ಅಮೇರಿಕಾದ ಮಾಜಿ ಅಧ್ಯಕ್ಷ ಅಬ್ರಾಹಂ ಲಿಂಕನ್ ತನ್ನ ಮಗನ ಶಿಕ್ಷಕರಿಗೆ ಬರೆದ ಈ ಪತ್ರ
ಗುರುವೇ,
ಎಲ್ಲರೂ ನ್ಯಾಯ ಪರರಲ್ಲ, ಎಲ್ಲರೂ ಸತ್ಯವಂತರಲ್ಲ ಎಂಬುದನ್ನು ಕಲಿಸು, ಆದರೆ ಪ್ರತಿಯೊಬ್ಬ ಸ್ವಾರ್ಥ ರಾಜಕಾರಣಿಗೆ ಪ್ರತಿಯಾಗಿ ಒಬ್ಬ ನಿಷ್ಟಾವಂತ ನಾಯಕ. ಪ್ರತಿಯೊಬ್ಬ ಶತ್ರುವಿಗೆ ಪ್ರತಿಯಾಗಿ ಒಬ್ಬ ಸನ್ಮಿತ್ರನಿರುವನೆಂಬುದನ್ನು ಕಲಿಸು. ಇದಕ್ಕಾಗಿ ಸಾಕಷ್ಟು ಸಮಯ ಬೇಕೆಂಬುವುದು ಗೊತ್ತಿದೆ.
ನಿನಗೆ ಸಾಧ್ಯವಾದರೆ ಸಿಕ್ಕ ನೂರು ರೂಪಾಯಿಗಿಂತ ಸಂಪಾದಿಸಿದ ನೂರು ರೂಪಾಯಿ ಹೆಚ್ಚು ಬೆಲೆಯುಳ್ಳದೆಂಬುದನ್ನು ಕಲಿಸು. ಸೋಲನ್ನು ಸ್ವೀಕರಿಸುವುದನ್ನು ಕಲಿಸು, ಗೆಲುವಿನಲ್ಲಿ ಹರ್ಷಿಸುವುದನ್ನು ಕಲಿಸು, ಹಾಗೆಯೇ ಮೌನದ ನಗುವಿನಲ್ಲಿರುವ ರಹಸ್ಯವನ್ನು ತಿಳಿಸು, ಪುಸ್ತಕಗಳ ಅದ್ಬುತವನ್ನು ಅವನಿಗೆ ಕಲಿಸು.
ಆಕಾಶದ ಹಕ್ಕಿಗಳ ಕುರಿತು ಧ್ಯಾನಿಸಲು ಬಿಡುವು ಮಾಡಿಕೊಡು, ಶಾಲೆಯಲ್ಲಿ ಮೋಸದಿಂದ ಉತ್ತೀರ್ಣನಾಗುವುದಕ್ಕಿಂತ ಅನುತ್ತೀರ್ಣನಾಗುವುದೇ ಹೆಚ್ಚು ಗೌರವವೆಂಬುದನ್ನು ಕಲಿಸು. ಎಲ್ಲರೂ ತಪ್ಪು ಎಂದು ತಿಳಿದಾಗಲೂ ತಾನು ನಂಬಿದ ವಿಚಾರಗಳಲ್ಲಿ ನಂಬಿಕೆ ಇಡುವಂತೆ ತಿಳಿಸು. ವಿನಯವಂತರಲ್ಲಿ ಮೃದುವಾಗಿ, ಒರಟು ಜನರಲ್ಲಿ ಕಠಿಣತೆಯಿಂದ ನಡೆಯುವುದನ್ನು ಕಲಿಸು.
ಅನ್ಯರೆಲ್ಲ ಒಂದೇ ಕಡೆ ಹೋಗುತ್ತಾ ಇದ್ದಾರೆ ಎಂಬ ಕಾರಣಕ್ಕಾಗಿ ಆ ಗುಂಪನ್ನು ಅನುಸರಿಸದಿರುವ ಮನಸ್ಥೈರ್ಯವನ್ನು ತುಂಬಿಸು. ಎಲ್ಲವನ್ನು ಕೇಳಿಸಿಕೊಳ್ಳುವುದನ್ನು ಕಲಿಸು, ಆದರೆ ತಾನು ಕೇಳಿಸಿಕೊಂಡದನ್ನೆಲ್ಲಾ ಸತ್ಯದ ಪರದೆಯಲ್ಲಿ ತೂರಿಸಿ ಒಳ್ಳೆಯದನ್ನು ಮಾತ್ರ ತೆಗೆದುಕೊಳ್ಳಬೇಕೆಂಬುದನ್ನು ಕಲಿಸು. ಗೇಲಿ ಮಾಡುವವರನ್ನು ದೂರವಿಡಲು ಕಲಿಸು. ಅತಿಯಾದ ಸಿಹಿ ಮಾತನಾಡುವವರೊಡನೆ ಎಚ್ಚರಿಕೆಯಿಂದಿರುವುದನ್ನು ಕಲಿಸು. ತನ್ನ ಬುದ್ಧಿ ಹಾಗೂ ಶಕ್ತಿಯನ್ನು ಅತಿ ಹೆಚ್ಚು ಬೆಲೆ ತೆರುವವನಿಗೆ ಬಳಸುವುದನ್ನು ಕಲಿಸು. ಆದರೆ ತನ್ನ ಹೃದಯ ಮತ್ತು ಆತ್ಮಕ್ಕೆ ಎಂದೆಂದಿಗೂ ಮೌಲ್ಯದ ಚೀಟಿ ಅಂಟಿಸುವಂತೆ ತಿಳಿಸು.
ಕಿರುಚುತ್ತಿರುವ ಗುಂಪೇ ಎದುರಾದರೂ ಅದಕ್ಕೆ ಕಿವುಡನಾಗಿ ಯಾವುದು ತನಗೆ ಸರಿಯೆಂದು ಕಂಡು ಬರುತ್ತದೋ ಅದಕ್ಕಾಗಿ ನಿಂತು ಹೋರಾಡುವುದನ್ನು ಕಲಿಸು. ಮೃದುವಾಗಿ ನಡೆಸಿಕೋ ಆದರೆ ಅತಿಯಾಗಿ ಮುದ್ದಿಸಬೇಡ. ಏಕೆಂದರೆ ಕಬ್ಬಿಣ ಉಕ್ಕಾಗಬೇಕಾದರೆ ಬೆಂಕಿಯಿಂದ ಕಾಯಿಸಲೇಬೇಕು. ಅವನಲ್ಲಿ ಕಾತುರತೆಯಿಂದಿರುವ ಧೈರ್ಯ ತುಂಬಿಸು. ಎಂದಿಗೂ ಧೈರ್ಯಗುಂದದಿರುವಂತಹ ತಾಳ್ಮೆಯನ್ನು ಕಲಿಸು. ಏಕೆಂದರೆ ಇದರಿಂದ ಅವನಿಗೂ ಮನುಜ ಕುಲದಲ್ಲಿ ಆಳವಾದ ವಿಶ್ವಾಸ ಮೂಡಲು ಸಾಧ್ಯ.
ಇದು ಒಂದು ದೊಡ್ಡ ಜವಾಬ್ದಾರಿ
ಅದು ಒಂದು ಮುಗ್ಧ ಮಗು
ಆದರೆ ನೀನು ಯೋಚಿಸು
ಇದು ನಿನ್ನಿಂದ ಸಾಧ್ಯವೇ.
ಅಬ್ರಹಾಂ ಲಿಂಕನ್.