ನಾಯಿ ಕಡಿತಕ್ಕೆ ಸೂಕ್ತ ಚಿಕಿತ್ಸೆ ಪಡೆಯದ ಬಾಲಕ ಆರು ತಿಂಗಳ ಬಳಿಕ ರೇಬಿಸ್ ನಿಂದ ಸಾವನ್ನಪ್ಪಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಆಲ್ದೂರು ಸಮೀಪದ ಕುಂದೂರು ಕಾರ್ಲ ಗದ್ದೆ ಗ್ರಾಮದಲ್ಲಿ ನಡೆದಿದೆ.
12 ವರ್ಷದ ಪ್ರಧಾನ್ ಮೃತ ಬಾಲಕ. ಕುಂದೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾರ್ಲ ಗದ್ದೆ ಗ್ರಾಮದ ರಮೇಶ್ ಅವರ ಮಗ ಮನೆ ಮುಂದೆ ಆಟವಾಡುವಾಗ ಬೀದಿ ನಾಯಿ ಬಾಲಕನ ಮೇಲೆ ದಾಳಿ ಮಾಡಿತ್ತು. ಬೀದಿ ನಾಯಿ ದಾಳಿ ಮಾಡಿದಾಗ ಮನೆಯವರು ಸೂಕ್ತ ಚಿಕಿತ್ಸೆ ಕೊಡಿಸಬೇಕಿತ್ತು. ಆದರೆ, ನಾಯಿ ದಾಳಿ ಮಾಡಿದರೂ ಸೂಕ್ತ ಚಿಕಿತ್ಸೆ ಕೊಡಿಸದ ಕಾರಣ ಬಾಲಕ ಸಾವನ್ನಪ್ಪಿದ್ದಾನೆ ಎಂದು ಹೇಳಲಾಗಿದೆ.
ವಾರದ ಹಿಂದೆ ತೀವ್ರ ಜ್ವರ ಕಾಣಿಸಿಕೊಂಡಿದ್ದರಿಂದ ಬಾಲಕನನ್ನು ಹಾಸನದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಹಾಸನದ ಆಸ್ಪತ್ರೆಯಲ್ಲಿ ನಾಯಿ ಕಡಿತದಿಂದ ರೇಬಿಸ್ ಕಾಯಿಲೆಗೆ ತುತ್ತಾಗಿದ್ದಾನೆ ಎಂದು ವೈದ್ಯರು ತಿಳಿಸಿದ್ದಾರೆ. ಕೂಡಲೇ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಬಾಲಕ ಸಾವಿಗೀಡಾಗಿದ್ದಾನೆ.
ಮಗನನ್ನು ಕಳೆದುಕೊಂಡ ಕುಟುಂಬ ಸದಸ್ಯರ ಆಕ್ರಂದನ ಮುಗಿಲು ಮುಟ್ಟಿತ್ತು.
ನಿರ್ಲಕ್ಷ್ಯದಿಂದ ಮಗನನ್ನು ಕಳೆದುಕೊಂಡರು : ಬೀದಿನಾಯಿ ಕಡಿದಾಗ ಅದನ್ನು ನಿರ್ಲಕ್ಷ್ಯ ಮಾಡಿದ್ದು ಈಗ ಬೆಳೆದುನಿಂತಿದ್ದ ಮಗನನ್ನು ಕಳೆದುಕೊಳ್ಳುವಂತಹ ದುಃಖದ ಸ್ಥಿತಿಯನ್ನು ತಂದೊಡ್ಡಿದೆ. ಬಹುತೇಕರು ನಾಯಿಕಚ್ಚಿದಾಗ ನಿರ್ಲಕ್ಷ್ಯ ಮಾಡುತ್ತೇವೆ. ಅದು ಮುಂದೆ ಜೀವನದಲ್ಲಿ ದೊಡ್ಡ ಆಘಾತಕ್ಕೆ ಕಾರಣವಾಗುತ್ತದೆ.
ಯಾವುದೇ ನಾಯಿ, ಬೆಕ್ಕು ಕಚ್ಚಿದಾಗ ಕೂಡಲೇ ಸೂಕ್ತ ಚಿಕಿತ್ಸೆ ಪಡೆದುಕೊಳ್ಳಬೇಕು. ನಾಯಿ, ಬೆಕ್ಕುಗಳಲ್ಲಿ ರೇಬಿಸ್ ರೋಗ ಲಕ್ಷಣಗಳು ಇರುತ್ತದೆ. ಪ್ರಾಣಿಗಳ ಕಡಿತದಿಂದ ಉಂಟಾಗುವ ರೋಗಗಳು ಆರಂಭದಲ್ಲಿ ಕಾಣಿಸಿಕೊಳ್ಳುವುದಿಲ್ಲ. ಚಿಕಿತ್ಸೆ ಪಡೆಯದಿದ್ದರೆ ಯಾವಾಗ ಬೇಕಾದರೂ ರೋಗ ಉಲ್ಬಣಿಸಿ ಜೀವಕ್ಕೆ ಮಾರಕವಾಗಲಿದೆ.