ಮೂಡಿಗೆರೆ ತಾಲೂಕಿನ ಕುಂದೂರು ಭಾಗದಲ್ಲಿ 3 ಕಾಡಾನೆ ಹಿಡಿಯಲು ನಡೆಸುತ್ತಿರುವ ಕಾರ್ಯಾಚರಣೆ ಮುಗಿದ ನಂತರ ಊರುಬಗೆ ಗ್ರಾಮ ಪಂಚಾಯತಿ ಮತ್ತು ಸುತ್ತಮುತ್ತಲಿನ ಭಾಗದಲ್ಲಿ ಉಪಟಳ ನೀಡುತ್ತಿರುವ ಕಾಡಾನೆಯನ್ನು ಹಿಡಿಯಲು ಕ್ರಮ ವಹಿಸಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.
ಊರುಬಗೆಯಲ್ಲಿ ಅರ್ಜುನ್ ಎಂಬುವವರನ್ನು ಕಾಡಾನೆ ಸಾಯಿಸಿದ ನಂತರ ಸರ್ಕಾರ ಬೈರ ಎಂಬ ಆನೆಯನ್ನು ಹಿಡಿಯಲು ಆದೇಶ ಮಾಡಿತ್ತು. ಅದರಂತೆ ಕಾಡಾನೆ ಹಿಡಿಯಲು ಈಗ್ಗೆ ಕೆಲ ದಿನಗಳ ಹಿಂದೆ 6 ಸಾಕಾನೆಗಳ ತಂಡ ಆಗಮಿಸಿತ್ತು. ಆದರೆ ನಿಗದಿತ ಕಾಡಾನೆ ಗುರುತಿಸಲು ಸಾಧ್ಯವಾಗದೇ ಜೊತೆಗೆ ಸಾಕಾನೆಗಳಿಗೆ ಅನಾರೋಗ್ಯ ಕಾಡಿದ ಕಾರಣದಿಂದ ಕಾರ್ಯಾಚರಣೆ ಸ್ಥಗಿತಗೊಳಿಸಲಾಗಿತ್ತು.
ಇದೀಗ ಕುಂದೂರು ಭಾಗಕ್ಕೆ ಸಾಕಾನೆಗಳ ತಂಡ ಆಗಮಿಸಿರುವುದರಿಂದ ಇದೇ ಸಂದರ್ಭದಲ್ಲಿ ಊರುಬಗೆ ಭಾಗದ ಆನೆಯನ್ನು ಹಿಡಿಯಲು ಕ್ರಮ ಜರುಗಿಸಬೇಕು ಎಂದು ಸ್ಥಳೀಯರ ಕೋರಿಕೆಯಾಗಿದೆ.
ಬೈರ ಎಂಬ ಆನೆಯನ್ನು ನಿರ್ದಿಷ್ಟವಾಗಿ ಗುರುತಿಸಲು ಸಾಧ್ಯವಾಗಿಲ್ಲ. ಈ ಬಗ್ಗೆ ಅರಣ್ಯ ಇಲಾಖೆಗೂ ಸ್ಪಷ್ಟತೆಯಿಲ್ಲ. ಸ್ಥಳೀಯರಲ್ಲು ಗೊಂದಲಗಳಿವೆ. ಈ ಗೊಂದಲಕ್ಕೆ ತೆರೆ ಎಳೆದು ಇಲ್ಲಿರುವ ನಾಲ್ಕು ಆನೆಗಳಲ್ಲಿ ಹೆಚ್ಚು ಉಪಟಳ ನೀಡುತ್ತಿರುವ ಆನೆಯನ್ನು ಸೆರೆಹಿಡಿಯಲು ಆದೇಶ ಪರಿಷ್ಕರಣೆ ಮಾಡಿಸಬೇಕು.
ಸ್ಥಳೀಯ ಶಾಸಕ ಎಂ.ಪಿ.ಕುಮಾರಸ್ವಾಮಿ, ವಿಧಾನ ಪರಿಷತ್ ಸದಸ್ಯರಾದ ಎಂ.ಕೆ.ಪ್ರಾಣೇಶ್ ಅವರು ಅರಣ್ಯ ಅಧಿಕಾರಿಗಳ ಬಳಿ ಚರ್ಚಿಸಿ ಈ ನಿಟ್ಟಿನಲ್ಲಿ ಕ್ರಮ ವಹಿಸಲು ಮುಂದಾಗಬೇಕು ಎಂದು ಸಾರ್ವಜನಿಕರ ಒತ್ತಾಸೆಯಾಗಿದೆ.