ಚಿಕ್ಕಮಗಳೂರು ತಾಲ್ಲೂಕಿನ ಮಲ್ಲಂದೂರು ಸಮೀಪದ ನಿಡಗೋಡು ಎಂಬಲ್ಲಿ ಕಾಡುಕೋಣ ದಾಳಿಯಿಂದ ಯುವಕ ಗಂಭೀರ ಗಾಯಗೊಂಡಿದ್ದಾರೆ.
ನಿಡಗೋಡು ಗ್ರಾಮದ ಕಾಫಿ ಬೆಳೆಗಾರ ಮನೋಜ್ ಗೌಡ ಗಾಯಗೊಂಡವರು. ಅವರನ್ನು ಚಿಕ್ಕಮಗಳೂರು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಗುರುವಾರ ಮಧ್ಯಾಹ್ನ ಸಮಯದಲ್ಲಿ ತನ್ನ ಕಾಫಿ ತೋಟದಲ್ಲಿ ತಂದೆ ಕೃಷ್ಣಮೂರ್ತಿಯವರ ಜೊತೆ ಕಾಫಿ ತೋಟದಲ್ಲಿ ಹೊಸದಾಗಿ ನಾಟಿ ಮಾಡಿದ್ದ ಕಾಫಿಗಿಡಗಳಿಗೆ ಬಿಸಿಲು ತಾಗದಂತೆ ಗೂಡುಕಚ್ಚುವ ಕೆಲಸದಲ್ಲಿ ನಿರತರಾಗಿದ್ದಾಗ ಕಾಡು ಕೋಣ ದಾಳಿ ಮಾಡಿದೆ ಎಂದು ತಿಳಿದುಬಂದಿದೆ.
ಕಾಣುಕೋಣ ಹತ್ತಿರಕ್ಕೆ ಬಂದಾಗ ಮನೋಜ್ ತಪ್ಪಿಸಿಕೊಳ್ಳಲು ಓಡಿದ್ದಾರೆ. ಆದರೆ ಕಾಡುಕೋಣ ಅವರನ್ನು ಅಟ್ಟಿಸಿಕೊಂಡು ಬಂದು ದಾಳಿ ಮಾಡಿದೆ. ಮನೋಜ್ ಅವರ ಹೊಟ್ಟೆಯ ಭಾಗಕ್ಕೆ ತನ್ನ ಕೊಂಬಿನಿಂದ ಇರಿದು ಗಾಯಗೊಳಿಸಿದೆ.
ತಕ್ಷಣ ಮನೋಜ್ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಅಪಾರ ರಕ್ತಸ್ರಾವವಾಗಿದ್ದು, ಸಕಾಲಿಕ ಚಿಕಿತ್ಸೆಯಿಂದ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಕಳೆದ ಶುಕ್ರವಾರ ಬಾಳೆಹೊಳೆ ಸಮೀಪ ತೋಟದಲ್ಲಿದ್ದ ಕಾಫಿ ಬೆಳೆಗಾರ ಜಯಪುರದ ಅಪೂರ್ವ ಸೌಹಾರ್ದ ಸಹಕಾರಿ ಅಧ್ಯಕ್ಷ ಸೋಮಶೇಖರ್ ಎಂಬುವವರು ಸಾವನ್ನಪ್ಪಿದ್ದರು. ಮೊನ್ನೆ ತಾನೆ ಆಲ್ದೂರು ಸಮೀಪದ ಬೆಟ್ಟದಮರಡಿ ಗ್ರಾಮದ ಸಮೀಪ ಕರ್ತವ್ಯಕ್ಕೆ ತೆರಳಿ ವಾಪಾಸಾಗುತ್ತಿದ್ದ ದಿನೇಶ್ ಕುಮಾರ್ ಎಂಬ ಪೊಲೀಸ್ ಸಿಬ್ಬಂದಿಯ ಮೇಲೆ ಕಾಡುಕೋಣವೊಂದು ಎರಗಿ ಗಾಯಗೊಳಿಸಿತ್ತು. ಇದೀಗ ಈ ಘಟನೆ ನಡೆದಿದೆ.
ಮಲೆನಾಡಿನಾದ್ಯಂತ ಕಾಡಾನೆ ಮತ್ತು ಕಾಡುಕೋಣಗಳ ಹಾವಳಿ ಹೆಚ್ಚಾಗಿದ್ದು ರೈತರು ತೋಟಗದ್ದೆಗಳಿಗೆ ಹೋಗಲು ಭಯಪಡುವಂತಹ ಸ್ಥಿತಿ ನಿರ್ಮಾಣವಾಗಿದೆ.