ನಿರಂತರ ಸುದ್ದಿಗಳಿಗಾಗಿ ದರ್ಪಣ ವಾಟ್ಸಾಪ್ ಗ್ರೂಪ್ ಸೇರಲು ಈ ಕೆಳಗಿನ ಲಿಂಕ್ ಒತ್ತಿ
https://chat.whatsapp.com/EPix3ar9qizEtDUS0amt5B
ಮೂಡಿಗೆರೆ ಶಾಸಕ ಎಂ.ಪಿ. ಕುಮಾರಸ್ವಾಮಿ ಮತ್ತು ಬಿ.ಜೆ.ಪಿ. ಜಿಲ್ಲಾ ವಕ್ತಾರ ದೀಪಕ್ ದೊಡ್ಡಯ್ಯ ನಡುವೆ ಜಟಾಪಟಿ ಏರ್ಪಟ್ಟಿದೆ.
ನವೆಂಬರ್ 20ರಂದು ಮೂಡಿಗೆರೆ ತಾಲ್ಲೂಕು ಹುಲ್ಲೆಮನೆ ಕುಂದೂರು ಗ್ರಾಮದಲ್ಲಿ ಕಾಡಾನೆ ದಾಳಿಯಿಂದ ಮಹಿಳೆ ಮೃತಪಟ್ಟ ಘಟನೆ ನಡೆದಿತ್ತು. ಘಟನೆಯ ದಿನ ಸಂಜೆ ಮೂಡಿಗೆರೆ ಶಾಸಕ ಎಂ.ಪಿ. ಕುಮಾರಸ್ವಾಮಿ ಸ್ಥಳಕ್ಕೆ ತೆರಳಿದಾಗ ಅಲ್ಲಿ ನೆರೆದಿದ್ದ ಕೆಲವರು ಶಾಸಕರ ವಿರುದ್ಧ ಪ್ರತಿಭಟನೆ ಮಾಡಿ ಅಟ್ಟಿಸಿಕೊಂಡು ಬಂದಿದ್ದರು ಮತ್ತು ಹಲ್ಲೆಗೂ ಪ್ರಯತ್ನಿಸಿದ್ದರು.
ಈ ಘಟನೆಯ ವಿಡಿಯೋ ತುಣುಕುಗಳು ಮಾಧ್ಯಮಗಳಲ್ಲಿ ಹರಿದಾಡಿ ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಸುದ್ದಿಗೆ ಗ್ರಾಸವಾಗಿತ್ತು. ಘಟನೆಯ ಮರುದಿನ ಮೂಡಿಗೆರೆ ಪ್ರವಾಸಿ ಮಂದಿರದಲ್ಲಿ ನೆರೆದಿದ್ದ ಕುಮಾರಸ್ವಾಮಿ ಬೆಂಬಲಿಗ ಬಿ.ಜೆ.ಪಿ. ಕಾರ್ಯಕರ್ತರು ಈ ಘಟನೆಗೆ ದೀಪಕ್ ದೊಡ್ಡಯ್ಯ ಕುಮ್ಮಕ್ಕು ನೀಡಿದ್ದಾರೆ ಎಂದು ಆರೋಪಿಸಿದ್ದರು. ನಂತರ ಕುಮಾರಸ್ವಾಮಿ ಮಾಧ್ಯಮದವರೊಂದಿಗೆ ಮಾತನಾಡಿ ದೀಪಕ್ ದೊಡ್ಡಯ್ಯನವರ ಪ್ರಚೋದನೆಯಿಂದಲೇ ಈ ರೀತಿ ಘಟನೆ ನಡೆದಿದೆ. ಅವರು ಜಿಲ್ಲಾ ವಕ್ತಾರರು ಆದರೆ ಮೂಡಿಗೆರೆ ಕ್ಷೇತ್ರದಲ್ಲಿ ಅವರಿಗೆ ಏನು ಕೆಲಸ, ಅವರು ಇಲ್ಲಿ ಬಂದು ಗೊಂದಲ ಮೂಡಿಸುತ್ತಿದ್ದಾರೆ. ಘಟನೆ ನಡೆದ ದಿನ ಬೆಳಿಗ್ಗೆಯಿಂದಲೇ ಅಲ್ಲಿದ್ದು ಜನರನ್ನು ನನ್ನ ವಿರುದ್ಧ ಪ್ರಚೋದಿಸಿದ್ದಾರೆ ಎಂದು ನೇರವಾಗಿ ಆರೋಪ ಮಾಡಿದ್ದರು.
ಶಾಸಕರ ಈ ಆರೋಪಕ್ಕೆ ತಿರುಗೇಟು ನೀಡಿರುವ ದೀಪಕ್ ದೊಡ್ಡಯ್ಯ, ಶಾಸಕರು ಹತಾಶೆಯಿಂದ ಆಧಾರರಹಿತ ಆರೋಪ ಮಾಡುತ್ತಿದ್ದಾರೆ. ಆ ಘಟನೆಗೂ ನನಗೂ ಯಾವುದೇ ಸಂಬಂಧವಿಲ್ಲ. ಘಟನೆ ನಡೆದಾಗ ನಾನು ಸ್ಥಳದಿಂದ ತುಂಬಾ ದೂರದಲ್ಲಿದ್ದೆ. ಹಿರಿಯ ಅಧಿಕಾರಿಗಳ ಜೊತೆ ಮತ್ತು ಗ್ರಾಮಸ್ಥರ ನಡುವೆ ಮಾತುಕತೆ ನಡೆಸುತ್ತಿದ್ದೆ. ಅಂದಿನ ಘಟನೆಯನ್ನು ನಾನು ಸಹ ತೀವ್ರವಾಗಿ ಖಂಡಿಸಿದ್ದೇನೆ. ಕುಮಾರಸ್ವಾಮಿಯವರು ಧರ್ಮಸ್ಥಳಕ್ಕೆ ಬರಲಿ ಈ ಘಟನೆಗೆ ನಾನು ಯಾವುದೇ ರೀತಿಯಲ್ಲಿ ಪ್ರಚೋದನೆ ಮಾಡಿಲ್ಲ ಎಂದು ಅಲ್ಲಿ ಪ್ರಮಾಣ ಮಾಡಲು ಸಿದ್ಧನಿದ್ದೇನೆ ಎಂದು ಸವಾಲು ಹಾಕಿದ್ದಾರೆ.
ಮೂಡಿಗೆರೆ ಕ್ಷೇತ್ರದೊಂದಿಗೆ ನನಗೆ 30 ವರ್ಷಗಳಿಂದ ಅನುಬಂಧವಿದೆ. ನಾನು ಇಲ್ಲಿಯೇ ನನ್ನ ವೃತ್ತಿ ಜೀವನ ಹಾಗೂ ಸಾರ್ವಜನಿಕ ಜೀವನ ಆರಂಭಿಸಿದ್ದೇನೆ. ಬಿ.ಜೆ.ಪಿ. ಪಕ್ಷದಲ್ಲಿ ನಿಷ್ಠಾವಂತ ಕಾರ್ಯಕರ್ತನಾಗಿ ಕೆಲಸ ಮಾಡುತ್ತಿದ್ದೇನೆ. 2008ರಿಂದಲೂ ಇಲ್ಲಿ ನಾನು ಬಿ.ಜೆ.ಪಿ.ಯಿಂದ ಎಂ.ಎಲ್.ಎ. ಚುನಾವಣೆಗೆ ಟಿಕೆಟ್ ಕೇಳುತ್ತಿದ್ದೇನೆ. ಪಕ್ಷದ ತೀರ್ಮಾನಕ್ಕೆ ತಲೆಭಾಗಿ ಎಲ್ಲಾ ಚುನಾವಣೆಗಳಲ್ಲಿ ಕುಮಾರಸ್ವಾಮಿಯವರ ಪರವಾಗಿ ಕೆಲಸ ಮಾಡಿದ್ದೇನೆ.ಮುಂಬರುವ ಚುನಾವಣೆಯಲ್ಲಿಯೂ ನಾನು ಬಿ.ಜೆ.ಪಿ. ಪಕ್ಷದ ಟಿಕೆಟ್ ಆಕಾಂಕ್ಷಿಯಾಗಿ ಕ್ಷೇತ್ರದಲ್ಲಿ ಪ್ರವಾಸ ಮಾಡುತ್ತಿದ್ದೇನೆ. ಪಕ್ಷದ ತೀರ್ಮಾನಕ್ಕೆ ಬದ್ಧನಾಗಿದ್ದೇನೆ. ಆದರೆ ಶಾಸಕರ ಮೇಲೆ ಹಲ್ಲೆ ಮಾಡಿಸುವಂತಹ ಕೀಳುಮಟ್ಟಕ್ಕೆ ಇಳಿಯುವ ಜಾಯಮಾನ ನನ್ನದಲ್ಲ ಎಂದಿದ್ದಾರೆ.
ಒಟ್ಟಾರೆ ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವಂತೆ ಕ್ಷೇತ್ರದಲ್ಲಿ ಬಿ.ಜೆ.ಪಿ. ಟಿಕೆಟ್ಗಾಗಿ ತೀವ್ರ ಪೈಪೋಟಿ ನಡೆಯುತ್ತಿದ್ದು, ಪಕ್ಷದಲ್ಲಿ ಗುಂಪುಗಾರಿಕೆ ಹೆಚ್ಚಾಗುತ್ತಿದೆ. ಕುಮಾರಸ್ವಾಮಿ ಹಾಗೂ ದೀಪಕ್ ದೊಡ್ಡಯ್ಯ ಅವರ ನಡುವೆ ಇದ್ದ ಮುಸುಕಿನ ಗುದ್ದಾಟ ಈಗ ಬಹಿರಂಗವಾಗಿ ವ್ಯಕ್ತವಾಗುತ್ತಿದೆ. ಒಟ್ಟಾರೆ ಕಾಡಾನೆ ದಾಳಿ ಮತ್ತು ಆ ನಂತರದ ಬೆಳವಣಿಗೆ ಕ್ಷೇತ್ರದಲ್ಲಿ ರಾಜಕೀಯ ಕೆಸರೆರಚಾಟಕ್ಕೆ ಸಾಕ್ಷಿಯಾಗುತ್ತಿದೆ.
ದೇವಸ್ಥಾನದಲ್ಲಿ ಪ್ರಮಾಣ : ಈ ಸಂಬಂಧ ದೀಪಕ್ ದೊಡ್ಡಯ್ಯನವರು ಚಿಕ್ಕಮಗಳೂರು ನಗರದ ಓಂಕಾರೇಶ್ವರ ದೇವಸ್ಥಾನಕ್ಕೆ ಕುಟುಂಬ ಸಮೇತರಾಗಿ ತೆರಳಿ ದೇವರ ಎದುರಿಗೆ ನನಗೂ ಈ ಘಟನೆಗೂ ಸಂಬಂಧವಿಲ್ಲ ಎಂದು ಪ್ರಮಾಣ ಮಾಡಿದ್ದಾರೆ. ಕುಮಾರಸ್ವಾಮಿಯವರು ದೇವರ ಮುಂದೆ ನಿಂತು ನಾನು ಹಲ್ಲೆ ಮಾಡಿಸಿದ್ದೇನೆ ಎಂದು ಹೇಳಲಿ ಎಂದು ಸವಾಲು ಹಾಕಿದ್ದಾರೆ.
https://www.darpananews.com/2022/11/24/conviction-for-cow-slaughter-in-gonibeedu/