ಮಾದಕ ವಸ್ತು ಸಾಗಾಣಿಕೆ ಮಾಡುತ್ತಿದ್ದ ಅಂತರಾಷ್ಟ್ರೀಯ ಜಾಲವೊಂದನ್ನು ಕೊಡಗು ಪೊಲೀಸರು ಭೇದಿಸಿದ್ದು, ಏಳು ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರಿಂದ ರೂ. 3 ಕೋಟಿ ಬೆಲೆ ಬಾಳುವ 3. 31 ಕೆಜಿ ಹೈಡ್ರೋ ಗಾಂಜಾವನ್ನು ವಶ ಪಡಿಸಿಕೊಂಡಿದ್ದಾರೆ. ಕೇರಳ ಮತ್ತು ಕೊಡಗು ಜಿಲ್ಲೆಯ ಆರೋಪಿಗಳು ಈ ಜಾಲದಲ್ಲಿ ತೊಡಗಿಸಿಕೊಂಡಿದ್ದು, ಮತ್ತೋರ್ವ ಆರೋಪಿಗಳು ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.
ಕೊಡಗು ಎಸ್ಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಎಸ್ಪಿ ಕೆ ರಾಮರಾಜನ್, ಮಾದಕ ದ್ರವ್ಯ ದಂಧೆ ಬಗ್ಗೆ ಪೊಲೀಸರಿಗೆ ಖಚಿತ ಸುಳಿವು ಸಿಕ್ಕ ನಂತರ ದಂಧೆ ಬಯಲಿಗೆಳೆಯಲು ಮಡಿಕೇರಿ ಬಳಿ ಚೆಕ್ ಪೋಸ್ಟ್ ಸ್ಥಾಪಿಸಲಾಗಿತ್ತು. ಸೆಪ್ಟಂಬರ್ 28ರಂದು ಮೂರ್ನಾಡು-ಮಡಿಕೇರಿ ರಸ್ತೆಯಲ್ಲಿ ಬೆಳ್ಳಂಬೆಳಗ್ಗೆ ಶಂಕಿತ ವಾಹನವನ್ನು ತಡೆದು ತಪಾಸಣೆ ನಡೆಸಲಾಯಿತು.
ಈ ವೇಳೆ ಐವರು ಆರೋಪಿಗಳ ಬಳಿ 3.31 ಕಿಲೋ ಹೈಡ್ರೋಪೋನಿಕ್ ಗಾಂಜಾ ಪತ್ತೆಯಾಗಿತ್ತು. ಕೊಡಗಿನ ಹೆಗ್ಗಳದ ನಜೀರುದ್ದೀನ್ ಎಂ.ಯು (26), ಯಾಹ್ಯಾ ಸಿ.ಎಚ್ (28) ಕುಂಜಿಲದ ಅಕ್ನಾಸ್ (26), ಬೇಟೋಳಿ ಗ್ರಾಮದ ವಜೀದ್ (26) ಮತ್ತು ಕೇರಳದ ಕಣ್ಣೂರಿನ ರಿಯಾಜ್ (44), ಅಜ್ಜಲ್, ಮೆಹರೂಫ್ ಬಂಧಿತ ಆರೋಪಿಗಳು. ವಿಚಾರಣೆ ವೇಳೆ ಆರೋಪಿಗಳು ಥಾಯ್ಲೆಂಡ್ನಿಂದ ಭಾರತಕ್ಕೆ ವಿಮಾನದಲ್ಲಿ ಬಂದಿದ್ದ 3.31 ಕೆಜಿ ಹೈಡ್ರೋಪೋನಿಕ್ ಗಾಂಜಾವನ್ನು ಸಾಗಿಸುತ್ತಿದ್ದರು ಎಂದು ತಿಳಿದುಬಂದಿದೆ.
ಥೈಲ್ಯಾಂಡ್ನಿಂದ ವಿಮಾನದ ಮೂಲಕವೇ ಬೆಂಗಳೂರಿಗೆ ತಂದು, ಅಲ್ಲಿಂದ ಬೆಂಗಳೂರು ನಗರ, ಕೊಡಗು, ಕೇರಳದಲ್ಲಿ ಇಟ್ಟು ದುಬೈಗೆ ವಿಮಾನದ ಮೂಲಕವೇ ಈ ಗ್ಯಾಂಗ್ ಸಪ್ಲೆ ಮಾಡುತಿತ್ತು.
ಕೇರಳ ಮೂಲದ ಮಹಮ್ಮದ್ ಅನೂಫ್ ಥೈಲ್ಯಾಂಡ್ ದೇಶದ ಬ್ಯಾಂಕಾಕ್ ನಗರದಲ್ಲಿ ಕೆಫೆ ಇಟ್ಟುಕೊಂಡಿದ್ದ. ಈತ ಕೇರಳದ ಕಾಸರಗೋಡಿನ ಮೆಹರೂಫ್, ವಿರಾಜಪೇಟೆಯ ರವೂಫ್, ನಾಸೀರುದ್ದೀನ್, ವಾಜೀದ್, ನಾಪೋಕ್ಲುವಿನ ಯಾಹಿಯಾ, ಅಕ್ನಾಸ್, ಅಜ್ಜಲ್, ಕೇರಳದ ರಿಯಾಜ್ ಇವರೊಂದಿಗೆ ತಂಡವನ್ನು ಕಟ್ಟಿಕೊಂಡು ಅಲ್ಲಿಂದ ಹೈಡೋಪೋನಿಕ್ ರೀತಿಯಲ್ಲಿ ಬೆಳೆದಿರುವ ಗಾಂಜಾವನ್ನು ವಿಮಾನದ ಮೂಲಕ ಭಾರತ ಮತ್ತು ದುಬೈಗೆ ಸಾಗಾಟ ಮಾಡುತ್ತಿದ್ದರು ಎಂದು ಎಸ್ಪಿ ತಿಳಿಸಿದರು.
ಐವರು ಆರೋಪಿಗಳನ್ನು ಮಡಿಕೇರಿಯಲ್ಲಿ ಬಂಧಿಸಿದರೆ, ಮೆಹರೂಫ್ ಥಾಯ್ಲೆಂಡ್ಗೆ ಪರಾರಿಯಾಗುತ್ತಿದ್ದಾಗ ಕೊಚ್ಚಿ ವಿಮಾನ ನಿಲ್ದಾಣದಲ್ಲಿ ಸೆರೆ ಹಿಡಿಯಲಾಯಿತು. ರವೂಫ್ ನನ್ನು ಬೆಂಗಳೂರಿನ ಆತನ ನಿವಾಸದಲ್ಲಿ ಪೊಲೀಸರು ಬಂಧಿಸಿದ್ದಾರೆ. ಪ್ರಮುಖ ಆರೋಪಿ ಮೊಹಮ್ಮದ್ ಅನೂಫ್ ಥಾಯ್ಲೆಂಡ್ನಲ್ಲಿದ್ದಾನೆ ಎಂದು ಶಂಕಿಸಿರುವ ಪೊಲೀಸರು ಆತನಿಗಾಗಿ ಹುಡುಕಾಟ ನಡೆಸಿದ್ದಾರೆ.
ಅಂತಾರಾಷ್ಟ್ರೀಯ ದಂಧೆ ಯಶಸ್ವಿಯಾಗಿ ನಿಗ್ರಹಿಸುವಲ್ಲಿ ಕೊಡಗು ಪೊಲೀಸ್ ತಂಡದ ಪ್ರಯತ್ನವನ್ನು ಎಸ್ಪಿ ರಾಮರಾಜನ್ ಶ್ಲಾಘಿಸಿದರು.