ಮೂಡಿಗೆರೆ ತಾಲ್ಲೂಕಿನ ಗೋಣೀಬೀಡು ವ್ಯವಸಾಯ ಸಹಕಾರ ಬ್ಯಾಂಕಿನ 2024-25ನೇ ಸಾಲಿನ ಸರ್ವಸದಸ್ಯರ ವಾರ್ಷಿಕ ಮಹಾಸಭೆ ಗುರುವಾರ ನಡೆಯಿತು.
ಈ ವೇಳೆ ಬ್ಯಾಂಕಿನ ಅಧ್ಯಕ್ಷ ಎನ್.ಜೆ.ಜಯರಾಂ ಮಾತನಾಡಿ, ಸಹಕಾರ ಸಂಘ ಈ ಸಾಲಿನಲ್ಲಿ 95.37 ಕೋಟಿ ರೂ ವ್ಯವಹಾರ ನಡೆಸಿ 59.38 ಲಕ್ಷರೂ ನಿವ್ವಳ ಲಾಭ ಗಳಿಸಿದೆ. ಸಂಘದ ಷೇರು 1.58 ಕೋಟಿ,ಆಪದ್ಧನ 1.51ಕೋಟಿ ಒಟ್ಟು ನಿಧಿಗಳು 5.58 ಕೋಟಿ, ಬ್ಯಾಂಕಿನ ಆಡಳಿತ ಸಮಿತಿಯಲ್ಲಿ 2117 ಮಂದಿ ಅಜೀವ ಸದಸ್ಯರಿದ್ದು ಬ್ಯಾಂಕ್ ಈ ಬಾರಿಯೂ “ಎ” ದರ್ಜೆಯಲ್ಲಿ ಮುಂದುವರಿದಿದೆ ಎಂದು ಮಾಹಿತಿ ನೀಡಿದರು.
ಬ್ಯಾಂಕಿನ ಸ್ವಂತ ಬಂಡವಾಳದಿಂದ ಈ ಸಾಲಿನಲ್ಲಿ ಕೃಷಿ ಸಾಲ, ವ್ಯಾಪಾರ ಸಾಲ, ಆಭರಣ ಸಾಲ,ದಾಸ್ತಾನು ಸಾಲ, ವಾಹನ ಸಾಲ, ವೇತನ ಆಧಾರ ಸಾಲ, ಪಿಗ್ಮಿ ಸಾಲ ರಸಗೊಬ್ಬರ ಸಾಲ, ಕೆಸಿಸಿ ಬೆಳೆ ಸಾಲ, ಮಧ್ಯಾವಧಿ ಸಾಲ ಸೇರಿ ಒಟ್ಟು 13.84 ಕೋಟಿ ರೂ ಸಾಲ ವಿತರಣೆ ಮಾಡಲಾಗಿದೆ. 2023-24 ನೇ ಸಾಲಿನಲ್ಲಿ ಬ್ಯಾಂಕಿನ ಆಡಳಿತ ಮಂಡಳಿ ಸದಸ್ಯರ ಮಕ್ಕಳ ಎಸ್ಎಸ್ಎಲ್ಸಿ ಹಾಗೂ ಪಿಯುಸಿಯಲ್ಲಿ ಅತೀ ಹೆಚ್ಚು ಅಂಕ ಗಳಿಸಿದ ವಿಧ್ಯಾರ್ಥಿಗಳಿಗೆ ನಗದು ಸಹಿತ ಪ್ರತಿಭಾ ಪುರಸ್ಕಾರ ಮಾಡಲಾಯಿತು.
ವ್ಯವಸಾಯ ಸಹಕಾರ ಬ್ಯಾಂಕಿನ ಉಪಾಧ್ಯಕ್ಷ ವಿ.ಕೆ.ಶಿವೇಗೌಡ, ನಿರ್ದೇಶಕರಾದ ಹೆಚ್.ಡಿ.ಸುಧಾಕರ್, ಜೆ.ಇ. ಆದರ್ಶ ಕುಮಾರ್, ಕೆ.ಆರ್.ದೀಪಕ್, ಜೆ.ಎಸ್.ಭಾಸ್ಕರ್, ಎಂ.ಆರ್.ಸುಮಾ, ಎನ್.ಬಿ.ಲಲಿತ, ಎಂ. ಅನೀಸ್, ಎಂ.ಬಿ.ನವೀನ್ ಕುಮಾರ್, ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಯು.ಕೆ.ಶಿವಪ್ರಸಾದ್, ಸಿಬ್ಬಂದಿಗಳು, ಸಂಘದ ಸದಸ್ಯರುಗಳು ಉಪಸ್ಥಿತರಿದ್ದರು.