ಸುಮಾರು 40 ವರ್ಷದಿಂದ ರೈತ ಸಂಘಟನೆಯಲ್ಲಿ ರೈತ ಸಂಘದ ಸಿದ್ಧಾಂತದಡಿ ಪ್ರಾಮಾಣಿಕವಾಗಿ ಹೋರಾಟ ಮಾಡಿಕೊಂಡು ಬಂದಿದ್ದ ರೈತ ಸಂಘದ ಜಿಲ್ಲಾಧ್ಯಕ್ಷ ದುಗ್ಗಪ್ಪಗೌಡ ಅವರ ವಿರುದ್ಧ ಅಧಿಕಾರಿಗಳು ಹಾಗೂ ರಾಜಕೀಯ ಪ್ರೇರಿತ ಬಲ ಪ್ರಯೋಗ ಮಾಡಿ, ಹೋರಾಟ ಹತ್ತಿಕ್ಕುವ ಜತೆಗೆ ದೌರ್ಜನ್ಯ ಎಸಗಿಸುವ ಕೆಲಸ ಮಾಡಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯ ಉಪಾಧ್ಯಕ್ಷ ಎಂ.ಮಹೇಶ್ ಆರೋಪಿಸಿದರು.
ಅವರು ಸೋಮವಾರ ಪಟ್ಟಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸ್ವಾತಂತ್ರ್ಯ ಬಂದ 33 ವರ್ಷ ನಂತರ ರೈತ ಸಂಘಟನೆ ಹುಟ್ಟಿಕೊಂಡವು. ಹಿಂದಿನಿಂದಲೂ ಆಳವ ಸರಕಾರ ರೈತರ ವಿರುದ್ಧ ಬಲ ಪ್ರಯೋಗ ಮಾಡುತ್ತಲೇ ಬಂದಿವೆ. ಬಂಡವಾಳಶಾಹಿಗಳು, ಭ್ರಷ್ಟ ಅಧಿಕಾರಿಗಳು ಹಾಗೂ ರಾಜಕಾರಣಿಗಳ ರೈತ ವಿರೋಧಿ ಧೋರಣೆಯಿಂದ ರೈತರು ನೆಮ್ಮದಿಯಿಂದ ಬದುಕದಿರುವಂತೆ ಮಾಡಿದ್ದಾರೆ. ಇವರನ್ನು ಎರಡನೇ ಭ್ರಿಟೀಷರೆಂದರೆ ತಪ್ಪಾಗಲಾರದು. ರೈತ ಸಂಘದ ಜಿಲ್ಲಾಧ್ಯಕ್ಷ ದುಗ್ಗಪ್ಪಗೌಡ ಅವರ ಮೇಲೆ ಕೂಡ ಸವಾರಿ ನಡೆದಿದೆ ಎಂದು ದೂರಿದರು.
ಪ.ಪಂ. ವ್ಯಾಪ್ತಿಯಲ್ಲಿ ಪ.ಪಂ. ಅಧಿಕಾರಿಗಳು ಸಾರ್ವಜನಿಕ ಗ್ರಾಮಠಾಣ ಜಾಗದಲ್ಲಿ ಅವ್ಯವಹಾರ ನಡೆಸಿದ್ದಾರೆಂದು ಜಿಲ್ಲಾಧಿಕಾರಿಗಳಿಗೆ 2021 ರಲ್ಲಿಯೇ ದೂರು ನೀಡಲಾಗಿತ್ತು. ಅದಕ್ಕೆ ಡಿಸಿ ಅವರು ತನಿಖಾ ಸಮಿತಿ ರಚನೆ ಮಾಡಿ 8 ತಿಂಗಳು ಕಳೆದರೂ ವರದಿ ಸಲ್ಲಿಸದೇ ಕಾಲ ಕಳೆದಿದ್ದರು. ವರದಿ ಸಲ್ಲಿಸಿದ್ದರೆ ಗಲಭೆಗೆ ಸೃಷ್ಟಿಯಾಗುತ್ತಿರಲಿಲ್ಲ. ಇದು ಸಮಗ್ರ ತನಿಖೆಯಾದರೆ ಅಧಿಕಾರಿಗಳೇ ಭೂ ಮಾಫೀಯಾದಲ್ಲಿ ಪಾಲ್ಗೊಂಡಿರುವುದು ಬೆಳಕಿಗೆ ಬರುತ್ತದೆ.
ಈ ಬಗ್ಗೆ ಜಿಲ್ಲಾಧಿಕಾರಿಗಳು ಸಮಗ್ರ ತನಿಖೆ ನಡೆಸಬೇಕು. ಗ್ರಾಮಠಾಣ ಜಾಗದಲ್ಲಿ ಓಡಾಡುವ ರಸ್ತೆಗೆ ಬೇಲಿ ಹಾಕಲಾಗಿದೆ. ಈ ಬಗ್ಗೆ ಜಿಲ್ಲಾಧಿಕಾರಿಗಳಿಗೆ ದೂರು ನೀಡಿದರೂ ಕ್ರಮ ಕೈಗೊಂಡಿಲ್ಲ. ಹಾಗಾಗಿ ಜಿಲ್ಲಾಡಳಿತ ನಿರ್ಲಕ್ಷ್ಯ ಖಂಡಿಸಿ ಜ.2ರಂದು ಪಟ್ಟಣದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಗುವುದು. ಪ್ರತಿಭಟನೆಗೆ ಸಂಘದ ರಾಜ್ಯಾಧ್ಯಕ್ಷ ಎಚ್.ಆರ್.ಬಸವರಾಜು, ರಾಜ್ಯ ಪದಾಧಿಕಾರಿಗಳು ಆಗಮಿಸಲಿದ್ದಾರೆ. ರೈತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಮನವಿ ಮಾಡಿದರು.
ರೈತ ಸಂಘದ ಜಿಲ್ಲಾ ಕಾರ್ಯಾಧ್ಯಕ್ಷ ಬಿ.ಸಿ.ದಯಾಕರ್, ಜಿಲ್ಲಾಧ್ಯಕ್ಷ ಡಿ.ಆರ್.ದುಗ್ಗಪ್ಪಗೌಡ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ವೃಷಭರಾಜ್, ಜಿಲ್ಲಾ ಉಪಾಧ್ಯಕ್ಷ ಮಂಜೇಗೌಡ, ತರಿಕೆರೆ ತಾಲೂಕು ಅಧ್ಯಕ್ಷ ಎನ್.ಓಂಕಾರಪ್ಪ, ಚಿಕ್ಕಮಗಳೂರು ತಾಲೂಕು ಅಧ್ಯಕ್ಷ ತುಳಸೇಗೌಡ, ಅಣ್ಣೇಗೌಡ ಮತ್ತಿತರರಿದ್ದರು.