ಮಹಾ ಶಿವರಾತ್ರಿ ಹಿನ್ನಲೆಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಕ್ಕೆ ಹೊರ ಜಿಲ್ಲೆಗಳಿಂದ ಪಾದಯಾತ್ರೆಯಲ್ಲಿ ಸಾಗುವ ಭಕ್ತಾಧಿಗಳಿಗೆ ಚಿಕ್ಕಮಗಳೂರು ಜಿಲ್ಲೆಯ ವ್ಯಾಪ್ತಿಯಲ್ಲಿ ಹಾದುಹೋಗುವಾಗ ಸೂಕ್ತ ವ್ಯವಸ್ಥೆ ಕಲ್ಪಿಸಲು ಚಿಕ್ಕಮಗಳೂರು ಜಿಲ್ಲಾ ಪಂಚಾಯಿತಿ ಸಿ.ಇ.ಓ. ಜಿ. ಪ್ರಭು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಅವರು ಮೂಡಿಗೆರೆ ಪಟ್ಟಣದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ವಿವಿಧ ಇಲಾಖೆ ಅಧಿಕಾರಿಗಳು ಹಾಗೂ ಸಾರ್ವಜನಿಕ ಸಭೆಯಲ್ಲಿ ಈ ಬಗ್ಗೆ ಮಾಹಿತಿ ನೀಡಿದರು.
ಸಭೆಯಲ್ಲಿ ಕೊಟ್ಟಿಗೆಹಾರ ಗೆಳೆಯರ ಬಳಗದ ಸಂಜಯ್ ಕೊಟ್ಟಿಗೆಹಾರ ಮಾತನಾಡಿ, ಕಳೆದ ವರ್ಷ ತಾಲೂಕಿನ ಗೋಣಿಬೀಡಿನಿಂದ ಚಾರ್ಮಾಡಿ ಘಾಟ್ ರಸ್ತೆವರೆಗೆ ಪ್ಲಾಸ್ಟಿಕ್ ಬಾಟಲಿ ಎಸೆಯುವುದು, ಮಲಮೂತ್ರ ವಿಸರ್ಜನೆ, ಅಲ್ಲಲ್ಲಿ ತೆರೆದಿದ್ದ ಸೇವಾ ಕೇಂದ್ರಗಳಲ್ಲಿ ಉಳಿದ ಆಹಾರ ಪದಾರ್ಥ ಎಲ್ಲೆಂದರಲ್ಲಿ ಎಸೆದಿದ್ದರಿಂದ ರಸ್ತೆಯುದ್ದ ತ್ಯಾಜ್ಯಗಳ ತಾಣವಾಗಿ ಪರಿಣಮಿಸಿತ್ತು. ಅಲ್ಲದೇ ಕೆಟ್ಟ ಆಹಾರ ತಿಂದ ಅನೇಕ ಜಾನುವಾರುಗಳು ಪ್ರಾಣ ಕಳೆದುಕೊಂಡಿದ್ದವು. ಇಂತಹ ಘಟನೆ ಮರುಕಳಿಸದಂತೆ ಸಂಪೂರ್ಣ ತಯಾರಿ ನಡೆಸುವುದು ಸೂಕ್ತ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಸಭೆಯಲ್ಲಿ ಅನೇಕ ವಿಚಾರಗಳ ಚರ್ಚೆ ನಡೆಸಿದ ಬಳಿಕ ಜಿ.ಪಂ. ಸಿಇಒ ಜಿ.ಪ್ರಭು ಮಾತನಾಡಿ, ಗೋಣಿಬೀಡಿನಿಂದ ಚಾರ್ಮಾಡಿ ಘಾಟ್ ವರೆಗೆ ಸ್ವಚ್ಛತೆ ಕಾಪಾಡಿಕೊಳ್ಳಲು ಆಯಾ ವ್ಯಾಪ್ತಿಯ ಗ್ರಾ.ಪಂ. ನಿಗಾ ವಹಿಸಬೇಕು. ಅರ್ಧ ಕಿ,ಮೀಗೆ ಒಂದೊಂದು ಕಸದ ತೊಟ್ಟಿ ಹಾಕಬೇಕು. ಪ್ಲಾಸ್ಟಿಕ್ ಬಳಿಕೆ ಸಂಪೂರ್ಣ ನಿಷೇಧಿಸಬೇಕು. 2 ಕಿ.ಮೀಗೊಂದು ಕಸ ವಿಲೇವಾರಿ ವಾಹನ ತಿರುಗಾಡಬೇಕು. ಮಲಮೂತ್ರ ವಿಸರ್ಜಿಸಲು 5 ಕಿ.ಮೀ ಒಂದು ತಾತ್ಕಾಲಿಕ ಶೌಚಾಲಯ, 6 ಕಡೆ ಆರೋಗ್ಯ ತಪಾಸಣೆ ಕ್ಯಾಂಪ್ಗಳು, ಸೇವಾ ಕೇಂದ್ರದಲ್ಲಿ ಸ್ವಚ್ಛತೆ ಕಾಪಾಡಿಕೊಳ್ಳಲು ಸೂಚನೆ ನೀಡಬೇಕು. ಪೊಲೀಸ್ ಗಸ್ತು ವಾಹನ ನಿರಂತರ ಸಂಚಾರ ನಡೆಸುತ್ತಿರಬೇಕು. ಪಾದಯಾತ್ರಿಗಳಿಗೆ ಯಾವುದೇ ತೊಂದರೆಯಾಗದಂತೆ ಎಲ್ಲಾ ವ್ಯವಸ್ಥೆ ಮಾಡಿಕೊಡಬೇಕು. ನಿಯಮ ಪಾಲಿಸದಿರುವವರಿಗೆ 500ರೂ ದಂಡ ಹಾಕಬೇಕೆಂದು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.
ತಾ.ಪಂ. ಇಓ ಹರ್ಷಕುಮಾರ್ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಸಂಘ ಸಂಸ್ಥೆಯ ಮುಖಂಡರು ಉಪಸ್ಥಿತರಿದ್ದರು.