ಸ್ವಸಹಾಯ ಸಂಘದ ಸದಸ್ಯರು ಸಂಜೀವಿನಿ ಒಕ್ಕೂಟಕ್ಕೆ ಸೇರಿ ಒಕ್ಕೂಟದ ಅನುದಾನದ ಸದ್ಬಳಕೆ ಮಾಡಿಕೊಳ್ಳಬೇಕಿದೆ ಎಂದು ಕಳಸ ತಾಲ್ಲೂಕು ಇಡಕಣಿ ಗ್ರಾ.ಪಂ ಮಟ್ಟದ ಸಂಜೀವಿನಿ ಒಕ್ಕೂಟದ ಅಧ್ಯಕ್ಷರಾದ ವೈಶಾಲಿ ಹೇಳಿದರು.
ಹಿರೇಬೈಲ್ನಲ್ಲಿ ನಡೆದ ಕಳಸ ತಾಲ್ಲೂಕಿನ ಇಡಕಣಿ ಗ್ರಾ.ಪಂ ಮಟ್ಟದ ಸಂಜೀವಿನಿ ಒಕ್ಕೂಟದ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಆರ್ಥಿಕ ಸ್ವಾವಲಂಬನೆ ಮಾತ್ರವಲ್ಲದೇ ಸರ್ವಾಂಗೀಣ ಏಳಿಗೆಗೆ ಸಂಜೀವಿನಿ ಒಕ್ಕೂಟ ಸಹಕಾರಿಯಾಗಿದೆ. ಸಾಮಾಜಿಕವಾಗಿ ಸಂಘಟಿತವಾಗಿ ಅಭಿವೃದ್ದಿ ಹೊಂದಲು ಇಂತಹ ಒಕ್ಕೂಟಗಳು ಸಹಕಾರಿಯಾಗಿದೆ. ಗ್ರಾಮೀಣ ಭಾಗದ ಮಹಿಳೆಯರು ಆತ್ಮಾಭಿಮಾನದ ಬದುಕು ಕಟ್ಟಿಕೊಳ್ಳಲು ಸಂಜೀವಿನಿ ಒಕ್ಕೂಟ ಕಾರಣವಾಗಿದೆ ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ವಲಯ ಮೇಲ್ವಿಚಾರಕರಾದ ಅಬ್ದುಲ್ ನಾಝೀಮ್, ಮಹಿಳೆಯರು ಸಂಘಗಳ ಮೂಲಕ ಉಳಿತಾಯ ಮಾಡಿ ಉಳಿತಾಯ ಮನೋಭಾವವನ್ನು ಬೆಳೆಸಿಕೊಳ್ಳುತ್ತಿದ್ದಾರೆ. ಸಂಘಗಳ ಮೂಲಕ ಮುಖ್ಯವಾಹಿನಿಗೆ ಬರಲು ಸಾಧ್ಯವಾಗಿದೆ ಎಂದರು.
ವರದಿ ಮಂಡನೆ ಮಾಡಿ ಮಾತನಾಡಿದ ಮುಖ್ಯ ಪುಸ್ತಕ ಬರಹಗಾರರಾದ ದೀಕ್ಷಾ, ಒಕ್ಕೂಟದಲ್ಲಿ ಕೃಷಿ ಮತ್ತು ಕೃಷಿಯೇತರ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡಲಾಗುತ್ತಿದೆ. ಒಕ್ಕೂಟದ ಸಮುದಾಯ ಬಂಡವಾಳ ನಿಧಿಯನ್ನು ಬಳಸಿಕೊಂಡು ಉತ್ತಮ ಆದಾಯ ಗಳಿಸುವ ಜೊತೆಗೆ ಸಂಘದ ಸದಸ್ಯರು ಮಕ್ಕಳಿಗೆ ವಿದ್ಯಾಬ್ಯಾಸ ಕೊಡಿಸಲು ಸಾಧ್ಯವಾಗಿದೆ. ಬಡತನ ತೀವ್ರತೆಯನ್ನು ಕಡಿಮೆಗೊಳಿಸುವುದು, ಸಾಮಾಜಿಕ ಸುಧಾರಣೆ, ಮಹಿಳಾ ಸಬಲೀಕರಣ, ಕೌಶಲ್ಯಭಿವೃದ್ದಿ ನೀಡುವುದು ಸೇರಿದಂತೇ ಹಲವು ಅಂಶಗಳು ಸಂಜೀವಿನಿ ಒಕ್ಕೂಟದ ಗುರಿಯಾಗಿದೆ ಎಂದರು.
ವಾರ್ಷಿಕ ಸಭೆಯಲ್ಲಿ ಒನ್ ಜಿ ಪಿ ಒನ್ ಉತ್ಪನ್ನವಾದ ಉಪ್ಪಿನಕಾಯಿಯನ್ನು ಅನಾವರಣಗೊಳಿಸಲಾಯಿತು. ಈ ಹಿಂದೆ ಕಾರ್ಯನಿರ್ವಹಿಸಿದ ಪದಾಧಿಕಾರಿಗಳಿಗೆ ಸನ್ಮಾನ ಮಾಡಲಾಯಿತು .
ಈ ಸಂದರ್ಭದಲ್ಲಿ ಒಕ್ಕೂಟದ ಕಾರ್ಯದರ್ಶಿ ಕವಿತಾ, ವಲಯ ಮೇಲ್ವಚಾರಕರಾದ ಅಭಿಜಿತ್, ಕಳಸ ಸಂಜೀವಿನಿ ತಾಲೂಕು ಮಟ್ಟದ ಒಕ್ಕೂಟದ ಖಜಾಂಚಿ ಛಾಯಾ, ಇಡಕಣಿ ಗ್ರಾ.ಪಂ ಪಿಡಿಓ ಪ್ರಕಾಶ್, ಅಧ್ಯಕ್ಷರಾದ ರವೀಂದ್ರ, ಒಕ್ಕೂಟದ ಸಿಬ್ಬಂದಿಗಳಾದ ಸಂದ್ಯಾ ಎನ್, ಸರೋಜ, ಜಯಶ್ರೀ, ಕವಿತಾ, ಒಕ್ಕೂಟ ಹಾಗೂ ಗ್ರಾ.ಪಂ ಸದಸ್ಯರು ಇದ್ದರು.