ಕರ್ನಾಟಕ ಸರ್ಕಾರ 2021ನೇ ಸಾಲಿನ ಕ್ರೀಡಾ ಪ್ರಶಸ್ತಿಗಳನ್ನು ಘೋಷಣೆ ಮಾಡಿದೆ. ಪ್ರತಿಷ್ಠಿತ ಏಕಲವ್ಯ ಪ್ರಶಸ್ತಿ ಪಡೆದವರ ಪಟ್ಟಿಯಲ್ಲಿ ನಮ್ಮ ಜಿಲ್ಲೆಯ ಕ್ರೀಡಾಪಟು ಹೆಚ್.ಎಸ್. ಸಾಕ್ಷಾತ್ ಗೌಡ ಸ್ಥಾನ ಪಡೆಯುವ ಮೂಲಕ ಜಿಲ್ಲೆಗೆ ಹೆಮ್ಮೆ ತಂದಿದ್ದಾರೆ. ರಾಷ್ಟ್ರೀಯ ನೆಟ್ ಬಾಲ್ ತಂಡದ ಆಟಗಾರರಾಗಿರುವ ಸಾಕ್ಷಾತ್ ಜಿಲ್ಲೆಯ ಮೂಡಿಗೆರೆ ತಾಲ್ಲೂಕಿನ ಬಿ.ಹೊಸಳ್ಳಿ ಗ್ರಾಮದವರು.
ಸಾಕ್ಷಾತ್ ಗೌಡ ನೆಟ್ಬಾಲ್ನಲ್ಲಿ ಕರ್ನಾಟಕ ತಂಡದ ನಾಯಕನಾಗಿ ಅನೇಕ ರಾಷ್ಟ್ರೀಯ ಚಾಂಪಿಯನ್ಷಿಪ್ಗಳಲ್ಲಿ ತಂಡವನ್ನು ಮುನ್ನಡೆಸಿ ಪ್ರಶಸ್ತಿ ಗಳಿಸಲು ಕಾರಣರಾಗಿದ್ದಾರೆ. ಇದೀಗ ಭಾರತ ತಂಡದ ಸದಸ್ಯರಾಗಿಯು ಆಯ್ಕೆಯಾಗಿದ್ದಾರೆ.
ಸಾಕ್ಷಾತ್ ಸಾರಿಗೆ ಇಲಾಖೆ ಚಾಲಕರಾಗಿರುವ ಸದ್ಯ ಚಿಕ್ಕಮಗಳೂರಿನಲ್ಲಿ ವಾಸವಾಗಿರುವ ಶಂಕರ್ ಹೆಚ್.ಟಿ. ಮತ್ತು ಶ್ರೀಮತಿ ಸೀಮಾ ಅವರ ಪುತ್ರ.
ಸಾಕ್ಷಾತ್ 18 ಬಾರಿ ನ್ಯಾಷನಲ್ ಚಾಂಪಿಯನ್ಷಿಪ್ನಲ್ಲಿ ರಾಜ್ಯ ತಂಡವನ್ನು ಪ್ರತಿನಿಧಿಸಿದ್ದಾರೆ. ಹರಿಯಾಣದಲ್ಲಿ ಇತ್ತೀಚೆಗೆ ನಡೆದ ಸೀನಿಯರ್ ನ್ಯಾಷನಲ್ ನೆಟ್ಬಾಲ್ ಚಾಂಪಿಯನ್ಷಿಪ್ನಲ್ಲಿ ಕರ್ನಾಟಕ ತಂಡದ ನಾಯಕನಾಗಿ ಮುನ್ನಡೆಸಿದ ಸಾಕ್ಷಾತ್ಗೌಡ ರಾಜ್ಯಕ್ಕೆ ಕಂಚಿನ ಪದಕವನ್ನು ತಂದುಕೊಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.
ಪಂಜಾಬ್ನಲ್ಲಿ ನಡೆದ 35ನೇ ಸೀನಿಯರ್ ನ್ಯಾಷನಲ್ನಲ್ಲಿ ಬೆಳ್ಳಿ ಪದಕ, ಚಂಡಿಗರ್ನಲ್ಲಿ ನಡೆದ 10ನೇ ಫೆಡರೇಷನ್ ಕಪ್ ನ್ಯಾಷನಲ್ಸ್ನಲ್ಲಿ ಕಂಚಿನ ಪದಕ, ತೆಲಂಗಾಣದಲ್ಲಿ ನಡೆದ 11ನೇ ಸೌತ್ಇಂಡಿಯನ್ನಲ್ಲಿ ತಂಡಕ್ಕೆ ಬೆಳ್ಳಿ ಪದಕ ಹಾಗೂ ಪಂದ್ಯಾವಳಿ ಉತ್ತಮ ಆಟಗಾರ ಪ್ರಶಸ್ತಿ ಗಳಿಸಿದ್ದಾರೆ. ಕೇರಳದಲ್ಲಿ ನಡೆದ 12ನೇ ಸೌತ್ ಇಂಡಿಯನ್ ಚಾಂಪಿಯನ್ಷಿಪ್ನಲ್ಲಿ ಬೆಳ್ಳಿ ಪದಕ ಮತ್ತು ಅತ್ಯುತ್ತಮ ಆಟಗಾರ ಪ್ರಶಸ್ತಿ ಗಳಿಸಿದ್ದಾರೆ. ಮೈಸೂರಿನಲ್ಲಿ ನಡೆದ ದಸರ ಗೋಲ್ಡ್ ಸಿ.ಎಂ. ಕಪ್ ಪಂದ್ಯಾವಳಿಯಲ್ಲಿ ಚಿನ್ನದ ಪದಕ ಗೆದ್ದ ಮೈಸೂರು ಡಿವಿಷನ್ ತಂಡವನ್ನು ಸಾಕ್ಷಾತ್ ಪ್ರತಿನಿಧಿಸಿದ್ದರು.
ಸಿಂಗಾಪುರದಲ್ಲಿ ನಡೆಯಲಿರುವ ಮುಂಬರುವ ಏಷ್ಯಾಕಪ್ ನೆಟ್ಬಾಲ್ ಟೂರ್ನಮೆಂಟ್ನಲ್ಲಿ ಭಾರತ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ.
ಚಿಕ್ಕಮಗಳೂರು ಸೆಂಟ್ಮೇರಿಸ್ ಶಾಲೆಯಲ್ಲಿ ಓದುತ್ತಿದ್ದಾಗ ಕ್ರೀಡೆಯ ಬಗ್ಗೆ ಆಸಕ್ತಿ ತೆಳೆದ ಸಾಕ್ಷಾತ್ ಆರಂಭದಲ್ಲಿ ಹ್ಯಾಂಡ್ಬಾಲ್ ಕ್ರೀಡೆಯಲ್ಲಿ ತೊಡಗಿಸಿಕೊಂಡರು. ನಂತರ ಉಜಿರೆ ಎಸ್.ಡಿ.ಎಂ. ಕಾಲೇಜಿನಲ್ಲಿ ಪಿ.ಯು.ಸಿ. ಮತ್ತು ಬಿ.ಕಾಂ ವ್ಯಾಸಂಗ ಮಾಡುವಾಗ ನೆಟ್ಬಾಲ್ ಕಡೆಗೆ ಗಮನ ಹರಿಸಿದರು. ಕಾಲೇಜು ತಂಡದ ಸದಸ್ಯರಾಗಿ ವಿಶ್ವವಿದ್ಯಾಲಯ ಮಟ್ಟದಲ್ಲಿ ಹೆಸರು ಮಾಡಿದರು. ಇದೀಗ ರಾಜ್ಯ ಮತ್ತು ರಾಷ್ಟ್ರ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ.
ಸಾಕ್ಷಾತ್ ಗೌಡ ಇವರ ಕ್ರೀಡಾ ಸಾಧನೆಯನ್ನು ಗುರುತಿಸಿ ರಾಜ್ಯ ಸರ್ಕಾರ ರಾಜ್ಯದ ಶ್ರೇಷ್ಠ ಕ್ರೀಡಾ ಪ್ರಶಸ್ತಿ ಏಕಲವ್ಯ ಪ್ರಶಸ್ತಿಗೆ ಆಯ್ಕೆ ಮಾಡಿದೆ. ನಮ್ಮೂರಿನ ಪ್ರತಿಭೆ ಸಾಕ್ಷಾತ್ ಗೌಡ ಅವರು ಇನ್ನೂ ಹೆಚ್ಚಿನ ಅವಕಾಶಗಳನ್ನು ಪಡೆದು ಕ್ರೀಡೆಯಲ್ಲಿ ಅಂತರಾಷ್ಟ್ರೀಯ ಮಟ್ಟದ ಸಾಧನೆ ಮಾಡಲಿ ಎಂದು ಪತ್ರಿಕಾ ಬಳಗದ ಪರವಾಗಿ ಶುಭಹಾರೈಸುತ್ತೇವೆ.