ಚಿಕ್ಕಮಗಳೂರು ಜಿಲ್ಲೆಯ ಮುಳ್ಳಯ್ಯನಗಿರಿ ರಾಜ್ಯದಲ್ಲೇ ಅತ್ಯಂತ ಎತ್ತರವಾದ ಪ್ರದೇಶ. ಮುಳ್ಳನಯ್ಯನಗಿರಿಯ ಸೌಂದರ್ಯ ಸವಿಯಲು ರಾಜ್ಯ ಮಾತ್ರವಲ್ಲ ಹೊರ ರಾಜ್ಯದಿಂದಲೂ ಪ್ರವಾಸಿಗರು ಬರುತ್ತಾರೆ. ಕಿರಿದಾದ ರಸ್ತೆಯಲ್ಲಿ ಪ್ರವಾಸಿಗರು ಭಾರೀ ಸಂಖ್ಯೆಯಲ್ಲಿ ಭೇಟಿ ನೀಡಿದ್ದಾಗ ಟ್ರಾಫಿಕ್ ಕಿರಿ ಕಿರಿ ಉಂಟಾಗುತ್ತೆ .
ಇದಕ್ಕಾಗಿ ಜಿಲ್ಲಾಡಳಿತವೇ ಟ್ರಾಫಿಕ್ ಜಾಮ್ ನ ತೊಂದರೆ ತಪ್ಪಿಸಲು ಪ್ಲಾನ್ ರೆಡಿಮಾಡಿದೆ. ಇದರಿಂದ ಕಿರಿದಾದ ರಸ್ತೆಯಲ್ಲಿ ಟ್ರಾಫಿಕ್ ಕಿರಿ ಕಿರಿಗೆ ಗುಡ್ ಬೈ ಹೇಳಿ ಪ್ರವಾಸಿಗರು ಪ್ರಕೃತಿ ಸೌಂದರ್ಯವನ್ನು ಸವಿಯುವ ದಿನಗಳು ಎದುರಾಗಲಿದೆ.
ಗಿರಿಭಾಗಕ್ಕೆ ಜಿಲ್ಲಾಡಳಿತದ ಗಾಡಿಗಳಲ್ಲೇ ಹೋಗಬೇಕು, ಬರಬೇಕು
ಮುಳ್ಳಯ್ಯನಗಿರಿ, ದತ್ತಪೀಠ, ಸೀತಾಳಯ್ಯನಗಿರಿ, ಮಾಣಿಕ್ಯಾಧಾರ, ಗಾಳಿಕೆರೆ ಸೇರಿದಂತೆ ಸುತ್ತಮುತ್ತಲಿನ ಪ್ರದೇಶದಲ್ಲಿ ಇನ್ಮುಂದೆ ಟ್ರಾಫಿಕ್ ಜಾಮ್ ಪ್ರಾಬ್ಲಂ ಗೋಳು ತಪ್ಪಿಸಲು ಇದೀಗ ಜಿಲ್ಲಾಡಳಿತವೇ ಗಿರಿಭಾಗದ ಪ್ರವಾಸಿತಾಣಗಳಿಗೆ ಪರ್ಮಿಟ್ ವಾಹನಗಳನ್ನ ಬಿಡೋದಕ್ಕೆ ತೀರ್ಮಾನಿಸಿದೆ.
ನೀವು ಬೆಂಗಳೂರು-ಮೈಸೂರು ಸೇರಿದಂತೆ ಎಲ್ಲಿಂದಲೇ ನಿಮ್ಮ ಗಾಡಿಯಲ್ಲಿ ಬಂದ್ರು ಚಿಕ್ಕಮಗಳೂರಿನಿಂದ ಗಿರಿಭಾಗಕ್ಕೆ ಜಿಲ್ಲಾಡಳಿತದ ಗಾಡಿಗಳಲ್ಲೇ ಹೋಗಬೇಕು. ಜೊತೆಗೆ, ಎಲ್ಲೆಂದರಲ್ಲಿ ಗಾಡಿ ಪಾರ್ಕ್ ಮಾಡ್ಕೊಂಡು ರೋಡ್ ಮಧ್ಯೆ ಮದ್ಯ ಸೇವಿಸ್ಕೊಂಡು ಡ್ಯಾನ್ಸ್ ಮಾಡೋದು ತಪ್ಪುತ್ತೆ. ನೀಟಾಗಿ ಹೋಗಿ ಪ್ರಕೃತಿ ಸೌಂದರ್ಯವನ್ನ ಸವಿದು ನೀಟಾಗಿ ವಾಪಸ್ ಬರ್ಬೋದು.
ನೀವು ನಿಮ್ದೇ ಗಾಡಿಗಳಲ್ಲಿ ಬಂದ್ರು ಕೂಡ ಚಿಕ್ಕಮಗಳೂರು ತಾಲೂಕಿನ ಅಲ್ಲಂಪುರದಲ್ಲಿ ಐದು ಎಕರೆ ಜಾಗದಲ್ಲಿ ಜಿಲ್ಲಾಡಳಿತವೇ ಪಾರ್ಕಿಂಗ್ ವ್ಯವಸ್ಥೆ ಮಾಡಲಿದೆ. ಅಲ್ಲಿ ಎಲ್ಲಾ ಸೌಲಭ್ಯವೂ ಇರಲಿದೆ. ನೀವು ನಿಮ್ಮ ಗಾಡಿಗಳನ್ನ ಅಲ್ಲೇ ಬಿಟ್ಟು ಜಿಲ್ಲಾಡಳಿತದ ಪರ್ಮಿಟ್ ಗಾಡಿಗಳಲ್ಲಿ ಹೋಗಬೇಕು.
ಸ್ವಂತ ವಾಹನಗಳಲ್ಲಿ ಹೋಗೋ ಪ್ರವಾಸಿಗರು ಎಲ್ಲೆಂದರಲ್ಲಿ ಪ್ಲಾಸ್ಟಿಕ್ ಕವರ್, ಬಾಟಲಿಗಳನ್ನ ಎಸೆಯುತ್ತಿದ್ದರು. ಆದ್ರೆ, ಇನ್ಮುಂದೆ ಅವೆಲ್ಲಕ್ಕೂ ಬ್ರೇಕ್ ಬೀಳಲಿದೆ. ಬರೀಗೈಲಿ ಹೋಗ್ಬೇಕು. ಪ್ರಕೃತಿ ಸೌಂದರ್ಯವನ್ನ ನೋಡ್ಕಂಡ್ ವಾಪಸ್ ಬರ್ಬೇಕು ಅಷ್ಟೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಜಿಲ್ಲಾಧಿಕಾರಿ ಕೆ ಎನ್ ರಮೇಶ್ ಜಿಲ್ಲಾಡಳಿತದಿಂದ ಈಗಾಗಲೇ ನೀಲಿ ನಕ್ಷೆ ಸಿದ್ದವಾಗಿದ್ದು ಮುಂದಿನ ತಿಂಗಳು ಇದು ಕಾರ್ಯಗತವಾಗಲಿದೆ ಎನ್ನುವ ಭರವಸೆಯನ್ನು ನೀಡಿದ್ದಾರೆ.
ಒಟ್ಟಾರೆ, ಪ್ರವಾಸದ ಹೆಸರಲ್ಲಿ ಗಿರಿಭಾಗದಲ್ಲಿ ಮೋಜು-ಮಸ್ತಿ ಮಾಡ್ತಾರೆ ಅನ್ನೋ ಆರೋಪವೂ ಇತ್ತು. ಗಿರಿಭಾಗಕ್ಕೆ ಸ್ವಂತ ವಾಹನಗಳಿಗೆ ಬ್ರೇಕ್ ಹಾಕಿ ಎಂಬ ಪರಿಸರವಾದಿಗಳ ಆಗ್ರಹವೂ ಇತ್ತು. ಇದೀಗ, ಕಾಲ ಕೂಡಿ ಬಂದಿದೆ. ಶನಿವಾರ-ಭಾನುವಾರವಂತೂ ಮುಳ್ಳಯ್ಯನಗಿರಿಯಲ್ಲಿ ಹೇಳತೀರದ ಟ್ರಾಫಿಕ್ ಇರುತ್ತಿತ್ತು. ಪ್ಲಾಸ್ಟಿಕ್ ಕೂಡ ಅಷ್ಟೆ ಇರುತ್ತಿತ್ತು.
ಇದೀಗ, ಜಿಲ್ಲಾಡಳಿತದ ಈ ನಡೆ ಸ್ಥಳಿಯರಿಗೆ ಖುಷಿ ತಂದಿದ್ದರೂ ಕೂಡ ಗಿರಿಭಾಗದಲ್ಲಿ ನೂರಾರು ಹೋಂಸ್ಟೇ, ರೆಸಾರ್ಟ್ನವರ ಮಧ್ಯೆ ಜಿಲ್ಲಾಡಳಿತದ ಈ ತೀರ್ಮಾನ ಎಷ್ಟು ಪರಿಣಾಮಕಾರಿಯಾಗಿ, ಯಾವಾಗ ಕಾರ್ಯರೂಪಕ್ಕೆ ಬರುತ್ತೆ ಅನ್ನೋದನ್ನ ಕಾದುನೋಡ್ಬೇಕು.