ಜಾತಿ, ಬೇಧವಿಲ್ಲದೆ ಎಲ್ಲರೂ ಗೌರವ ಹಾಗೂ ಸಾಮರಸ್ಯವಾಗಿ ಬದುಕುವ ಸಮಾಜ ನಿರ್ಮಾಣವಾಗಬೇಕೆಂದು ಶ್ರೀ ವೇಣುಗೋಪಾಲ ಸ್ವಾಮಿ ದೇವಸ್ಥಾನದ ಅರ್ಚಕ ಮಹಾಬಲ ಕಾರಂತ್ ಹೇಳಿದರು.
ಅವರು ಬುಧವಾರ ಮೂಡಿಗೆರೆ ತಾಲೂಕು ಕಚೇರಿಯಲ್ಲಿ ತಾಲೂಕು ಆಡಳಿತದಿಂದ ಏರ್ಪಡಿಸಿದ್ದ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಹಾಗೂ ಲಾಲ್ಬಹದ್ದೂರ್ ಶಾಸ್ತ್ರಿ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸತ್ಯ, ನ್ಯಾಯ, ನಿಷ್ಠೆ ಕಾಪಾಡಲು ಹೋರಾಟ ನಡೆಸುವ ಕಾಲಘಟ್ಟ ಇದಾಗಿದೆ. ಹಾಗಾಗಿ ಪರರನ್ನು ಪ್ರೀತಿ ಭಾವನೆಯಿಂದ ಕಾಣುವ ಮೂಲಕ ಜೀವನ ಸಾಗಿಸಿದರೆ ಮಾತ್ರ ಸಮಾಜ ಪರಿವರ್ತನೆಗೊಳ್ಳಲು ಸಾಧ್ಯ ಎಂದು ಹೇಳಿದರು.
ಮೂಡಿಗೆರೆ ಸಂತ ಅಂತೋಣಿ ದೇವಾಲಯದ ಧಾರ್ಮಿಕ ಗುರು ಸುನೀಲ್ ರೋಡ್ರಿಗಸ್ ಮಾತನಾಡಿ, ಈ ಜಗತ್ತಿಗೆ ಬೇಕಾಗಿರುವುದು ಪ್ರೀತಿ. ಅದನ್ನೆ ಎಲ್ಲಾ ಧರ್ಮಗಳು ಹೇಳುತ್ತದೆ. ನಿಜವಾಗಿಯೂ ಪ್ರತಿಯೊಬ್ಬರೂ ತಮ್ಮ ಧರ್ಮವನ್ನು ಅರತುಕೊಂಡರೆ ಯಾರಲ್ಲೂ ಕೂಡ ಕೂಮು ಭಾವನೆ ಉಂಟಾಗುವುದಿಲ್ಲವೆಂದು ಹೇಳಿದರು.
ಚಕಮಕ್ಕಿ ಮಸೀದಿಯ ಧಾರ್ಮಿಕ ಗುರು ಸಿನಾನ್ ಫೈಝಿ ಮಾತನಾಡಿ, ತಮ್ಮ ಧರ್ಮ ಗೌರವಿಸುವ ಜತೆಗೆ ಎಲ್ಲಾ ಧರ್ಮವನ್ನು ಗೌರವಿಸಬೇಕೆಂದು ಪ್ರವಾದಿ ಮಹಮ್ಮದ್ ಅವರು ಹೇಳಿದ ಮಾತುಗಳನ್ನು ಮಹಾತ್ಮಾ ಗಾಂಧೀಜಿ ಅವರು ಕೂಡ ಹೇಳಿದ್ದಾರೆ. ಈ ಜಗತ್ತಿನಲ್ಲಿ ಮಾನವ ಜನ್ಮಕ್ಕೆ ಅಂತ್ಯ ಇದೆ ಎಂಬುದು ಎಲ್ಲರಿಗೂ ತಿಳಿಯದ ವಿಚಾರವಲ್ಲ. ಸ್ವಾರ್ಥ ಬದುಕಿಗಾಗಿ ಇತರರಿಗೆ ತೊಂದರೆ ನೀಡುವುದನ್ನು ಬಿಟ್ಟು ಸಹಬಾಳ್ವೆಯಿಂದ ಬದುಕಬೇಕೆಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ತಹಸೀಲ್ದಾರ್ ರಾಜಶೇಖರ್ ಮೂರ್ತಿ ವಹಿಸಿದ್ದರು. ತಾ.ಪಂ. ಇಓ ದಯಾವತಿ, ಬಿಇಓ ಹೇಮಂತಚಂದ್ರ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.