ಚಿಕ್ಕಮಗಳೂರು ಜಿಲ್ಲೆ ಆಲ್ದೂರು ಪೊಲೀಸ್ ಠಾಣಾ ವ್ಯಾಪ್ತಿಯ ಕೆಳಗೂರು ಗ್ರಾಮದಲ್ಲಿ ಕಾಫಿ ಕಳ್ಳತನದ ಎರಡು ಪ್ರಕರಣಗಳು ದಾಖಲಾಗಿವೆ.
ಕಬ್ಬಿಣಸೇತುವೆ ಸಮೀಪದ ಕೆಳಗೂರು ನಿವಾಸಿ ವಿ.ಡಿ. ಗಿಡ್ಡೇಗೌಡ ಎಂಬುವವರ ನವೆಂಬರ್ 29ರಂದು ಮನೆಯ ಸಮೀಪ ಕಣದಲ್ಲಿ ಒಣಹಾಕಿದ್ದ ಸುಮಾರು 100ಕೇಜಿ ಅರೇಬಿಕಾ ಕಾಫಿ ಬೇಳೆಯನ್ನು ರಾತ್ರಿ ಸಮಯದಲ್ಲಿ ಕಳ್ಳರು ಕಯ್ದೊದ್ದಿದ್ದಾರೆ ಎಂದು ಆಲ್ದೂರು ಠಾಣೆಯಲ್ಲಿ ದೂರು ನೀಡಿದ್ದಾರೆ. ಅಂದಾಜು 26 ಸಾವಿರ ಬೆಲೆಬಾಳುವ ಕಾಫಿಯನ್ನು ಕಳುವು ಮಾಡಿದ್ದಾರೆ.
ಅದೇ ದಿನ ರಾತ್ರಿ ಕೆಳಗೂರು ಗ್ರಾಮದ ಚಂದ್ರಮ್ಮ ಎಂಬುವವರ ಮನೆಯ ಶೆಡ್ನಲ್ಲಿ ಪಲ್ಪರ್ ಮಾಡಿ ಒಣಹಾಕಿದ್ದ ಸುಮಾರು 95 ಕೆ.ಜಿ. ಅರೇಬಿಕಾ ಕಾಫಿ ಬೇಳೆಯನ್ನು ಕಳ್ಳರು ಕಯ್ದೊದ್ದಿದ್ದಾರೆ ಎಂದು ಠಾಣೆಗೆ ದೂರು ನೀಡಿದ್ದಾರೆ. ಅಂದಾಜು 25 ಸಾವಿರ ಬೆಲೆಬಾಳುವ ಕಾಫಿಯನ್ನು ಕಳುವು ಮಾಡಿದ್ದಾರೆ.
ಈ ಎರಡು ಪ್ರಕರಣಗಳಲ್ಲಿ ಭಾಗಿಯಾಗಿರುವುದು ಒಂದೇ ತಂಡ ಇರಬಹುದೇ ? ಎಂದು ಶಂಕಿಸಲಾಗಿದೆ.
ಕಾಫಿನಾಡಿನಲ್ಲಿ ಈಗ ಎಲ್ಲಾ ಕಡೆ ಕಾಫಿ ಕೊಯ್ಲು ಪ್ರಾರಂಭವಾಗಿದೆ. ಒಂದೆಡೆ ಕಾಫಿ ಬೆಲೆ ಕುಸಿಯುತ್ತಿದ್ದು ಮತ್ತೊಂದು ಕಡೆ ಕಾಫಿ ಕಳ್ಳರ ಕಾಟ ಅತಿಯಾಗಿದೆ. ಬೆಳೆಗಾರರು ಈ ಬಗ್ಗೆ ಎಚ್ಚರಿಕೆಯಿಂದ ಇರಬೇಕು ಎಂದು ಬೆಳೆಗಾರರ ಸಂಘವು ಸಲಹೆ ನೀಡಿದ್ದು, ಕಾಫಿ ಕಳ್ಳರನ್ನು ಪತ್ತೆಹಚ್ಚಿ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಎಂದು ಪೊಲೀಸ್ ಇಲಾಖೆಯನ್ನು ಆಗ್ರಹಿಸಿದೆ.