ಮಲೆನಾಡು ಭಾಗದಲ್ಲಿ ಅತಿಹೆಚ್ಚಿನ ಸಂಖ್ಯೆಯಲ್ಲಿ ಕಾಡಾನೆಗಳು ಜನರಿಗೆ ತೊಂದರೆ ನೀಡುತ್ತಿವೆ. ಈ ಹಿನ್ನಲೆಯಲ್ಲಿ ಹೊಸ ತಂತ್ರಜ್ಞಾನವನ್ನು ಬಳಸಿ ಕಾಡಾನೆ ಹಾವಳಿ ತಡೆಗೆ ಕ್ರಮ ಜರುಗಿಸಬಹುದು ಎಂಬ ಸಲಹೆಯನ್ನು ಭದ್ರಾ ಎಕೋ ಕನ್ಸರ್ವೇಷನ್ ಫೌಂಡೇಷನ್ ಚಿಕ್ಕಮಗಳೂರು ಇದರ ಅಧ್ಯಕ್ಷ ಡಾ. ಶಿವಪ್ರಸಾದ್ ಇವರು ನೀಡಿರುತ್ತಾರೆ.
ಈ ಬಗ್ಗೆ ಪತ್ರಿಕೆಗೆ ಮಾಹಿತಿ ನೀಡಿರುವ ಡಾ. ಶಿವಪ್ರಸಾದ್ ಕಾಡಾನೆ ಹಾವಳಿಯನ್ನು ಕೇವಲ ಆನೆಗಳನ್ನು ಹಿಡಿದು ಬೇರೆಡೆ ಸಾಗಿಸುವುದರಿಂದ ಬಗೆಹರಿಯುವುದಿಲ್ಲ. ಆನೆಗಳು ಎಷ್ಟೇ ದೂರಕ್ಕೆ ಬಿಟ್ಟರು ಅವು ಮತ್ತೆ ತಮ್ಮ ಸ್ವಸ್ಥಾನವನ್ನು ಅರಸಿಕೊಂಡು ವಾಪಾಸ್ಸು ಬರುವ ಸಾಧ್ಯತೆಗಳೇ ಹೆಚ್ಚಾಗಿರುತ್ತವೆ. ಹಾಗಾಗಿ ಆಧುನಿಕ ತಂತ್ರಜ್ಞಾನ ಬಳಸಿ ಆನೆಗಳ ಹಾವಳಿ ತಡೆಗೆ ನಾವು ಸರ್ಕಾರಕ್ಕೆ ಕೆಲವೊಂದು ಸಲಹೆಗಳನ್ನು ನೀಡಿರುತ್ತೇವೆ.
ಇತ್ತೀಚೆಗೆ ಮುಖ್ಯಮಂತ್ರಿ ಬಸವರಾಜು ಬೊಮ್ಮಾಯಿಯವರು ಜಿಲ್ಲೆಗೆ ಬಂದಾಗ ಅವರನ್ನು ಭೇಟಿ ಮಾಡಿ ನೂತನ ತಂತ್ರಜ್ಞಾನದ ಬಗ್ಗೆ ವಿವರವಾಗಿ ಮಾಹಿತಿ ನೀಡಿರುತ್ತೇವೆ. ಅವರು ಇದರ ಬಗ್ಗೆ ಆಸಕ್ತಿಯಿಂದ ಆಲಿಸಿದ್ದು ಕೊಪ್ಪದಲ್ಲಿ ನಡೆದ ಜನಸಂಕಲ್ಪ ಯಾತ್ರೆಯ ಭಾಷಣದಲ್ಲಿ ಈ ವಿಚಾರಗಳನ್ನು ಪ್ರಸ್ತಾಪಿಸಿದ್ದಾರೆ ಇದಕ್ಕಾಗಿ ಬಜೆಟ್ನಲ್ಲಿ ಅನುದಾನ ನೀಡುವುದಾಗಿಯೂ ಭರವಸೆ ನೀಡಿದ್ದಾರೆ ಎಂದು ಶಿವಪ್ರಸಾದ್ ತಿಳಿಸಿದ್ದಾರೆ.
ಡಾ. ಶಿವಪ್ರಸಾದ್ ಅವರು ಪರಿಸರ ಸಂರಕ್ಷಣೆ, ಕೃಷಿಯಲ್ಲಿ ನೂತನ ತಂತ್ರಜ್ಞಾನಗಳ ಅಳವಡಿಕೆ ಈ ವಿಚಾರವಾಗಿ ಕೆಲಸ ಮಾಡುತ್ತಿದ್ದಾರೆ. ಚಿಕ್ಕಮಗಳೂರು ಜಿಲ್ಲಾ ಎಸ್ಸಿ ಮೋರ್ಚಾ ಕಾರ್ಯದರ್ಶಿಯಾಗಿದ್ದು, ಜಿಲ್ಲಾ ಆರ್ಥಿಕ ಮತ್ತು ಕೈಗಾರಿಕಾ ಪ್ರಕೋಷ್ಠಗಳಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಮೂಡಿಗೆರೆ ಕ್ಷೇತ್ರದಿಂದ ಬಿ.ಜೆ.ಪಿ. ಟಿಕೆಟ್ ಆಕಾಂಕ್ಷಿಯಾಗಿ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.