ಸಮಾಜದಲ್ಲಿ ನಡೆಯುತ್ತಿರುವ ಘಟನೆ ಬಗ್ಗೆ ತಿಳಿದುಕೊಳ್ಳಲು ಕಾತರದಿಂದ ಕಾದು ಪತ್ರಿಕೆ ಓದುವ ಕಾಲಘಟ್ಟವಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಮೊಬೈಲ್ ಬಳಕೆಯಿಂದ ಓದುಗರ ಸಂಖ್ಯೆ ಕ್ಷೀಣಿಸುತ್ತಿದೆ ಎಂದು ಮಾಜಿ ಸಚಿವ ಬಿ.ಬಿ.ನಿಂಗಯ್ಯ ಹೇಳಿದರು.
ಅವರು ಶನಿವಾರ ಪಟ್ಟಣದ ಬಿಜಿಎಸ್ ಶಾಲೆಯಲ್ಲಿ ಮಲೆನಾಡು ಮಿಂಚು ಪಾಕ್ಷಿಕ ಪತ್ರಿಕೆ ದಶಮಾನೋತ್ಸವದ ಅಂಗವಾಗಿ ಏರ್ಪಡಿಸಿದ್ದ ತಾಲೂಕು ಮಟ್ಟದ ಚದುರಂಗ ಸ್ಪರ್ಧೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಮೊಬೈಲ್ ಬರುವ ಮುನ್ನ ಸಮಾಜದ ಅಂಕು ಡೊಂಕು ತಿದ್ದುವ ಸಂವಿಧಾನದ 4ನೇ ಅಂಗ ಪತ್ರಿಕಾರಂಗಕ್ಕೆ ಮಹತ್ವ ಇತ್ತು. ಪತ್ರಕರ್ತರು ಬರೆದ ಸುದ್ದಿಗಳಿಗೆ ಮುಖ್ಯಮಂತ್ರಿಗಳೆ ಹೆದರುವ ಕಾಲವಿತ್ತು. ಅದರೆ ಈಗ ಎಲ್ಲಾ ರಂಗದಲ್ಲೂ ಕೂಡ ಕಲುಷಿತ ವಾತಾವರಣ ಸೃಷ್ಟಿಯಾಗಿರುವುದು ದುರಂತ. ಯಾವುದೇ ಆಮಿಷಕ್ಕೆ ಒಳಗಾಗದೇ ನೈಜ ವರದಿ ನೀಡುವ ಮೂಲಕ ಸಮಾಜ ಪರಿವರ್ತನೆಗೆ ಪತ್ರಕರ್ತರು ಶ್ರಮಿಸಬೇಕೆಂದು ಹೇಳಿದರು.
ನಿವೃತ್ತ ಜಿಲ್ಲಾಧಿಕಾರಿ ಶ್ರೀರಂಗಯ್ಯ ಮಾತನಾಡಿ, ದೈಹಿಕ ಸದೃಡತೆಗೆ ಹಲವಾರು ಕ್ರೀಡೆಗಳಿವೆ. ಆದರೆ ಚದುರಂಗ ಆಡುವುದರಿಂದ ಮಾನಸಿಕವಾಗಿ ಪ್ರಬಲಗೊಳ್ಳುವ ಜತೆಗೆ ಏಕಾಗ್ರತೆ ಹೆಚ್ಚಿಸುತ್ತದೆ. ಇದರಿಂದ ವ್ಯಾಸಾಂಗಕ್ಕೆ ಅನುಕೂಲವಾಗುತ್ತದೆ. ಮೊಬೈಲ್ ಬಳಕೆಯಿಂದ ವಿದ್ಯಾರ್ಥಿಗಳು ದಾರಿ ತಪ್ಪುವ ಸಾಧ್ಯತೆ ಹೆಚ್ಚಿರುವುದಿಂದ ಈ ಬಗ್ಗೆ ಪೋಷಕರು ಎಚ್ಚರವಹಿಸಬೇಕೆಂದು ಹೇಳಿದರು.
ಚದುರಂಗ ಆಟದ ಸ್ಪಧೆಯಲ್ಲಿ ಸುಮಾರು 200ಕ್ಕೂ ಅಧಿಕ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಸಂಜೆ ಗೆಲುವು ಸಾಧಿಸಿದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಲೆನಾಡ ಮಿಂಚು ಪತ್ರಿಕೆ ಸಂಪಾದಕ ಪ್ರಸನ್ನ ಕುಮಾರ್ ವಹಿಸಿದ್ದರು. ಜಿಲ್ಲಾ ಚೆಸ್ ಅಸೋಸಿಯೇಷನ್ ಜಿಲ್ಲಾಧ್ಯಕ್ಷ ನಯನ ತಳವಾರ, ಬಿಜೆಪಿ ಜಿಲ್ಲಾ ವಕ್ತಾರ ದೀಪಕ್ ದೊಡ್ಡಯ್ಯ, ಕರುನಾಡ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ರುದ್ರೇಶ್ ಕಹಳೆ, ಬಿ.ಜೆ.ಪಿ. ಮುಖಂಡ ವಿಜಯಕುಮಾರ್, ಬಿಜಿಎಸ್ ಕಾಲೇಜು ಪ್ರಾಂಶುಪಾಲ ಮಂಜುನಾಥ್ ಪ್ರಸಾದ್, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ತಾಲೂಕು ಅಧ್ಯಕ್ಷ ಎ.ಆರ್.ಉದಯಶಂಕರ್, ಹಿರಿಯ ಪತ್ರಕರ್ತ ಎಂ.ಎಚ್.ಅಮರ್ನಾಥ್, ಹಿಂದುಳಿದ ವರ್ಗಗಳ ಒಕ್ಕೂಟದ ಪ್ರಚಾರ ಸಮಿತಿ ಅಧ್ಯಕ್ಷ ಉಮಾಶಂಕರ್, ಜಯ ಡೈವಿಂಗ್ ಸ್ಕೂಲ್ ಮಾಲೀಕ ಸಂತೋಷ್ ಹಂಡುಗುಳಿ ಮತ್ತಿತರರಿದ್ದರು.