ಮೂಡಿಗೆರೆ ತಾಲೂಕಿನ ಗೌತಳ್ಳಿ ಪುರ ಗ್ರಾಮದ ವ್ಯಕ್ತಿಯೊಬ್ಬರು ಅನುಮಾನಾಸ್ಪದ ರೀತಿಯಲ್ಲಿ ಸಾವನ್ನಪ್ಪಿದ್ದು ಕೇಸು ದಾಖಲಾಗಿದೆ.
ಪುರ ಗ್ರಾಮದ ರೈತ ಸುರೇಶ್ (ನಿಂಗೇಗೌಡ) (53 ವರ್ಷ) ಅನುಮಾನಾಸ್ಪದವಾಗಿ ಮೃತಪಟ್ಟವರು.
ನಿನ್ನೆ ರಾತ್ರಿ ಸುಮಾರು 8 ಗಂಟೆ ಸಮಯದಲ್ಲಿ ಮನೆ ಸಮೀಪದ ಭತ್ತದ ಗದ್ದೆಗೆ ತೆರಳಿದ್ದರು ಎನ್ನಲಾಗಿದೆ. ಗದ್ದೆಗೆ ಕಾಡು ಹಂದಿ ಕಾಟವಿದ್ದುದರಿಂದ ಅವರು ಅಲ್ಲಿ ಹಂದಿಗಳನ್ನು ಬೆದರಿಸಲು ಬ್ಯಾಟರಿ ಚಾಲಿತ ಮೈಕ್ ಅಳವಡಿಸಿದ್ದರು. ನಿನ್ನೆ ರಾತ್ರಿ ಮೈಕ್ ಆನ್ ಮಾಡಿದ ನಂತರ ಮನೆಗೆ ಬರುವ ದಾರಿಯಲ್ಲಿರುವ ಕಾಲುವೆವೊಂದರಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಅವರ ದೇಹ ಪತ್ತೆಯಾಗಿತ್ತು.
ಮನೆಗೆ ಬರುವುದು ತಡವಾಗಿದ್ದರಿಂದ ಮತ್ತು ಮೊಬೈಲ್ ಕರೆ ಸ್ವೀಕರಿಸದ ಕಾರಣ ಕುಟುಂಬಸ್ಥರು ಹುಡುಕುವಾಗ ರಾತ್ರಿ ಸುಮಾರು 10 ಗಂಟೆಯ ಹೊತ್ತಿಗೆ ಅವರ ಮೃತದೇಹ ಮನೆಯಿಂದ ಇನ್ನೂರು ಮೀಟರ್ ದೂರದಲ್ಲಿ ನೀರಿನ ಕಾಲುವೆಯೊಳಗೆ ಮುಖ ಕೆಳಗಾಗಿ ಕಲ್ಲಿಗೆ ತಾಗಿ ಬಿದ್ದಿರುವ ಸ್ಥಿತಿಯಲ್ಲಿ ಪತ್ತೆಯಾಗಿದೆ.
ದೇಹದ ತಲೆಯ ಮುಂಭಾಗ, ಹಿಂಭಾಗ, ಕಿವಿ ಭಾಗದಲ್ಲಿ ತೀವ್ರವಾಗಿ ಗಾಯಗಳಾಗಿದ್ದು ಮೃತದೇಹ ಪತ್ತೆಯಾದ ಸನ್ನಿವೇಶ ಹಲವು ಅನುಮಾನಗಳಿಗೆ ಕಾರಣವಾಗಿದೆ. ಅವರು ಧರಿಸಿದ್ದ ಜರ್ಕಿನ್ ಮತ್ತು ಶರ್ಟ್ ದೇಹದ ಪಕ್ಕದಲ್ಲಿ ಬಿಚ್ಚಿಟ್ಟಿದೆ.
ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿ ಕುಟುಂಬದ ಸದಸ್ಯರು ಮೂಡಿಗೆರೆ ಠಾಣೆಗೆ ದೂರು ನೀಡಿರುತ್ತಾರೆ.
ಮೂಡಿಗೆರೆ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು ಮೃತದೇಹದ ಮರಣೋತ್ತರ ಪರೀಕ್ಷೆಗಾಗಿ ಚಿಕ್ಕಮಗಳೂರು ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ.
ಸೆಕ್ಷನ್ 174/3, 174/4 ಪ್ರಕರಣ ದಾಖಲಿಸಿದ್ದು ತನಿಖೆ ನಡೆಸಲಾಗುವುದು ಎಂದು ಮೂಡಿಗೆರೆ ಠಾಣಾಧಿಕಾರಿ ಆದರ್ಶ್ ಮಾಹಿತಿ ನೀಡಿರುತ್ತಾರೆ.
ಮೃತರು ಪತ್ನಿ, ಪುತ್ರ ಮತ್ತು ಕುಟುಂಬದವರನ್ನು ಅಗಲಿದ್ದಾರೆ.