ಮೂಡಿಗೆರೆ ತಾಲೂಕಿನ ಕುಂದೂರು ಕೆಂಜಿಗೆ ಭಾಗದಲ್ಲಿ ನಡೆಯುತ್ತಿರುವ ಕಾಡಾನೆಗಳ ಸೆರೆ ಕಾರ್ಯಾಚರಣೆ ಇಂದು ಅಡಚಣೆಯಾಗಿದೆ. ಅರವಳಿಕೆ ಚುಚ್ಚುಮದ್ದು ನೀಡಲಾಗಿದ್ದ ಕಾಡಾನೆ ಸಾವರಿಸಿಕೊಂಡು ಎದ್ದುಹೋಗಿದೆ.
ಮೂರು ಕಾಡಾನೆಗಳನ್ನು ಹಿಡಿಯುವ ಕಾರ್ಯಾಚರಣೆಯಲ್ಲಿ ಈಗಾಗಲೇ ಎರಡು ಆನೆಗಳನ್ನು ಯಶಸ್ವಿಯಾಗಿ ಸೆರೆಹಿಡಿದು ಸಾಗಿಸಲಾಗಿತ್ತು. ಮೂರನೇ ಆನೆಯನ್ನು ಹಿಡಿಯುವ ನಿಟ್ಟಿನಲ್ಲಿ ಇಂದು ಕಾರ್ಯಾಚರಣೆ ಮುಂದುವರಿಸಲಾಗಿತ್ತು.
ಇಂದು ಬೆಳಿಗ್ಗೆ ಕೆಂಜಿಗೆ ಸಮೀಪದ ಕತ್ಲೆಖಾನ್ ಎಸ್ಟೇಟ್ ಬಳಿ ಎರಡು ಆನೆಗಳು ಇವೆ ಎಂಬ ಮಾಹಿತಿ ದೊರಕಿತ್ತು. ಅಲ್ಲಿಗೆ ಬಂದ ಕಾರ್ಯಾಚರಣೆ ತಂಡ ಮಧ್ಯಾಹ್ನ 12ರಹೊತ್ತಿಗೆ ಆನೆಗಳನ್ನು ಅಟ್ಟಿಸಿಕೊಂಡು ಬಂದಾಗ ಆಯಾಕಟ್ಟಿನ ಜಾಗದಲ್ಲಿ ನಿಂತಿದ್ದ ಅರವಳಿಕೆ ತಜ್ಞರು ದೊಡ್ಡ ಆನೆಯೊಂದಕ್ಕೆ ಯಶಸ್ವಿಯಾಗಿ ಅರವಳಿಕೆ ಚುಚ್ಚುಮದ್ದು ಪ್ರಯೋಗಿಸಿದ್ದರು. ಚುಚ್ಚುಮದ್ದು ನೀಡುವ ಸಂದರ್ಭದ ವಿಡಿಯೋ ಸಹ ಸಾಮಾಜಿಕ ಮಾಧ್ಯಮಗಳಲ್ಲಿ ಇವತ್ತು ವೈರಲ್ ಆಗಿತ್ತು.
ಅರವಳಿಕೆ ಚುಚ್ಚುಮದ್ದು ಪ್ರಯೋಗಿಸಿದ ನಂತರ ಆನೆ ಸುಮಾರು ಎರಡು ಕಿಲೋಮೀಟರ್ ದೂರ ಸಾಗಿ ದಟ್ಟಅರಣ್ಯಪ್ರದೇಶದ ಕಡಿದಾದ ಜಾಗದಲ್ಲಿ ಮಂಪರುಬಂದು ಬಿದ್ದಿತ್ತು. ಸ್ಥಳಕ್ಕೆ ಬಂದ ಕಾರ್ಯಾಚರಣೆ ತಂಡ ಆನೆಗೆ ಹಗ್ಗಬಿಗಿಯಲು ಸಜ್ಜಾಗುತ್ತಿದ್ದಾಗ ಆನೆಗೆ ಪ್ರಜ್ಞೆ ಮರುಕಳಿಸಲು ಪ್ರಾರಂಭವಾಗಿದೆ. ಆಗ ವೈದ್ಯರು ನೀಡಿದ ಸಲಹೆ ಮೇರೆಗೆ ಕಾರ್ಯಾಚರಣೆಯನ್ನು ನಿಲ್ಲಿಸಲಾಗಿದೆ. ಕೆಲ ಸಮಯದ ನಂತರ ಅರೆಮಂಪರಿನಲ್ಲಿ ಆನೆ ಅಲ್ಲಿಂದ ಎದ್ದು ಹೋಗಿದೆ.
ಈ ಬಗ್ಗೆ ಮೂಡಿಗೆರೆ ಎಸಿಎಫ್ ಡಾ. ರಾಜೇಶ್ ನಾಯ್ಕ್ ಅವರನ್ನು ಪತ್ರಿಕೆ ಮಾತನಾಡಿಸಿದಾಗ. ಆನೆಗೆ ಯಶಸ್ವಿಯಾಗಿ ಅರವಳಿಕೆ ಚುಚ್ಚುಮದ್ದು ಪ್ರಯೋಗಿಸಲಾಗಿತ್ತು. ಆದರೆ ವೈದ್ಯರು ನೀಡಿದ ಸಲಹೆ ಮೇರೆಗೆ ಕಾರ್ಯಾಚರಣೆ ಇಂದು ಸ್ಥಗಿತಗೊಳಿಸಲಾಗಿದೆ. ಆನೆಗೆ ಒಮ್ಮೆ ಅರವಳಿಕೆ ಔಷಧ ನೀಡಿದ ಮೇಲೆ ಕನಿಷ್ಠ 20 ಗಂಟೆಯವರೆಗೆ ಮತ್ತೆ ಅರವಳಿಕೆ ಚುಚ್ಚುಮದ್ದು ಪ್ರಯೋಗಿಸುವ ಹಾಗಿಲ್ಲ. ನಾಳೆ ಕೂಬಿಂಗ್ ಮುಂದುವರಿಸುತ್ತೇವೆ. ಈಗ ಅರವಳಿಕೆ ಚುಚ್ಚುಮದ್ದು ಪ್ರಯೋಗಿಸಿರುವ ಆನೆಯನ್ನೇ ಪ್ರಥಮ ಆದ್ಯತೆಯಲ್ಲಿ ಗುರಿಯಾಗಿಸಿ ಸೆರೆಹಿಡಿಯುವ ಕಾರ್ಯಾಚರಣೆ ನಡೆಸುತ್ತೇವೆ ಎಂದಿದ್ದಾರೆ.