ವಿಧಾನಪರಿಷತ್ ಸದಸ್ಯ ಎಂ.ಕೆ.ಪ್ರಾಣೇಶ್ ಅವರು ಎರಡನೇ ಬಾರಿ ವಿಧಾನಪರಿಷತ್ ಉಪ ಸಭಾಪತಿಯಾಗಿ ಆಯ್ಕೆಯಾದ ನಂತರ ಮೂಡಿಗೆರೆ ಪಟ್ಟಣಕ್ಕೆ ಆಗಮಿಸಿದಾಗ ಕಾರ್ಯಕರ್ತರು ಅದ್ದೂರಿ ಸ್ವಾಗತ ಕೋರಿದರು. ಪಟ್ಟಣದ ಪ್ರವಾಸಿ ಮಂದಿರದಲ್ಲಿ ನೆರೆದಿದ್ದ ಪಕ್ಷದ ನೂರಾರ ಕಾರ್ಯಕರ್ತರು ಪ್ರಾಣೇಶ್ ಅವರು ಆಗಮಿಸುತ್ತಿದ್ದಂತೆ ಜಯಕಾರ ಹಾಕಿ ಸಂಭ್ರಮಿಸಿದರು. ಪ್ರಾಣೇಶ್ ಅವರಿಗೆ ಹಾರ ಹಾಕಿ, ಹೂವಿನ ಮಳೆಗೈದು ತಮ್ಮ ಅಭಿಮಾನ ವ್ಯಕ್ತಪಡಿಸಿದರು.
ಬಳಿಕ ಪಟ್ಟಣದ ಪ್ರಮುಖ ಬೀದಿಯಲ್ಲಿ ಮೆರವಣಿಗೆ ನಡೆಸಲು ಎಂ.ಕೆ.ಪ್ರಾಣೇಶ್ ಅವರನ್ನು ಹೊತ್ತು ಸಾಗಲು ತಯಾರಾಗಿ ನಿಂತಿದ್ದ ರಥದಲ್ಲಿ ಹತ್ತಿಕೊಂಡರು. ಆದರೆ ಇದು ಕಾರ್ಯಕರ್ತರ ಜಯ. ತಾನು ಕಾರ್ಯಕರ್ತರೊಂದಿಗೆ ನಡಿಗೆಯಲ್ಲಿ ಸಾಗುತ್ತೇನೆಂದು ರಥದಿಂದ ಕೆಳಗಿಳಿದು ಕಾರ್ಯಕರ್ತರ ಜತೆಗೆ ಮೆರವಣಿಗೆಯಲ್ಲಿ ಸಾಗಿದರು.
ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಸಾಗಿ ಪಕ್ಷದ ಕಛೇರಿಯಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು.
ಶಾಸಕ ಎಂ.ಪಿ.ಕುಮಾರಸ್ವಾಮಿ, ಬಿಜೆಪಿ ತಾಲೂಕು ಅಧ್ಯಕ್ಷ ಜೆ.ಎಸ್.ರಘು ಸೇರಿದಂತೆ ಪಕ್ಷದ ಹಿರಿಯ ಮುಖಂಡರು, ಪ್ರಮುಖ ಪದಾಧಿಕಾರಿಗಳು, ಪಟ್ಟಣ ಪಂಚಾಯಿತಿ ಸದಸ್ಯರು, ಬಿ.ಜೆ.ಪಿ. ಟಿಕೆಟ್ ಆಕಾಂಕ್ಷಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದು ಪ್ರಾಣೇಶ್ ಅವರಿಗೆ ಶುಭಕೋರಿದರು.
ಮೂಡಿಗೆರೆ ಶಾಸಕ ಎಂ.ಪಿ.ಕುಮಾರಸ್ವಾಮಿಯವರು ಪ್ರಾಣೇಶ್ ಅವರ ಸ್ವಾಗತಕ್ಕೆ ಆಗಮಿಸುತ್ತಾರಾ ? ಇಲ್ಲವಾ ? ಎಂಬ ಕುತೂಹಲ ಬಿ.ಜೆ.ಪಿ. ಕಾರ್ಯಕರ್ತರ ನಡುವೆ ಬಹುಚರ್ಚೆಯಾಗುತ್ತಿತ್ತು. ಕಳೆದ ವಿಧಾನಪರಿಷತ್ ಚುನಾವಣೆ ನಂತರ ಎಂ.ಕೆ. ಪ್ರಾಣೇಶ್ಯವರ ಮತ್ತು ಎಂ.ಪಿ. ಕುಮಾರಸ್ವಾಮಿಯವರ ನಡುವೆ ಭಿನ್ನಭಿಪ್ರಾಯ ಮೂಡಿದ್ದು ಇಬ್ಬರ ನಡುವಿನ ಸಂಬಂಧ ಅಷ್ಟಕಷ್ಟೇ ಎನ್ನುವಂತಾಗಿದೆ. ಇದು ಕ್ಷೇತ್ರದಲ್ಲಿ ಪಕ್ಷದ ಕಾರ್ಯಕರ್ತರ ನಡುವೆ ಬಹಳಷ್ಟು ಗೊಂದಲಗಳಿಗೆ ಕಾರಣವಾಗಿತ್ತು.
ಆದರೆ ಪ್ರಾಣೇಶ್ ಅವರ ಸ್ವಾಗತ ಕಾರ್ಯಕ್ರಮದಲ್ಲಿ ಕುಮಾರಸ್ವಾಮಿ ಲವಲವಿಕೆಯಿಂದ ಭಾಗವಹಿಸಿದ್ದು ಕಾರ್ಯಕರ್ತರ ಮತ್ತು ಸಾರ್ವಜನಿಕರ ಗಮನ ಸೆಳೆಯಿತು.