ವಿದ್ಯಾರ್ಥಿಗಳು ಮಹನೀಯರ ಬದುಕು ಅರಿತು ಅವರ ಆದರ್ಶಗಳನ್ನು ಮೈಗೂಡಿಸಿಕೊಂಡರೆ ಮುಂದಿನ ದಿನದಲ್ಲಿ ಈ ದೇಶದ ಆಸ್ತಿಯಾಗಿ ಪರಿವರ್ತನೆಗೊಳ್ಳಬಹುದೆಂದು ವಿಧಾನಪರಿಷತ್ ಉಪ ಸಭಾಪತಿ ಎಂ.ಕೆ.ಪ್ರಾಣೇಶ್ ಹೇಳಿದರು.
ಅವರು ಮಂಗಳವಾರ ಪಟ್ಟಣದ ಡಿಎಸ್ಬಿಜಿ ಕಾಲೇಜಿನಲ್ಲಿ ಏರ್ಪಡಿಸಿದ್ದ ಕಾಲೇಜಿನ ಸಾಂಸ್ಕøತಿಕ, ಕ್ರೀಡೆ, ಎನ್ಎಸ್ಎಸ್, ಯುವ ರೆಡ್ಕ್ರಾಸ್, ರೋವರ್ಸ್ ಹಾಗೂ ರೇಂಜರ್ಸ್ ಘಟಕ ಉದ್ಘಾಟನೆ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು. ದೇಶದ ಜನರು ತಮ್ಮ ಕಾಲಿನ ಮೇಲೆ ನಿಂತು ದುಡಿಯುವ ಮೂಲಕ ದೇಶಕ್ಕೆ ತಮ್ಮ ಕೊಡುಗೆ ನೀಡಿದಾಗ ಮಾತ್ರ ಜೀವನ ಸಾರ್ಥಕವಾಗುತ್ತದೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಉತ್ತಮ ಶಿಕ್ಷಣ ಪಡೆಯುವ ಮೂಲಕ ಉತ್ತಮ ಪ್ರಜೆಯಾಗಿ ದೇಶ ಕಾಯುವ ಕೆಲಸ ಮಾಡಬೇಕೆಂದು ಹೇಳಿದರು.
ಶಾಸಕ ಎಂ.ಪಿ.ಕುಮಾರಸ್ವಾಮಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಹಿಂದೆ ಶಿಕ್ಷಣ ಪಡೆಯಲು ತುಂಬಾ ಕಷ್ಟವಿತ್ತು. ಆದರೆ ಈಗ ಯಾರೂ ಶಿಕ್ಷಣದಿಂದ ವಂಚಿತರಾಗಬಾರದೆಂಬ ದೃಷ್ಟಿಯಿಂದ ಸರಕಾರ ಉಚಿತ ಶಿಕ್ಷಣ ಜತೆಗೆ ಅನೇಕ ಸವಲತ್ತು ನೀಡುತ್ತಿದೆ. ಅದನ್ನು ಸದ್ಬಳಕೆ ಮಾಡಿಕೊಂಡು ಉನ್ನತ ಹುದ್ದೆ ಪಡೆಯುವ ಮೂಲಕ ದೇಶ ಕಟ್ಟುವ ಕೆಲಸ ಮಾಡಬೇಕೆಂದು ಸಲಹೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಡಿಎಸ್ಬಿಜಿ ಕಾಲೇಜು ಪ್ರಾಂಶುಪಾಲ ಉದಯ ಕುಮಾರ್ ವಹಿಸಿದ್ದರು. ಕಾಲೇಜು ಅಭಿವೃದ್ಧಿ ಮಂಡಳಿ ಸದಸ್ಯರಾದ ಜೆ.ಎಸ್.ರಘು, ನಯನ ತಳವಾರ, ಪರೀಕ್ಷಿತ್, ಆದರ್ಶ್, ದೀಪ್ತಿ, ರವೀಶ್ ಮತ್ತಿತರರಿದ್ದರು.