ಮೂಡಿಗೆರೆ ಪಟ್ಟಣದ ಶ್ರೀ ವೇಣುಗೋಪಾಲಸ್ವಾಮಿ ದೇವಸ್ಥಾನ ಶ್ರೀ ಪಂಚಮುಖಿ ಗಣಪತಿ, ಶ್ರೀ ಮಹಾಲಕ್ಷ್ಮಿ, ಶ್ರೀ ಆಂಜನೇಯ ದೇವರ ಆವರಣದಲ್ಲಿ ಬುಧವಾರ ಶ್ರೀ ಶ್ರೀನಿವಾಸ ಸ್ವಾಮಿಯವರ ಕಲ್ಯಾಣೋತ್ಸವ ಸೇವೆ ಅದ್ದೂರಿಯಾಗಿ ನಡೆಯಿತು.
ಶ್ರೀ ಶ್ರೀನಿವಾಸ ತಿರುಕಲ್ಯಾಣ ಹಾಗೂ ವೈಕುಂಠ ಏಕಾದಶಿ ಹಿನ್ನಲೆಯಲ್ಲಿ ಕಳೆದ ಸೋಮವಾರದಿಂದ ಬುಧವಾರವರೆಗೆ ಧಾರ್ಮಿಕ ದತ್ತಿ ಇಲಾಖೆ ಹಾಗೂ ಶ್ರೀ ವೇಣುಗೋಪಾಲ ಸ್ವಾಮಿ ದೇವಸ್ಥಾನ ಸಮಿತಿ ವತಿಯಿಂದ ವಿವಿಧ ಪೂಜಾ ಕಾರ್ಯಕ್ರಮ ನೆರವೇರಿತು.
ಬುಧವಾರ ಬೆಳಗ್ಗೆ 8,30 ಗಂಟೆಗೆ ಸ್ವಸ್ತಿವಾಚನ, ನಾಂದಿ, ವಿಶ್ವಕ್ಷೆನ ಆರಾಧನೆ, ಆಚಾರ್ಯ ಋತ್ವಿಕ್ಚರಣ, ಮಂಗಳ ದ್ರವ್ಯ ಪೂಜೆ, ನಿಶ್ಚಿತಾರ್ಥದೊಂದಿಗೆ ಶ್ರೀ ಶ್ರೀನಿವಾಸ ಸ್ವಾಮಿಯವರ ಕಲ್ಯಾಣೋತ್ಸವ ಸೇವೆ ಅದ್ದೂರಿಯಿಂದ ನಡೆಯಿತು. ಮಧ್ಯಾಹ್ನ ಮಹಾಮಂಗಳಾರತಿ, ತೀರ್ಥ ಪ್ರಸಾದ ವಿನಿಯೋಗ ನಂತರ ಅನ್ನಸಂತರ್ಪಣೆ ನಡೆಯಿತು.
ಶ್ರೀ ಶ್ರೀನಿವಾಸ ತಿರುಕಲ್ಯಾಣ ಕಾರ್ಯಕ್ರಮಕ್ಕೆ ತಾಲೂಕಿನ ವಿವಿಧ ಗ್ರಾಮಗಳಿಂದ ಸುಮಾರು 3 ಸಾವಿರಕ್ಕು ಅಧಿಕ ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದರು. ಶ್ರೀ ವೇಣುಗೋಪಾಲ ಸ್ವಾಮಿ ದೇವಸ್ಥಾನ ಸಮಿತಿ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಹಾಗೂ ಭಕ್ತರು ಕಲ್ಯಾಣೋತ್ಸವ ಕಣ್ತುಂಬಿಕೊಳ್ಳುವ ಮೂಲಕ ದೇವರ ಕೃಪೆಗೆ ಪಾತ್ರರಾದರು.