ವಿಶ್ವಹಿಂದೂ ಪರಿಷತ್ ಮತ್ತು ಬಜರಂಗದಳ ವತಿಯಿಂದ ಬಣಕಲ್ ಪಟ್ಟಣದಲ್ಲಿ ದತ್ತಜಯಂತಿ ಪ್ರಯುಕ್ತ ಶೋಭಾಯಾತ್ರೆ ಹಾಗೂ ಧಾರ್ಮಿಕ ಕಾರ್ಯಕ್ರಮ ನೆರವೇರಿತು.
ವಾಗ್ಮಿ ಚೈತ್ರ ಕುಂದಾಪುರ ದಿಕ್ಸೂಚಿ ಭಾಷಣ ಮಾಡಿದರು. ಅವರು ತಮ್ಮ ಭಾಷಣದಲ್ಲಿ ಮಾತನಾಡುತ್ತಾ ಊರಿನ ತಾಯಂದಿರು ಜಾಗೃತರಾದಾಗ, ಯುವಕರು ಧರ್ಮಕ್ಕಾಗಿ ಪ್ರಾಣ ಕೊಡಲು ಸಜ್ಜಾದಾಗ, ಸಹೋದರಿಯರು ಧರ್ಮ ಜಾಗೃತಿಗೆ ಶಕ್ತಿಯನ್ನು ತುಂಬಲು ತಯಾರಾದಾಗ ಧರ್ಮ ಸಂಸ್ಥಾಪನೆ ಸಾಧ್ಯವಾಗುತ್ತದೆ ಎಂದರು.
20 ವರ್ಷಗಳಿಂದ ಮಾಡಿರುವ ಹೋರಾಟಕ್ಕೆ ಇವತ್ತು ದತ್ತಪೀಠದಲ್ಲಿ ಅರ್ಚಕರ ನೇಮಕವಾಗಿದೆ. ದತ್ತಪೀಠದ ನಿರ್ವಹಣೆಗಾಗಿ ಸಮಿತಿ ರಚನೆಯಾಗಿದೆ. ಹಿಂದೂಗಳು ಬಹುಸಂಖ್ಯಾತರಾಗಿರಿವ ಭಾರತದಲ್ಲಿ ಪೀಠಕ್ಕೆ ಹಿಂದೂ ಅರ್ಚಕರನ್ನು ನೇಮಕ ಮಾಡಿಕೊಳ್ಳಲು ಹಿಂದೂಗಳು 20 ವರ್ಷಗಳು ಹೋರಾಟ ಮಾಡಬೇಕಾಗಿದೆ. ಯಾವತ್ತೂ ಹಿಂದೂ ಸಮಾಜ ಸಮಸ್ಯೆಯನ್ನು ಮೊಳಕೆಯಲ್ಲೇ ಚಿವುಟಿ ಹಾಕುವುದನ್ನು ಅಭ್ಯಾಸ ಮಾಡಿಕೊಳ್ಳುತ್ತದೋ ಅವತ್ತು ಇಂತಹ ಸಮಸ್ಯೆಗಳು ತಲೆ ಎತ್ತುವುದಿಲ್ಲ ಎಂದರು.
ಕಳೆದ 20 ವರ್ಷದಿಂದ ನಡೆದಿರುವಂತಹ ಸಂಘರ್ಷಗಳಿಗೆ ಒಂದು ತಾರ್ಕಿಕ ಅಂತ್ಯವನ್ನು ತಂದು ಕೊಡುವಂತಹ ಕಾಲಘಟ್ಟದಲ್ಲಿ ನಾವಿದ್ದೇವೆ. ಇಡೀ ದೇಶಕ್ಕೆ ಅಯೋಧ್ಯೆ ಸಮಸ್ಯೆಯಂತಯೇ ಅಷ್ಟೆ ಸ್ವಾಭಿಮಾನದ ಸಮಸ್ಯೆಯಾಗಿತ್ತು ದತ್ತಪೀಠ. ಈಗ ಪೀಠಕ್ಕೆ ಹಿಂದೂ ಅರ್ಚಕರನ್ನು ನೇಮಕ ಮಾಡಿರುವುದು, ದತ್ತಪೀಠದ ನಿರ್ವಹಣೆಗಾಗಿ ಸಮಿತಿ ರಚನೆಯಾಗಿರುವುದು ಹಿಂದೂಗಳ ಹೋರಾಟಕ್ಕೆ ಸಿಕ್ಕ ಗೆಲುವಾಗಿದೆ ಎಂದರು.
ಸಭಾ ಕಾರ್ಯಕ್ರಮಕ್ಕೂ ಮುನ್ನ ಬಣಕಲ್ ಮುಖ್ಯರಸ್ತೆಯಲ್ಲಿ ವಿಜೃಂಭಣೆಯ ಶೋಭಾಯಾತ್ರೆ ನಡೆಯಿತು. ಸಭಾ ಕಾರ್ಯಕ್ರಮದಲ್ಲಿ ವಿಶ್ವಹಿಂದೂ ಪರಿಷತ್ ತಾಲ್ಲೂಕು ಅಧ್ಯಕ್ಷ ಮಹೇಶ್ ಸಾಲುಮರ, ಹೋಬಳಿ ಕಾರ್ಯದರ್ಶಿ ಅರುಣ್ ಪೂಜಾರಿ, ಬಜರಂಗದಳ ತಾಲ್ಲೂಕು ಸಂಯೋಜಕ್ ಅಜಿತ್, ತಾಲ್ಲೂಕು ಸಹ ಸಂಚಾಲಕ ಅಭಿಷೇಕ್, ತಾಲ್ಲೂಕು ಸಹ ಸಂಯೋಜಕ ಅಭಿ ಬಣಕಲ್, ಸಂತೋಷ್ ಶುಭಾನಗರ, ಜಿಲ್ಲಾ ಗೋರಕ್ಷಾ ಪ್ರಮುಖ್ ಅಜಿತ್ ಕಳಸ, ಹೋಬಳಿ ಸಂಯೋಜಕ್ ಪ್ರದೀಪ್ ಸುಭಾಷನಗg, ವಿನಯ್ ಎಸ್ ಶೆಟ್ಟಿ ಮುಂತಾದವರು ಇದ್ದರು.