ಚಿಕ್ಕಮಗಳೂರು ನಗರದ ಪ್ರಮುಖ ರಸ್ತೆಗಳಲ್ಲಿ ಯುವಕರ ತಂಡವೊಂದು ಪ್ಯಾಲಿಸ್ತೀನ್ ಧ್ವಜ ಹಿಡಿದು ಬೈಕ್ ಮೇಲೆ ಓಡಾಡಿರುವ ವಿಡಿಯೋ ವೈರಲ್ ಆಗಿದೆ.
ಮೂವರು ಯುವಕರು ಒಂದು ಸ್ಕೂಟಿಯಲ್ಲಿ ಕುಳಿತು ಪ್ಯಾಲೆಸ್ತೇನ್ ಬಾವುಟ ಹಿಡಿದು ದಂಟಮಕ್ಕಿ ಕೆರೆ ಏರಿಯಿಂದ ಹನುಮಂತಪ್ಪ ವೃತ್ತದ ಕಡೆಗೆ ಸಾಗಿದ್ದಾರೆ. ಅವರ ಹಿಂದೆಯೇ ಮೊತ್ತೊಂದು ಬೈಕಿನಲ್ಲಿ ಇನ್ನೂ ಮೂವರು ಬಾವುಟ ಹಿಡಿದು ಅವರನ್ನು ಹಿಂಬಾಲಿಸಿದ್ದಾರೆ.
ಈದ್ ಮಿಲಾದ್ ಮೆರವಣಿಗೆ ಸಿದ್ಧತೆ ನಡುವೆ ಯುವಕರು ಪ್ಯಾಲಿಸ್ತೀನ್ ಧ್ವಜ ಹಿಡಿದು ಓಡಾಡಿದ್ದು ಇದರ ವಿರುದ್ಧ ಹಿಂದೂ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿವೆ. ಅಲ್ಲದೆ ಯುವಕರ ವಿರುದ್ಧ ಕ್ರಮ ಕೈಗೊಳ್ಳುವಂತೆ ಚಿಕ್ಕಮಗಳೂರು ನಗರ ಠಾಣೆ ಮುಂಭಾಗ ಹಿಂದೂ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಪ್ಯಾಲಿಸ್ತೀನ್ ಧ್ವಜ ಹಾರಿಸಿದ ದೇಶದ್ರೋಹಿಗಳನ್ನು ಬಂಧಿಸದಿದ್ದರೆ ಹೋರಾಟ ತೀವ್ರಗೊಳಿಸುವುದಾಗಿ ಹಿಂದೂ ಕಾರ್ಯಕರ್ತರು ಎಚ್ಚರಿಕೆ ನೀಡಿದ್ದಾರೆ. ನಾಳೆ ಈದ್ ಮಿಲಾದ್ ಹಿನ್ನಲೆಯಲ್ಲಿ ನಗರದಲ್ಲಿ ಶಾಂತಿ ಕದಡುವ ಹುನ್ನಾರವಾಗಿ ಈ ರೀತಿ ಪ್ಯಾಲೇಸ್ತೇನ್ ಧ್ವಜವನ್ನು ಹಿಡಿದು ತಿರುಗಿದ್ದಾರೆ. ಇವರನ್ನು ಕೂಡಲೇ ಬಂಧಿಸಬೇಕೆಂದು ಆಗ್ರಹಿಸಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಡಿವೈಎಸ್ಪಿ ಕೃಷ್ಣಮೂರ್ತಿಯವರು ; ಬಾವುಟ ಹಿಡಿದು ಸಾಗಿದ ಬೈಕ್ ನಂಬರ್ ಪತ್ತೆಯಾಗಿದೆ. ಅದರ ಜಾಡು ಹಿಡಿದು ಆರೋಪಿಗಳನ್ನು ಪತ್ತೆ ಮಾಡಲು ತಂಡ ರಚಿಸಲಾಗಿದೆ ಎಂದಿದ್ದಾರೆ.