ಹೇಮಾವತಿ ನದಿಯಲ್ಲಿ ಮೀನು ಹಿಡಿಯಲು ಸ್ನೇಹಿತರೊಂದಿಗೆ ತೆರೆಳಿದ್ದ ವ್ಯಕ್ತಿಯೊಬ್ಬರು ಗುಂಡೇಟಿನಿಂದ ಸಾವನ್ನಪ್ಪಿದ್ದು ಇನ್ನಿಬ್ಬರು ಗಂಭೀರ ಗಾಯಗೊಂಡಿರುವ ಘಟನೆ ನಡೆದಿದೆ.
ಸಕಲೇಶಪುರ ತಾಲ್ಲೂಕು ಯಸಳೂರು ಸಮೀಪದ ತಂಬಲಗೇರಿ ಎಂಬಲ್ಲಿ ಇಂದು ಈ ಘಟನೆ ನಡೆದಿದೆ.
ತಂಬಲಗೇರಿಯ ನವೀನ್ ಆಲಿಯಾಸ್ ಪಚ್ಚಿ (39 ವರ್ಷ) ಮೃತಪಟ್ಟ ವ್ಯಕ್ತಿ. ನವೀನ್ ಜೊತೆಗಿದ್ದ ದಯಾನಂದ ಮತ್ತು ಪದ್ಮನಾಭ ಎಂಬುವವರಿಗೂ ಗುಂಡು ತಗುಲಿದ್ದು ಗಂಭೀರ ಗಾಯಗೊಂಡಿದ್ದಾರೆ ಎನ್ನಲಾಗಿದ್ದು, ಅವರಿಗೆ ಚಿಕಿತ್ಸೆ ನೀಡಲಾಗುತ್ತಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎನ್ನಲಾಗಿದೆ.
ನಿನ್ನೆ ರಾತ್ರಿ ನಾಲ್ವರು ಸ್ನೇಹಿತರು ತಂಬಲಗೇರಿಯಲ್ಲಿ ಹರಿಯುವ ಹೇಮಾವತಿ ನದಿಯಲ್ಲಿ ಮೀನು ಹಿಡಿಯಲು ತೆರಳಿದ್ದರು. ಈ ವೇಳೆ ಯಾರೋ ಹಾರಿಸಿದ ಗುಂಡು ತಗುಲಿ ನವೀನ್ ಮೃತಪಟ್ಟಿದ್ದಾರೆ.
ಈ ಭಾಗದಲ್ಲಿ ಕಾಡುಪ್ರಾಣಿ ಶಿಕಾರಿ ಮಾಡುವವರು ಹಾರಿಸಿದ ಗುಂಡು ಆಕಸ್ಮಿಕವಾಗಿ ತಗುಲಿರಬಹುದು ಅಥವಾ ಯಾರಾದರೂ ಉದ್ದೇಶಪೂರ್ವಕವಾಗಿ ಕೊಲೆ ಮಾಡಲು ಗುಂಡು ಹಾರಿಸಿರಬಹುದೇ ಎಂಬುದು ತನಿಖೆಯಿಂದ ತಿಳಿದುಬರಬೇಕಷ್ಟೇ.
ಮೃತಪಟ್ಟ ನವೀನ್ ಬಿ.ಜೆ.ಪಿ. ಮತ್ತು ರಾಷ್ಟ್ರೀಯ ಸ್ವಯಂ ಸೇವಕಾ ಸಂಘದ ಸಕ್ರಿಯ ಕಾರ್ಯಕರ್ತರಾಗಿದ್ದರು ಎಂದು ತಿಳಿದುಬಂದಿದೆ. ಮೃತರು ಪತ್ನಿ ಹಾಗೂ ನಾಲ್ಕು ವರ್ಷದ ಮಗುವನ್ನು ಅಗಲಿದ್ದಾರೆ.