ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ರಾಜ್ ಇಲಾಖೆಯಲ್ಲಿ ಖಾಲಿ ಹುದ್ದೆಗಳ ಭರ್ತಿ, ಪಿಡಿಒ ಹುದ್ದೆಯನ್ನು ‘ಬಿ’ಗ್ರೂಪ್ಗೆ ಸೇರ್ಪಡೆ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಒತ್ತಾಯಿಸಿ ಪಿಡಿಒ, ಕಾರ್ಯದರ್ಶಿ, ಲೆಕ್ಕ ಸಹಾಯಕರು, ಶುಕ್ರವಾರದಿಂದ ಆರಂಭಿಸಿರುವ ಅರ್ನಿದಿಷ್ಟಾವಧಿ ಧರಣಿ ಮುಂದುವರಿದೆ.
ಸೋಮವಾರದಿಂದ ಪಿಡಿಒ, ಕಾರ್ಯದರ್ಶಿಗಳ ಹೋರಾಟ ಜಿಲ್ಲಾ, ತಾಲೂಕು ಮಟ್ಟಕ್ಕೆ ಶಿಫ್ಟ್ ಆಗಿದೆ. ಬಹತೇಕ ಅಧಿಕಾರಿಗಳು, ಸಿಬ್ಬಂದಿ ಧರಣಿಯಲ್ಲಿ ನಡೆಸುತ್ತಿರುವ ಹಿನ್ನೆಲೆಯಲ್ಲಿ ರಾಜ್ಯದಲ್ಲಿರುವ 6 ಸಾವಿರಕ್ಕೂ ಅಧಿಕ ಗ್ರಾಪಂಗಳು ಬಿಕೋ ಎನ್ನುತ್ತಿವೆ. ಈ ಹಿನ್ನೆಲೆಯಲ್ಲಿ ಗ್ರಾಮ ಪಂಚಾಯಿತಿಗಳಲ್ಲಿ ಸಿಗುತ್ತಿದ್ದ 40ಕ್ಕೂ ಅಧಿಕ ಸೇವೆಗಳಲ್ಲಿ ವ್ಯತ್ಯಯ ಉಂಟಾಗಿದ್ದು, ಜನರಿಗೆ ತೊಂದರೆಯಾಗುತ್ತಿದೆ. ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ,ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ, ಪ್ರತಿಭಟನೆಗೆ ತಮ್ಮ ಬೆಂಬಲ ಕೊಟ್ಟಿದ್ದಾರೆ.
ಜಿಲ್ಲಾ ಮಟ್ಟಕ್ಕೆ ಪ್ರತಿಭಟನೆ ವಿಸ್ತರಣೆ
ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ಎರಡು ದಿನಗಳು ಕಾಲ ಪ್ರತಿಭಟನೆ ನಡೆಸಲು ಪೊಲೀಸ್ ಇಲಾಖೆ ಅನುಮತಿ ಕೊಟ್ಟಿತ್ತು. ಅದರಂತೆ, ರಾಜ್ಯದ ಮೂಲೆ ಮೂಲೆಗಳಿಂದ ಸಾವಿರಾರು ಮಂದಿ ಆಗಮಿಸಿ ಶುಕ್ರವಾರ ಮತ್ತು ಶನಿವಾರ ಪ್ರತಿಭಟನೆ ನಡೆಸಿ ಸರ್ಕಾರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು.ಒಂದೇ ತಾಲೂಕಿನಲ್ಲಿ 7 ವರ್ಷ ಸೇವೆ ಸಲ್ಲಿಸಿದವರನ್ನು ವರ್ಗಾವಣೆ ಮಾಡುವ ನಿಯಮ ಬಲವಂತವಾಗಿ ಹೇರಲಾಗಿದೆ. ಸರ್ಕಾರದ ಒತ್ತಡ ಕಾರ್ಯತಂತ್ರದ ಪರಿಣಾಮ ಈಗಾಗಲೇ 21 ಪಿಡಿಒಗಳ ಜೀವ ಹೋಗಿದೆ. ಇನ್ನೂ ಹಲವು ಪಿಡಿಒಗಳು ಆರೋಗ್ಯ ಸಮಸ್ಯೆಗಳಿಗೆ ಸಿಲುಕಿದ್ದಾರೆ. ವರ್ಗಾವಣೆ ನಿಯಮದಲ್ಲಿ ಬದಲಾವಣೆಗೂ ತರುವ ಮುನ್ನ ಸಂದ ಸಲಹೆ ಪಡೆಯಬೇಕು. 7 ವರ್ಷ ಪೂರ್ಣಗೊಂಡಿರುವವರನ್ನು ವರ್ಗಾವಣೆ ಮಾಡುವುದನ್ನು ಕೈಬಿಡಬೇಕು. ಪಂಚಾಯತ್ಗಳಿಗೆ ಹೆಚ್ಚಿನ ಸಿಬ್ಬಂದಿ ನೇಮಿಸಬೇಕು. ಪಿಡಿಒ ಜೇಷ್ಠತಾ ಪಟ್ಟಿ ಅಂತಿಮಗೊಳಿಸಿ ಆದೇಶ ಹೊರಡಿಸಬೇಕು ಎಂದು ಪ್ರತಿಭಟನೆಕಾರರು ಆಗ್ರಹಿಸಿದರು.
ಇಲಾಖೆ ಕೊಟ್ಟಿರುವ ಅನುಮತಿ ಮುಗಿದ ಹಿನ್ನೆಲೆಯಲ್ಲಿ ಜಿಲ್ಲಾ, ತಾಲೂಕು ಮಟ್ಟದಲ್ಲಿ ಪ್ರತಿಭಟನೆ ತೀವ್ರಗೊಳಿಸಲು ಪ್ರತಿಭಟನಕಾರರು ನಿರ್ಧರಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಭಾನುವಾರದಿಂದ ಎಲ್ಲ ಜಿಲ್ಲೆಗಳಲ್ಲೂ ಧರಣಿ ನಡೆಯಲಿದೆ. ಇಲಾಖೆಯ ಹೆಚ್ಚುವರಿ ಕಾರ್ಯದರ್ಶಿ ಉಮಾ ಮಾಧವನ್ ಪ್ರತಿಭಟನೆ ಸ್ಥಳಕ್ಕೆ ಆಗಮಿಸಿ ಮನವಿ ಪತ್ರ ಸ್ವೀಕರಿಸಿದ್ದರು. ಬಳಿಕ ನಡೆದ ಸಭೆಯಲ್ಲಿ ಇಲಾಖೆ ಅಧಿಕಾರಿಗಳ ಉನ್ನತ ಅಧಿಕಾರಿಗಳು ಮನವೊಲಿಕೆ ಪ್ರಯತ್ನ ಮಾಡಿದ್ದರೂ ಸ್ಥಳದಲ್ಲೇ ಬೇಡಿಕೆ ಈಡೇರಿಸುವಂತೆ ಪಟ್ಟು ಹಿಡಿದಿದ್ದರು. ಮಾತುಕತೆ ವಿಲವಾದ ಹಿನ್ನೆಲೆಯಲ್ಲಿ 2 ದಿನವೂ ಧರಣಿ ನಡೆಸಿ ಸರ್ಕಾರ ವಿರುದ್ಧ ಘೋಷಣೆ ಕೂಗಿ ಅಸಮಾಧಾನ ವ್ಯಕ್ತಪಡಿಸಿದರು.
ಎಲ್ಲ ಸಂಘದ ಅಧ್ಯಕ್ಷರ ಜತೆ ಸಭೆ ನಡೆಸಲು ಇಲಾಖೆ ಸಚಿವರು, ಅ.10ರಂದು ದಿನಾಂಕ ನಿಗದಿ ಮಾಡಿದ್ದಾರೆ. ಸರ್ಕಾರದಿಂದ ಸ್ಪಷ್ಟ ಆದೇಶ ಬರುವವರೆಗೂ ಜಿಲ್ಲಾ, ತಾಪಂ, ಗ್ರಾಪಂ ಮುಂಭಾಗದಲ್ಲಿ ಎಲ್ಲರೂ ಒಟ್ಟಾಗಿ ಪ್ರತಿಭಟನೆ ಮಾಡಲಾಗುವುದು.ಪೊಲೀಸರು ಪ್ರತಿಭಟನೆಗೆ ಕೊಟ್ಟಿರುವ ಅನುಮತಿ ಮುಗಿದ ಹಿನ್ನೆಲೆಯಲ್ಲಿ ಜಿಲ್ಲಾ,ತಾಲೂಕು ಮಟ್ಟಕ್ಕೆ ಕೊಂಡೊಯ್ಯುತ್ತಿದ್ದೇವೆ. ನಮ್ಮ ಸಮಸ್ಯೆ ಪರಿಹಾರ ಸಿಗುವವರೆಗೂ ಹೋರಾಟ ನಿಲ್ಲಿಸುವುದಿಲ್ಲ.
ರಾಜು ವಾರದ.
ರಾಜ್ಯ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ.