ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಮೂಡಿಗೆರೆ ಕ್ಷೇತ್ರದ ಕಾಂಗ್ರೇಸ್ ಅಭ್ಯರ್ಥಿಗಳ ಬಗ್ಗೆ ಅಭಿಪ್ರಾಯ ಸಂಗ್ರಹಿಸಲು ಆಗಮಿಸಿದ್ದ ಕೆ.ಪಿ.ಸಿ.ಸಿ. ವೀಕ್ಷಕರ ಎದುರು ಪಕ್ಷದ ಸ್ಥಳೀಯ ಮುಖಂಡರು ಮತ್ತು ಕಾರ್ಯಕರ್ತರು ಪರಸ್ಪರ ಗಲಾಟೆ ಮಾಡಿಕೊಂಡಿರುವ ಪ್ರಸಂಗ ನಡೆದಿದೆ.
ಇಂದು ಮೂಡಿಗೆರೆ ಪಟ್ಟಣದ ಕಾಂಗ್ರೇಸ್ ಕಛೇರಿಯಲ್ಲಿ ಕೆ.ಪಿ.ಸಿ.ಸಿ. ಪ್ರಧಾನ ಕಾರ್ಯದರ್ಶಿ ಗಪೂರ್, ಜಿಲ್ಲಾ ಕಾಂಗ್ರೇಸ್ ಅಧ್ಯಕ್ಷ ಡಾ. ಅಂಶುಮಂತ್, ಮುಖಂಡರಾದ ಹೆಚ್.ಎಸ್. ಪುಟ್ಟಸ್ವಾಮಿ ಮುಂತಾದವರು ಪಕ್ಷದ ಹೈಕಮಾಂಡ್ ಆದೇಶದ ಮೇರೆಗೆ ವೀಕ್ಷಕರಾಗಿ ಆಗಮಿಸಿದ್ದರು.
ಕ್ಷೇತ್ರದಲ್ಲಿ ಕಾಂಗ್ರೇಸ್ ಪದಾಧಿಕಾರಿಗಳಿಂದ ಪಕ್ಷದ ಅಭ್ಯರ್ಥಿಗಳ ಬಗ್ಗೆ ಅಭಿಪ್ರಾಯ ಸಂಗ್ರಹಿಸುವ ಕಾರ್ಯ ನಡೆಯುತ್ತಿತ್ತು. ಕ್ಷೇತ್ರದ ಸುಮಾರು 300ರಿಂದ 350 ಮಂದಿ ಮುಂಚೂಣಿ ಕಾರ್ಯಕರ್ತರಿಗೆ ತಮ್ಮ ಅಭಿಪ್ರಾಯಗಳನ್ನು ಲಿಖಿತವಾಗಿ ತಿಳಿಸಲು ಅವಕಾಶ ನೀಡಲಾಗಿತ್ತು. ಪಕ್ಷದ ಅಭ್ಯರ್ಥಿಯಾಗಲು ಅರ್ಜಿ ಸಲ್ಲಿಸಿರುವ ಆಕಾಂಕ್ಷಿಗಳ ಪಟ್ಟಿ ನೀಡಿ ಅವರ ಹೆಸರಿನ ಮುಂದೆ ತಮ್ಮ ಆದ್ಯತೆಯ ಮೇಲೆ ಅಭಿಪ್ರಾಯ ತಿಳಿಸಲು ಸೂಚಿಸಲಾಗಿತ್ತು.
ಈ ಹಿನ್ನಲೆಯಲ್ಲಿ ಇಂದು ಕಾಂಗ್ರೇಸ್ ಕಛೇರಿಯಲ್ಲಿ ಕಾರ್ಯಕರ್ತರು ದೊಡ್ಡ ಸಂಖ್ಯೆಯಲ್ಲಿ ನೆರೆದಿದ್ದರು. ಈ ಸಂದರ್ಭದಲ್ಲಿ ನಯನ ಮೋಟಮ್ಮ ಪರ ಮತ್ತು ವಿರುದ್ಧ ಗುಂಪುಗಳ ಕಾರ್ಯಕರ್ತರ ನಡುವೆ ಗಲಾಟೆ ನಡೆದಿದೆ. ನಯನ ಮೋಟಮ್ಮ ಅವರ ಪರವಾಗಿ ಇರುವವರಿಗೆ ಅಭಿಪ್ರಾಯ ತಿಳಿಸಲು ಹೆಚ್ಚು ಅವಕಾಶ ನೀಡಿದ್ದೀರಿ. ಅವರ ವಿರುದ್ಧ ಇರುವ ಕಾರ್ಯಕರ್ತರ ಹೆಸರುಗಳನ್ನು ಬಿಟ್ಟಿದ್ದೀರಿ ಎಂದು ನಯನ ಮೋಟಮ್ಮ ವಿರುದ್ಧ ಗುಂಪಿನ ಕಾರ್ಯಕರ್ತರು ಮತ್ತು ಮುಖಂಡರು ಆರೋಪಿಸಿ ಜಿಲ್ಲಾಧ್ಯಕ್ಷರ ಜೊತೆ ವಾಗ್ವಾದ ನಡೆಸಿದ್ದಾರೆ.
ಆಗ ಪರಸ್ಪರ ಎರಡು ಗುಂಪುಗಳ ನಡುವೆ ಮಾತಿನ ಚಕಮಕಿ ನಡೆದು ಕೈ ಕೈ ಮಿಲಾಯಿಸುವ ಹಂತಕ್ಕೆ ತಲುಪಿತ್ತು. ಈ ಸಂದರ್ಭದಲ್ಲಿ ಮುಖಂಡರು ಮಧ್ಯಪ್ರವೇಶಿಸಿ ಗಲಾಟೆಯನ್ನು ನಿಯಂತ್ರಿಸಿದ್ದಾರೆ.
ಕಾಂಗ್ರೇಸ್ ಟಿಕೆಟ್ ಆಕಾಂಕ್ಷಿಗಳಾಗಿ ನಯನ ಮೋಟಮ್ಮ, ಶ್ರೀಮತಿ ನಾಗರತ್ನ, ಎಂ.ಸಿ.ಹೂವಪ್ಪ, ಶ್ರೀರಂಗಯ್ಯ, ಪ್ರಭಾಕರ್ ಬಿನ್ನಡಿ ಅರ್ಜಿ ಸಲ್ಲಿಸಿದ್ದಾರೆ.
ಈ ನಡುವೆ ಮಾಜಿ ಸಚಿವೆ ಶ್ರೀಮತಿ ಮೋಟಮ್ಮನವರೇ ಅಭ್ಯರ್ಥಿಯಾಗಬೇಕು ಎಂದು ಅನೇಕ ಮುಖಂಡರು ಮತ್ತು ಕಾರ್ಯಕರ್ತರು ವೀಕ್ಷಕರೆದುರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.
ಒಟ್ಟಾರೆ ಮೂಡಿಗೆರೆ ಕಾಂಗ್ರೇಸ್ ಪಕ್ಷದಲ್ಲಿ ಟಿಕೆಟ್ ನೀಡುವ ವಿಚಾರದಲ್ಲಿ ಬೂದಿಮುಚ್ಚಿದ ಕೆಂಡದಂತಿದ್ದ ಭಿನ್ನಾಭಿಪ್ರಾಯ ಇಂದು ವೀಕ್ಷಕರೆದುರು ಸ್ಪೋಟಗೊಂಡಿದೆ.