಬೈಕಿನಲ್ಲಿ ತರೀಕೆರೆ ಪಟ್ಟಣಕ್ಕೆ ಬರುವಾಗ ಈ ದುರ್ಘಟನೆ ಸಂಭವಿಸಿದೆ. ಬೈಕಿನ ಹಿಂದೆ ಕೂತಿದ್ದ ಮಹಿಳೆಯ ಸೀರೆ ಸೆರಗು ಹಾಗೂ ನೆರಿಗೆ ಬೈಕಿನ ಚಕ್ರಕ್ಕೆ ಸಿಲುಕಿ, ಕಾಲು ಕೂಡ ಚಕ್ರದೊಳಗೆ ಸಿಲುಕಿಕೊಂಡಿದೆ.
ಕೊಡಲೇ ಬೈಕ್ ಸವಾರ ಹಾಗೂ ಮಹಿಳೆ ಕೆಳಕ್ಕೆ ಬಿದ್ದಿದ್ದಾರೆ. ಮಹಿಳೆಯ ಕಾಲು ಗೇರ್ ಬಾಕ್ಸ್ ಮೂಲಕ ಚಕ್ರದ ಒಳಗೆ ಸಿಲುಕಿಕೊಂಡಿದೆ. ಸುಮಾರು ಒಂದು ಗಂಟೆಗಳ ಕಾಲ ಮಹಿಳೆ ನರಳಾಡಿದ್ದಾರೆ. ಬಳಿಕ ಬೈಕಿನ ಚೈನ್ ಕಟ್ ಮಾಡಿ ಗೇರ್ ಬಾಕ್ಸ್ ಬಿಚ್ಚಿ ಮಹಿಳೆಯ ಕಾಲನ್ನು ಹೊರ ತೆಗೆದಿದ್ದಾರೆ. ಕಾಲಿಗೆ ಗಂಭೀರ ಗಾಯವಾಗಿ ತೀವ್ರ ರಕ್ತಸ್ರಾವವಾಗಿದೆ.
ಸೀರೆಯುಟ್ಟ ಮಹಿಳೆಯರು ಬೈಕಿನ ಹಿಂಬದಿಯಲ್ಲಿ ಕುಳಿತು ಹೋಗುವಾಗ ತೀವ್ರವಾದ ಎಚ್ಚರಿಕೆಯಿಂದ ಇರಬೇಕಾಗಿದೆ.