ಚಿಕ್ಕಮಗಳೂರು ಸರ್ಕಾರಿ ಐಟಿಐ ಕಾಲೇಜಿನಲ್ಲಿ ವಿದ್ಯಾರ್ಥಿಯ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಆರೋಪ ಕೇಳಿ ಬಂದಿದೆ.
ಇಂದು ಪರೀಕ್ಷೆ ಇರುವುದರಿಂದ ವಿದ್ಯಾರ್ಥಿಗಳು ಬ್ಯಾಗ್ ಇತರೆ ವಸ್ತುಗಳನ್ನು ತರುವುದು ಬೇಡ ಎಂದು ಉಪನ್ಯಾಸಕರು ತಿಳಿಸಿದ್ದರು ಎನ್ನಲಾಗಿದೆ.
ಈ ಹಿನ್ನಲೆಯಲ್ಲಿ ವಿದ್ಯಾರ್ಥಿ ಮನೋಜ್ ಬ್ಯಾಗನ್ನು ತಂದಿರಲಿಲ್ಲ. ಇದನ್ನು ಪ್ರಶ್ನಿಸಿದ ಉಪನ್ಯಾಸಕ ದಿವಾಕರ್ ವಿದ್ಯಾರ್ಥಿಯನ್ನು ಮನಬಂದಂತೆ ಥಳಿಸಿದ್ದಾರೆ ಎಂದು ಆರೋಪಿಸಲಾಗಿದೆ.
ವಿದ್ಯಾರ್ಥಿಯ ಕೈ ಮುಖ ಇನ್ನಿತರ ಭಾಗಗಳಿಗೆ ತೀವ್ರ ಗಾಯವಾಗಿದ್ದು ಈ ಕೃತ್ಯವನ್ನು ಖಂಡಿಸಿ ಎಬಿವಿಪಿ ನೇತೃತ್ವದಲ್ಲಿ ರಸ್ತೆ ತಡೆ ನಡೆಸಿ ಪ್ರತಿಭಟನೆ ಮಾಡಲಾಯಿತು.
ಮುಂದೆ ಆಗಬಹುದಾದ ಪ್ರಮಾದ ಅರಿತ ಆರೋಪಿ ಶಿಕ್ಷಕ ವಿದ್ಯಾರ್ಥಿ ಪರಿಷತ್ ಕಾರ್ಯಕರ್ತರ ಮನವೊಲಿಸಲು ಮಾಡಿದ ಪ್ರಯತ್ನ ಫಲ ಕೊಟ್ಟಿಲ್ಲ.
ತಪ್ಪಿತಸ್ಥ ಶಿಕ್ಷಕನ ವಿರುದ್ಧ ಪ್ರಕರಣ ದಾಖಲಿಸಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಮನವಿ ನೀಡಲಾಗಿದೆ.
ಈ ಮಧ್ಯೆ ಗಾಯಗೊಂಡ ವಿದ್ಯಾರ್ಥಿ ಆಸ್ಪತ್ರೆಗೆ ದಾಖಲಾಗಿದ್ದು, ಅಲ್ಲಿಗೆ ತೆರಳಿರುವ ಆರೋಪಿ ಶಿಕ್ಷಕ ಕ್ಷಮೆ ಯಾಚಿಸಿದ್ದು, ಪ್ರಕರಣವನ್ನು ಪೊಲೀಸ್ ಸಮ್ಮುಖದಲ್ಲಿ ರಾಜಿಸಂಧಾನ ಮೂಲಕ ಇತ್ಯರ್ಥಪಡಿಸುವ ಯತ್ನಗಳು ನಡೆದಿದೆ.