ಡಿಸೆಂಬರ್ ತಿಂಗಳಲ್ಲಿ ಸುರಿಯುತ್ತಿರುವ ನಿರಂತರ ಮಳೆ, ತಂಡಿ ವಾತಾವರಣದಿಂದ ರೈತರ ಬದುಕು ಸಂಕಷ್ಟಕ್ಕೆ ಸಿಲುಕಿದೆ.
ಕಳೆದ ಒಂದು ವಾರದಿಂದ ಮೋಡಕವಿದ ವಾತಾವರಣವಿದ್ದು ನಿರಂತರ ಮಳೆ ಸುರಿಯುತ್ತಿದೆ. ನಿನ್ನೆ ಸಂಜೆ ಮಲೆನಾಡಿನ ಬಹುತೇಕ ಕಡೆ ಜಡಿ ಮಳೆ ಸುರಿದಿದೆ.
ಅಕಾಲಿಕ ಮಳೆಯಿಂದಾಗಿ ರೈತರ ಜೀವನ ಅಯೋಮಯವಾಗುತ್ತಿದೆ. ಈಗ ಎಲ್ಲಾ ಫಸಲುಗಳನ್ನು ಕೊಯ್ಲು ಮಾಡುವ ಸಮಯ. ಮಳೆಯಿಂದಾಗಿ ಕೈಗೆ ಬಂದ ತುತ್ತು ಬಾಯಿಗೆ ಇಲ್ಲದಂತಾಗಿದೆ.
ಭತ್ತವನ್ನು ಬೆಳೆದ ರೈತರ ಪಾಡು ಹೇಳತೀರದಾಗಿದೆ. ಮೊದಲೇ ಭತ್ತದ ಬೆಳೆಯಲ್ಲಿ ಲಾಭಾಂಶವಿಲ್ಲ. ಬಹುತೇಕ ರೈತರು ಗದ್ದೆ ಮಾಡುವುದನ್ನು ಬಿಟ್ಟಿದ್ದಾರೆ. ಕೆಲವು ರೈತರು ತಮ್ಮ ಸಾಂಪ್ರದಾಯಿಕ ಬೆಳೆ ಬಿಡಬಾರದು ಎಂದು ಕಷ್ಟಪಟ್ಟು ಭತ್ತವನ್ನು ಬೆಳೆದಿದ್ದಾರೆ. ಭತ್ತದ ಗದ್ದೆಗಳು ಈಗ ತೆನೆತುಂಬಿ ಇನ್ನೇನು ಕೊಯ್ಲು ಮಾಡುವ ಹಂತದಲ್ಲಿದೆ. ಈಗ ಸುರಿದ ಮಳೆಯಿಂದ ಭತ್ತದ ಫೈರು ನೆಲಕ್ಕೊರಗಿವೆ. ತೆನೆಗಳಿಂದ ಭತ್ತ ನೆಲಕ್ಕೆ ಸುರಿಯುತ್ತಿದೆ. ಭತ್ತದ ಹುಲ್ಲು ಮಳೆಯಿಂದ ಹಾಳಾಗುತ್ತಿದೆ. ಇದು ಭತ್ತ ಬೆಳೆದವರನ್ನು ಹೈರಾಣು ಮಾಡುತ್ತಿದೆ.
ಇನ್ನು ಕಾಫಿ ಹಣ್ಣು ಕೊಯ್ಲು ಮಾಡುವ ಸಮಯ. ಗಿಡದಲ್ಲಿ ಹಣ್ಣಾಗಿ ನಿಂತಿರುವ ಕಾಫಿ ಮಳೆಯಿಂದಾಗಿ ನೆಲ ಸೇರುತ್ತಿದೆ. ಕೊಯ್ಲು ಮಾಡಿ ಕಣದಲ್ಲಿ ಹರಡಿರುವ ಕಾಫಿ ಬಿಸಿಲು ಕಾಣದೇ ಕೊಳೆತು ಹೋಗುತ್ತಿದೆ. ಮಳೆಯಿಂದಾಗಿ ಕೊಯ್ಲು ಮಾಡಲು ಸಾಧ್ಯವಾಗುತ್ತಿಲ್ಲ. ಅರೇಬಿಕಾ ಕಾಫಿ ಬಹುತೇಕ ಈ ಬಾರಿ ಹಾಳಾಗುತ್ತಿದೆ. ಒಂದು ಕಡೆಯಿಂದ ಕಾಫಿ ಬೆಲೆ ಕುಸಿತವಾಗುತ್ತಿದೆ ಮತ್ತೊಂದು ಕಡೆ ಮಳೆಯಿಂದ ಕಣ್ಣೆದುರು ಇರುವ ಫಸಲನ್ನು ಪಡೆಯಲು ಸಾಧ್ಯವಾಗುತ್ತಿಲ್ಲ. ಇದು ರೈತರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ.
ಹಾಗೆಯೇ ಅಡಿಕೆ ಕೊಯ್ಲು ನಡೆಯುತ್ತಿದ್ದು, ಮಳೆಯಿಂದಾಗಿ ಕೊಯ್ಲು ಸಾಧ್ಯವಾಗುತ್ತಿಲ್ಲ. ಮರದಲ್ಲಿರುವ ಬಲಿತ ಅಡಿಕೆ ಹಣ್ಣಾಗಿ ನೆಲ ಸೇರುತ್ತಿದೆ. ಅಡಿಕೆ ಬೆಲೆಯೂ ಕುಸಿಯುತ್ತಿದೆ. ಮಲೆನಾಡಿನಲ್ಲಿ ವ್ಯಾಪಕವಾಗಿರುವ ಅಡಿಕೆ ಎಲೆಚುಕ್ಕಿ ರೋಗವು ಮಳೆಯಿಂದಾಗಿ ಇನ್ನಷ್ಟು ಹಬ್ಬಲು ಕಾರಣವಾಗುತ್ತಿದೆ. ಏಕೆಂದರೆ ತಂಡಿ ವಾರಾವರಣದಲ್ಲಿ ಎಲೆಚುಕ್ಕಿ ರೋಗದ ಶೀಲಿಂದ್ರಗಳು ವೇಗವಾಗಿ ಹರಡಿ ಗಿಡಗಳನ್ನು ನಾಶ ಮಾಡುತ್ತವೆ.
ಒಟ್ಟಾಗಿ ಡಿಸೆಂಬರ್ನಲ್ಲಿ ಚಂಡಮಾರುತಗಳಿಂದಾಗಿ ಇತ್ತೀಚಿನ ವರ್ಷಗಳಲ್ಲಿ ಮಳೆಯಾಗುತ್ತಿದ್ದು ಇದರಿಂದ ರೈತಾಪಿ ವರ್ಗದ ಬದುಕು ಬಹಳ ಕಷ್ಟದಾಯಕವಾಗಿದೆ. ವರ್ಷವಿಡೀ ಕಷ್ಟಪಟ್ಟು ಬೆಳೆದ ಬೆಳೆಗಳು ಕೈಗೆ ಸಿಗದಂತಾಗಿದೆ. ಇದರಿಂದ ಕೇವಲ ರೈತರಿಗೆ ಮಾತ್ರವಲ್ಲ. ಒಟ್ಟಾರೆ ಈ ಭಾಗದ ಆರ್ಥಿಕ ಚಟುವಟಿಕೆಗಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ.