ಪ್ರತಿ ವರ್ಷದಂತೆ ಈ ಬಾರಿಯೂ ಕೂಡ ಎಲ್ಲಾ ತುಳು ಭಾಷಿಗರನ್ನು ಒಗ್ಗೂಡಿಸುವ ಸಲುವಾಗಿ ಮೂಡಿಗೆರೆ ಪಟ್ಟಣದ ಅಡ್ಯಂತಾಯ ರಂಗಮಂದಿರದಲ್ಲಿ ಫೆಬ್ರುವರಿ 10ರಂದು ಶುಕ್ರವಾರ ಮಧ್ಯಾಹ್ನ 3 ಗಂಟೆಗೆ 14 ನೇ ವರ್ಷದ ತುಳು ವೈಭವೋ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ತುಳುಕೂಟದ ಅಧ್ಯಕ್ಷ ಯೋಗೇಶ್ ಪೂಜಾರಿ ಹೇಳಿದರು.
ಅವರು ಮಂಗಳವಾರ ಪಟ್ಟಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಮಲೆನಾಡಿನಲ್ಲಿ ವಾಸವಿರುವ ಎಲ್ಲಾ ಧರ್ಮೀಯ ತುಳು ಭಾಷಿಗರು ಒಂದೆಡೆ ಸೇರಿ ತುಳುಕೂಟ ರಚಿಸಿ ಕಳೆದ 13 ವರ್ಷದಿಂದ ತುಳು ವೈಭವೋ ಕಾರ್ಯಕ್ರಮ ಯಶಸ್ವಿಯಾಗಿ ಪೂರೈಸಿದ್ದು, ಸಮಾಜಮುಖಿ ಕೆಲಸ ನಿರ್ವಹಿಸಿಕೊಂಡು ಬರುವ ಮೂಲಕ ಭಾಷೆ ಬೆಳವಣಿಗೆಗೆ ಉತ್ತೇಜನ ನೀಡಲಾಗುತ್ತಿದೆ.
ಅಂದು ಮಧ್ಯಾಹ್ನ 3 ಗಂಟೆಗೆ ಸ್ಥಳೀಯ ಕಲಾವಿದರಿಂದ ಸಾಂಸ್ಕøತಿಕ ನೃತ್ಯ ಸ್ಪರ್ಧೆ ನಡೆಯಲಿದೆ. 4.30 ಗಂಟೆಗೆ ಸಭಾ ಕಾರ್ಯಕ್ರಮ ನಡೆಯಲಿದೆ. ಬಳಿಕ ರಾಜ್ಯ ಪ್ರಶಸ್ತಿ ಪುರಸ್ಕೃತ ತೆಲಿಕೆದ ಬೊಳ್ಳಿ ಡಾ.ದೇವದಾಸ್ ಕಾಫಿಕಾಡ್ ಅವರು ರಚಿಸಿ, ನಟಿಸಿ, ನಿರ್ದೇಶಿಸಿದ “ನಾಯಿದ ಬೀಲ” ಎಂಬ ತುಳು ಹಾಸ್ಯಮಯ ನಾಟಕ ನಡೆಯಲಿದೆ ಎಂದು ಹೇಳಿದರು.
ತುಳುನಾಡ ಸಂಸ್ಕøತಿ ಸಾಂಪ್ರದಾಯಗಳ ವಿಮರ್ಶಕ ತಮ್ಮಣ್ಣಶೆಟ್ಟಿ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಉಪ ಸಭಾಪತಿ ಎಂ.ಕೆ.ಪ್ರಾಣೇಶ್, ಜಿಲ್ಲಾ ಉಸ್ತುವಾರಿ ಸಚಿವ ಭೈರತಿ ಬಸವರಾಜು, ಶಾಸಕ ಎಂ.ಪಿ.ಕುಮಾರಸ್ವಾಮಿ, ಪ.ಪಂ. ಅಧ್ಯಕ್ಷ ಜಿ.ಬಿ.ಧರ್ಮಪಾಲ್ ಸೇರಿದಂತೆ ಅನೇಕ ಗಣ್ಯರು ಪಾಲ್ಗೊಳ್ಳಲಿದ್ದಾರೆ. ತುಳು ಭಾಷಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕೆಂದು ಮನವಿ ಮಾಡಿದರು.
ತುಳುಕೂಟದ ಕಾರ್ಯದರ್ಶಿ ಪಿ.ಕೆ.ಹಮೀದ್, ಸುಂದರ್ ಬಿಳಗುಳ, ಅಶೋಕ್ ಎನ್. ಶೆಟ್ಟಿ, ಡಿ.ದಿನಕರ ಆಚಾರ್ಯ, ಜಾನ್ ಡಿಸೋಜಾ, ಪಿ. ವಿಶ್ವಕುಮಾರ್, ವಿನೋದ್ ಕುಮಾರ್ ಶೆಟ್ಟಿ, ಜಾನಪ್ಪ, ಡಿ.ಕೆ.ಕೇಶವ ಸುವರ್ಣ, ವಸಂತ ಪೂಜಾರಿ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.