ರಸ್ತೆ ಕಾಮಗಾರಿಗೆ ಅನುದಾನ ಬಿಡುಗಡೆಯಾಗಿದ್ದರೂ ರಸ್ತೆ ಕಾಮಗಾರಿ ಪ್ರಾರಂಭಿಸಲು ಮೀನಾಮೇಷ ಎಣಿಸುತ್ತಿರುವುದನ್ನು ಖಂಡಿಸಿ ಗ್ರಾಮಸ್ಥರು ಚುನಾವಣೆ ಬಹಿಷ್ಕಾರಕ್ಕೆ ಮುಂದಾಗಿದ್ದಾರೆ. ಚಿಕ್ಕಮಗಳೂರು ಜಿಲ್ಲೆಯ, ಕಳಸ ತಾಲ್ಲೂಕಿನ ಶಂಕರಕೂಡಿಗೆ ಗ್ರಾಮಸ್ಥರ ನಿರ್ಧಾರ.
ಶಂಕರಕೂಡಿಗೆ ರಸ್ತೆಗೆ ಕಾಂಕ್ರೀಟ್ ಹಾಕಲು ಸರ್ಕಾರದಿಂದ 70 ಲಕ್ಷ ಅನುದಾನ ಬಿಡುಗಡೆಯಾಗಿದೆ. ಆದರೆ ಗುತ್ತಿಗೆದಾರರು ರಸ್ತೆಯನ್ನು ಅಗೆದು ಹಾಕಿದ್ದು, ತಿಂಗಳುಗಳು ಕಳೆದರೂ ಇತ್ತ ತಲೆಹಾಕಿಲ್ಲ. ಗ್ರಾಮಸ್ಥರು ಅಗೆದುಹಾಕಿರುವ ರಸ್ತೆಯಲ್ಲಿ ಸಂಚರಿಸಲು ಸಾಧ್ಯವಾಗದೇ ಪರಿತಪಿಸುತ್ತಿದ್ದಾರೆ. ವಾಹನ ಚಾಲಕರ ಗೋಳು ಹೇಳತೀರದಾಗಿದೆ.
ಎಷ್ಟೇ ಮನವಿ ಮಾಡಿದರು ಸ್ಪಂದನೆ ಸಿಗದ ಕಾರಣ ಇದೀಗ ಗ್ರಾಮಸ್ಥರು ಹೋರಾಟದ ಹಾದಿ ಹಿಡಿದಿದ್ದಾರೆ. ಊರ ಪ್ರವೇಶದಲ್ಲಿ ಬ್ಯಾನರ್ ಅಳವಡಿಸಿ ಚುನಾವಣೆ ಬಹಿಷ್ಕಾರದ ಎಚ್ಚರಿಕೆ ನೀಡಿದ್ದಾರೆ.