ಮೂಡಿಗೆರೆ ಹಾಗೂ ಬೇಲೂರು ತಾಲೂಕಿನ ಪ್ರದೇಶವನ್ನೊಳಗೊಂಡ ಆರುನಾಡು ಮೊಕ್ತೇಶ್ವರ ಪಟೇಲರಾಗಿದ್ದ ಚಿನ್ನುಗ ದ್ಯಾವಪ್ಪಗೌಡರ ಸಂಸ್ಮರಣಾ ಗ್ರಂಥ ನೆನಪಿನಂಗಳ ಎಂಬ ಕೃತಿಯನ್ನು ಚಿನ್ನುಗದ ಶ್ರೀ ವೀರಭದ್ರೇಶ್ವರ ಎಸ್ಟೇಟ್ನ ನಿಸರ್ಗದಲ್ಲಿ ಜನವರಿ 15ರಂದು ಬೆಳಿಗ್ಗೆ 10ಗಂಟೆಗೆ ಹಮ್ಮಿಕೊಳ್ಳಲಾಗಿದೆ ಎಂದು ಲೀಲ ಮತ್ತು ಸಿ.ಡಿ.ಜಿತೇಂದ್ರ ಚಿನ್ನುಗ ಕುಟುಂಬ ವರ್ಗ ತಿಳಿಸಿದ್ದಾರೆ.
ಬಾಳೆಹೊನ್ನೂರಿನ ರಂಭಾಪುರಿ ಪೀಠದ ಜಗದ್ಗುರು ಪ್ರಸನ್ನ ರೇಣುಕಾ ಡಾ. ವೀರಸೋಮೇಶ್ವರ ಶಿವಾಚಾರ್ಯ ಶ್ರೀಗಳು ದಿವ್ಯ ಸಾನಿಧ್ಯ ವಹಿಸಿ ಕೃತಿ ಬಿಡುಗಡೆ ಮಾಡಲಿದ್ದಾರೆ. ಸಮಾರಂಭದ ಅಧ್ಯಕ್ಷತೆಯನ್ನು ಮಾಜಿ ಸಭಾಪತಿ ಡಾ.ಬಿ.ಎಲ್.ಶಂಕರ್ ವಹಿಸಲಿದ್ದು, ಕಾರ್ಯಕ್ರಮದ ಉದ್ಘಾಟನೆಯನ್ನು ಹಿರಿಯ ಸಾಹಿತಿ ಜಾನಪದ ತಜ್ಞ ನಾಡೋಜ ಗೊ.ರು.ಚನ್ನಬಸಪ್ಪ ನೆರವೇರಿಸಲಿದ್ದಾರೆ. ಸಾಹಿತಿ ಚಟ್ನಳ್ಳಿ ಮಹೇಶ್ ಉಪನ್ಯಾಸ ನೀಡಲಿದ್ದು, ಮುಖ್ಯ ಅತಿಥಿಯಾಗಿ ಕನಾಟಕ ಬೆಳೆಗಾರರ ಒಕ್ಕೂಟದ ಮಾಜಿ ಅಧ್ಯಕ್ಷ ಬಿ.ಎ.ಜಗನ್ನಾಥ ಭಾಗವಹಿಸಲಿದ್ದಾರೆ. ಸಮಾರಂಭದಲ್ಲಿ ವಿವಿಧ ಸಾಧಕರನ್ನು ಸನ್ಮಾನಿಸಿ ಗೌರವಿಸಲಾಗುವುದು.
ಸಾಮಾಜಿಕ ಸೇವೆ, ಧಾರ್ಮಿಕ ಕಾರ್ಯಗಳು ಸೇರಿದಂತೆ ಅನೇಕ ಕಡೆ ಪಶು ಆಸ್ಪತ್ರೆ, ಸಾರ್ವಜನಿಕರ ಆಸ್ಪತ್ರೆ ನಿರ್ಮಾಣಕ್ಕಾಗಿ ದಾನ, ರೈತರ ಏಳಿಗೆಗೆ ಶ್ರಮಿಸಿ ಇಂದಿಗೂ ಸಾವಿರಾರು ರೈತರ ಮನೆ ಬೆಳಗುವ ಜ್ಯೋತಿಯಾಗಿದ್ದ ಚಿನ್ನುಗ ದ್ಯಾವಪ್ಪಗೌಡರ ನೆನಪಿನಂಗಳ ಎಂಬ ಸಂಸ್ಮರಣಾ ಗ್ರಂಥ ಬಿಡುಗಡೆ ಕಾರ್ಯಕ್ರಮಕ್ಕೆ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕೆಂದು ಮನವಿ ಮಾಡಿದ್ದಾರೆ.