ಇತ್ತೀಚೆಗೆ ನೆರವೇರಿದ ದತ್ತಜಯಂತಿ ಸಂದರ್ಭದಲ್ಲಿ ದತ್ತಪೀಠಕ್ಕೆ ಸಾಗುವ ರಸ್ತೆಯುದ್ದಕ್ಕು ಮೊಳೆ ಚೆಲ್ಲಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ಬಂಧಿಸಲಾಗಿದೆ.
ಚಿಕ್ಕಮಗಳೂರು ನಗರದ ದುಬೈ ನಗರದ ಮೊಹಮ್ಮದ್ ಶಹಬಾಸ್ ಮತ್ತು ವಾಹಿದ್ ಹುಸೇನ್ ಬಂಧಿತ ಆರೋಪಿಗಳು.
ದತ್ತಜಯಂತಿಗೆ ತೆರಳುವ ಭಕ್ತರಿಗೆ ತೊಂದರೆ ಕೊಡುವ ಉದ್ದೇಶದಿಂದ ಈ ಕುಕೃತ್ಯ ಎಸಗಿದ್ದರು. ರಸ್ತೆಯ ಉದ್ದಕ್ಕೂ ಅನೇಕ ಕಡೆ ಚೂಪಾದ ಮೊಳೆಗಳನ್ನು ಚೆಲ್ಲಿದ್ದರು. ಇದರಿಂದ ಅನೇಕ ವಾಹನಗಳು ಪಂಕ್ಚರ್ ಆಗಿದ್ದವು. ವಿಷಯ ತಿಳಿದ ಭಜರಂಗದಳ ಕಾರ್ಯಕರ್ತರು ಮತ್ತು ಪೊಲೀಸರು ಸ್ಥಳಕ್ಕಾಗಮಿಸಿ ಮೊಳೆಗಳನ್ನು ತೆರವುಗೊಳಿಸಿದ್ದರು.
ನಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆಗೆ ಪ್ರತ್ಯೇಕ ತಂಡ ರಚಿಸಿದ್ದರು. ತನಿಖೆ ನಡೆಸಿದ ಪೊಲೀಸರು ನಗರದ ಹಾರ್ಡ್ ವೇರ್ ಒಂದರಿಂದ ನಾಲ್ಕು ಕೆ.ಜಿ ಮೊಳೆ ಖರೀದಿಸಿದ ಮಾಹಿತಿಯ ಜಾಡುಹಿಡಿದು ಆರೋಪಿಗಳನ್ನು ಬಂಧಿಸಿದ್ದಾರೆ. ಇನ್ನು ಹಲವರು ಕೃತ್ಯದಲ್ಲಿ ಭಾಗಿಯಾಗಿರುವ ಬಗ್ಗೆ ಪೊಲೀಸರ ತನಿಖೆಯಿಂದ ತಿಳಿದುಬಂದಿದ್ದು ಅವರ ಬಂಧನಕ್ಕೆ ಬಲೆ ಬೀಸಿದ್ದಾರೆ.