ಮೂಡಿಗೆರೆ ತಾಲೂಕಿನ ಹಳೆಮೂಡಿಗೆರೆ ಗ್ರಾ.ಪಂ. ವ್ಯಾಪ್ತಿಯ ಸರ್ವೋದಯನಗರ ಸ.ನಂ7ರಲ್ಲಿ ನಿವೇಶನಕ್ಕಾಗಿ ಕಾಯ್ದಿರಿಸಿದ್ದ ಜಾಗವನ್ನು ಗುರುತುಪಡಿಸಿ ಗ್ರಾ.ಪಂ.ಗೆ ವಹಿಸಲಾಗುವುದು ಎಂದು ತಹಸೀಲ್ದಾರ್ ನಾಗರಾಜು ಹಾಗೂ ಸರ್ವೇ ಇಲಾಖೆ ಎಡಿಎಲ್ಆರ್ ಜಗದೀಶ್ ಭರವಸೆ ನೀಡಿದ ಹಿನ್ನಲೆಯಲ್ಲಿ ವಸತಿಗಾಗಿ ಹೋರಾಟ ವೇದಿಕೆ ನಡೆಸುತ್ತಿದ್ದ ಅನಿರ್ಧಿಷ್ಟಾವಧಿ ಧರಣಿಯನ್ನು ಹಿಂಪಡೆಯಿತು.
ಸಿಪಿಐಎಂಎಲ್ ರಾಜ್ಯ ಕಾರ್ಯದರ್ಶಿ ಬಿ.ರುದ್ರಯ್ಯ ಮಾತನಾಡಿ, 2017ರಲ್ಲಿ ಡಿಸಿ ಸತ್ಯವತಿ ಇದ್ದಾಗ ಹಳೆಮೂಡಿಗೆರೆ ಗ್ರಾ.ಪಂ. ವ್ಯಾಪ್ತಿಯಲ್ಲಿ 7.30 ಎಕರೆ ಸರಕಾರಿ ಭೂಮಿಯಲ್ಲಿ ಅಂಬೇಡ್ಕರ್ ಭವನ, ಪೊಲೀಸ್ ನೌಕರರ ವಸತಿಗೃಹ, ಹಾಸ್ಟೆಲ್ ಹಾಗೂ ವಸತಿ ರಹಿತರಿಗೆ ನಿವೇಶನಕ್ಕಾಗಿ ಮೀಸಲಿರಿಸಲಾಗಿತ್ತು. ಅದಕ್ಕೆ ರಸ್ತೆ ಗುರುತಿಸಿಕೊಡಬೇಕು. ನಿವೇಶನಕ್ಕೆ ಮೀಸಲಿರಿಸಿದ್ದ ಜಾಗ ಗಡಿ ಗುರುತು ಮಾಡಿಕೊಡಬೇಕೆಂದು 5 ವರ್ಷದಿಂದ 60ಕ್ಕೂ ಅಧಿಕ ಹೋರಾಟ ನಡೆಸಲಾಗಿದೆ. ಆದರೆ ಯಾವುದೇ ಪ್ರಯೋಜನವಾಗಿಲ್ಲ. ಸ್ಥಳಕ್ಕೆ ತಹಸೀಲ್ದಾರ್ ಮತ್ತು ಎಡಿಎಲ್ಆರ್ ಆಗಮಿಸಿ ಸಮಸ್ಯೆ ಬಗೆಹರಿಸುವವರೆಗೂ ಧರಣಿ ಹಿಂಪಡೆಯುವುದಿಲ್ಲವೆಂದು ಹೇಳಿದರು.
ಬಳಿಕ ತಹಸೀಲ್ದಾರ್, ನಾಗರಾಜು ಹಾಗೂ ಎಡಿಎಲ್ಆರ್ ಜಿ.ಜಗದೀಶ್ ಸ್ಥಳಕ್ಕೆ ಆಗಮಸಿದಾಗ, ನಿವೇಶನಕ್ಕಾಗಿ ಮೀಸಲಿರಿಸಿದ್ದ ಜಾಗವನ್ನು ಬೇರೆಯವರಿಗೆ ಮಾಡಿಕೊಡುವ ಉದ್ದೇಶದಿಂದ ನಕಲಿ ದಾಖಲೆ ಸೃಷ್ಟಿಸಿ ಸಮಸ್ಯೆ ಉದ್ಭವಿಸಿದ್ದಾರೆ. ಈ ಅಕ್ರಮದಲ್ಲಿ ಬಾಗಿಯಾಗಿರುವ ಅಧಿಕಾರಿಗಳನ್ನು ಅಮಾನತುಪಡಿಸಿ ಕೂಡಲೇ ಗಡಿಗುರುತಿಸಿ ಗ್ರಾ.ಪಂ.ಗೆ ವಹಿಸಬೇಕೆಂದು ಧರಣಿ ನಿರತರು ಒತ್ತಾಯಿಸಿ ಮನವಿ ಸಲ್ಲಿಸಿದರು.
ಮನವಿ ಸ್ವೀಕರಿಸಿ ಎಡಿಎಲ್ಆರ್ ಜಿ.ಜಗದೀಶ್ ಮಾತನಾಡಿ, ನಿವೇಶನ, ರಸ್ತೆ ಹಾಗೂ ಸ್ಮಶಾನ ಜಾಗ ಸಮಸ್ಯೆ ಬಗೆಹರಿಸಲು ಸರ್ವೆ ತಂಡ ರಚಿಸಿ, ಶುಕ್ರವಾರ ಗಡಿ ಗುರುತು ಮಾಡುವ ಕಾರ್ಯ ನಡೆಸುತ್ತೇವೆ. ಧರಣಿಯನ್ನು ಹಿಂಪಡೆದು ಒಂದು ಅವಕಾಶ ಕೊಡಿ ಎಂದು ಮನವಿ ಮಾಡಿಕೊಂಡ ಬಳಿಕ ಧರಣಿ ಹಿಂಪಡೆಯಲಾಯಿತು.
ಹಳೇ ಮೂಡಿಗೆರೆ ಗ್ರಾ.ಪಂ. ಅಧ್ಯಕ್ಷ ಶಿವಾನಂದ್, ಸದಸ್ಯರಾದ ಜುಬೇರ್, ಜ್ಯೋತಿ, ವಸತಿಗಾಗಿ ಹೋರಾಟ ವೇದಿಕೆ ಅಧ್ಯಕ್ಷೆ ಲಕ್ಷ್ಮೀ, ಕಾರ್ಯದರ್ಶಿ ಶಿವಪ್ಪ, ಗೌರವಾಧ್ಯಕ್ಷ ಕೆ.ಕೆ.ಕೃಷ್ಣಪ್ಪ, ಜಾನಕಿ, ಶಾರದ, ದಯಾನಂದ, ಕೃಷ್ಣ ಮಗ್ಗಲಮಕ್ಕಿ, ಆಯಿಷಾ, ಪ್ರಸಾಧ್, ಸಂತೋಷ್, ಗುರು, ಮಮತ, ರಮ್ಯ, ರಾಮು, ಮಂಜುಳ, ವಿಠಲ, ಸಫಿಯಾ ಮತ್ತಿತರರಿದ್ದರು.
*****