ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಮೂಡಿಗೆರೆ ಕ್ಷೇತ್ರದಲ್ಲಿ ಭಾರತ ಕಮ್ಯುನಿಸ್ಟ್ ಪಕ್ಷ (ಸಿ.ಪಿ.ಐ) ತನ್ನ ಅಭ್ಯರ್ಥಿಯನ್ನಾಗಿ ರಮೇಶ್ ಕೆಳಗೂರು ಅವರ ಹೆಸರನ್ನು ಘೋಷಿಸಿದೆ.
ಭಾನುವಾರ ಮೂಡಿಗೆರೆಯ ಪಕ್ಷದ ಕಛೇರಿಯಲ್ಲಿ ಹಮ್ಮಿಕೊಂಡಿದ್ದ ತಾಲ್ಲೂಕು ಮಂಡಳಿ ಸಭೆಯಲ್ಲಿ ಪಕ್ಷದ ಜಿಲ್ಲಾ ಕಾರ್ಯದರ್ಶಿ ರಾಧಾ ಸುಂದರೇಶ್ ಅವರು ರಮೇಶ್ ಕೆಳಗೂರು ಅವರ ಹೆಸರನ್ನು ಅಧಿಕೃತವಾಗಿ ಘೋಷಣೆ ಮಾಡಿದರು.
ರಮೇಶ್ ಅವರು ಮೂಡಿಗೆರೆ ತಾಲೂಕಿನ ಬಾಳೂರು ಹೋಬಳಿ ಕೆಳಗೂರು ಗ್ರಾಮದವರು. ಸ್ನಾತಕೋತ್ತರ ಪದವಿದರರು. ಪಕ್ಷದ ವಿದ್ಯಾರ್ಥಿ ಘಟಕ ಎಐಎಸ್ಎಫ್ ನ ಮೂಡಿಗೆರೆ ತಾಲೂಕು ಅಧ್ಯಕ್ಷರಾಗಿ, ಪಕ್ಷದ ಯುವ ಘಟಕ ಅಖಿಲ ಭಾರತ ಯುವಜನ ಫೆಡರೇಷನ್ ತಾಲ್ಲೂಕು ಸಂಚಾಲಕರಾಗಿ, ವಿವಿಧ ಸಂಘಟನೆಗಳ ಪದಾಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದಾರೆ.
ರಮೇಶ್ ಪ್ರಸ್ತುತ ಸಿ.ಪಿ.ಐ. ಮೂಡಿಗೆರೆ ತಾಲ್ಲೂಕು ಮಂಡಳಿ ಕಾರ್ಯದರ್ಶಿಯಾಗಿದ್ದಾರೆ. ಅನೇಕ ಹೋರಾಟ ಚಳುವಳಿಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ.
*************
ಮೂಡಿಗೆರೆಯಲ್ಲಿ 1999 ರಿಂದ 2013ರವರೆಗೆ ಸತತ ನಾಲ್ಕು ಚುನಾವಣೆಗಳಲ್ಲಿ ಸಾತಿ ಸುಂದರೇಶ್ ಸಿ.ಪಿ.ಐ ಅಭ್ಯರ್ಥಿಯಾಗಿ ಕಣಕ್ಕಿಳಿದು ಗಮನಾರ್ಹ ಮತಗಳನ್ನು ಗಳಿಸಿದ್ದರು. ಆ ಮತಗಳು ಕ್ಷೇತ್ರದಲ್ಲಿ ಚುನಾವಣಾ ಫಲಿತಾಂಶದ ಮೇಲೆ ಪ್ರಭಾವ ಬೀರಿದ್ದವು.
2018ರ ಚುನಾವಣೆಯಲ್ಲಿ ಇಲ್ಲಿ ಸಿ.ಪಿ.ಐ ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸಿರಲಿಲ್ಲ. ಕಾಂಗ್ರೇಸ್ ಅಭ್ಯರ್ಥಿಗೆ ಬೆಂಬಲ ಘೋಷಣೆ ಮಾಡಿತ್ತು.