ಕನ್ನಡ ಜಾನಪದ ಪರಿಷತ್ತಿನ ಮೂಡಿಗೆರೆ ತಾಲೂಕು ಗೋಣಿಬೀಡು ಹೋಬಳಿ ಅಧ್ಯಕ್ಷರಾಗಿ ಸುಂದರೇಶ್ ಅಧಿಕಾರ ವಹಿಸಿಕೊಂಡಿದ್ದಾರೆ.
ಶುಕ್ರವಾರ ಕನ್ನಡ ಜಾನಪದ ಪರಿಷತ್ತಿನ ಗೋಣಿಬೀಡು ಹೋಬಳಿ ಘಟಕದ ಪದಗ್ರಹಣ ಸಮಾರಂಭ ನೆರವೇರಿತು. ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಕನ್ನಡ ಜಾನಪದ ಪರಿಷತ್ ಜಿಲ್ಲಾಧ್ಯಕ್ಷ ಪೂರ್ಣೇಶ್ ಮೂಲೆಗುಂಪಾಗಿ ಎಲೆಮರೆಕಾಯಿಯಂತಿರುವ ಜಾನಪದ ಕಲಾವಿದರನ್ನು ಗುರುತಿಸಿ ಮುಖ್ಯವಾಹಿನಿಗೆ ತರುವುದೇ ಕನ್ನಡ ಜಾನಪದ ಪರಿಷತ್ತಿನ ಉದ್ದೇಶವಾಗಿದೆ ಎಂದರು. ಜಾನಪದ ಸೊಗಡು ಗ್ರಾಮೀಣ ಪ್ರದೇಶದಲ್ಲಿ ಮಾತ್ರ ಕಾಣಲು ಸಾಧ್ಯವಿದೆ. ಅಂತಹ ಕಲೆಯನ್ನು ಕೇವಲ ಗ್ರಾಮೀಣ ಭಾಗಕ್ಕೆ ಮೀಸಲಿರಿಸದೇ ಮುಖ್ಯವಾಹಿನಿಗೆ ತರಬೇಕು. ಇದರಿಂದ ಜಾನಪದ ಕಲಾವಿದರಿಗೆ ಪ್ರೋತ್ಸಾಹ ನೀಡಿದಂತಾಗುತ್ತದೆ. ಅಲ್ಲದೇ ಜಾನಪದ ಸೊಗಡನ್ನು ಉಳಿಸುವ ಕೆಲಸ ಮಾಡಿದಂತಾಗುತ್ತದೆ ಎಂದು ಹೇಳಿದರು.
ನೂತನ ಅಧ್ಯಕ್ಷ ಸುಂದರೇಶ್ ಮಾತನಾಡಿ, ಜಾನಪದ ಕಲೆಯನ್ನು ಪೋಷಿಸುವುದು, ಕಲಾವಿದರ ಸರ್ವೆ ನಡೆಸಿ ಗುರುತಿಸುವುದು, ಹಳ್ಳಿ ಹಳ್ಳಿಗಳಲ್ಲಿ, ಶಾಲೆಗಳ ಮುಖಾಂತರ ಜಾನಪದ ಉಳಿಸುವ ಪರಿಷತ್ತಿನ ಉದ್ದೇಶವನ್ನು ಪೂರ್ಣಗೊಳಿಸಲು ಸಂಪೂರ್ಣ ಶ್ರಮ ವಹಿಸುವುದಾಗಿ ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕನ್ನಡ ಜಾನಪದ ಪರಿಷತ್ತಿನ ತಾಲೂಕು ಅಧ್ಯಕ್ಷೆ ಭಾನುಮತಿ ವಹಿಸಿದ್ದರು.
ಜಿಲ್ಲಾ ಸಂಚಾಲಕಿ ಕಮಲಾಕ್ಷಮ್ಮ, ಕಾರ್ಯದರ್ಶಿ ಸುಂದರೇಶ್, ಪ್ರಧಾನ ಕಾರ್ಯದರ್ಶಿ ಸುಧಾಕರ್, ಕಸಬಾ ಹೋಬಳಿ ಅಧ್ಯಕ್ಷೆ ಸುಧಾ ಮಂಜುನಾಥ್ ಮತ್ತಿತರರಿದ್ದರು.