ಚಿಕ್ಕಮಗಳೂರು ಜಿಲ್ಲಾ ಆಸ್ಪತ್ರೆಯ ವೈದ್ಯರ ಮೇಲೆ ನಡೆದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ.
ಕರ್ತವ್ಯ ನಿರತ ವೈದ್ಯ ಡಾ. ವೆಂಕಟೇಶ್ ಮೇಲೆ ತಸ್ಲೀಮ್ ಎಂಬ ಮಹಿಳೆ ಚಪ್ಪಲಿಯಿಂದ ಥಳಿಸಿ ಕೊರಳು ಪಟ್ಟಿ ಹಿಡಿದು ಎಳೆದಾಡುವ ಮೂಲಕ ದೌರ್ಜನ್ಯ ನಡೆಸಿ, ಕರ್ತವ್ಯಕ್ಕೆ ಅಡ್ಡಿಪಡಿಸಿದ್ದರು.
ಪ್ರಕರಣ ಸಂಬಂಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ ವೈದ್ಯ -ಸಿಬ್ಬಂದಿ ಮುಷ್ಕರ ನಡೆಸಿ ಆರೋಪಿಗಳ ವಿರುದ್ಧ ಸೂಕ್ತ ಕ್ರಮಕ್ಕೆ ಒತ್ತಾಯಿಸಿ ದೂರನ್ನು ನೀಡಿತ್ತು.
ಪ್ರಕರಣದ ತೀವ್ರತೆ ಹಾಗೂ ಸಾರ್ವಜನಿಕ ವಲಯದಿಂದ ಬಂದ ಒತ್ತಡದ ಹಿನ್ನೆಲೆಯಲ್ಲಿ ಕ್ಷಿಪ್ರ ಕಾರ್ಯಾಚರಣೆ ನಡೆಸಿದ ಪೊಲೀಸರು ಆರೋಪಿಗಳಾದ ತಸ್ಲಿಮ ಹಾಗೂ ಇರ್ಫಾನ್ ರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ಆರೋಪಿಗಳೀಬ್ಬರನ್ನು ಇದೇ ತಿಂಗಳ 18ರವರೆಗೆ ನ್ಯಾಯಾಂಗ ಬಂಧನಕ್ಕೆ ಒಳಪಡಿಸಿ ಆದೇಶ ನೀಡಲಾಗಿದೆ. ಇನ್ನೋರ್ವ ಆರೋಪಿ ತಲೆಮರೆಸಿಕೊಂಡಿದ್ದು ಆತನ ಪತ್ತೆಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.
ಒಂದೇ ಕುಟುಂಬದ ಸದಸ್ಯರುಗಳು ಪರಸ್ಪರ ಗಲಾಟೆ ಮಾಡಿಕೊಂಡು ಆಸ್ಪತ್ರೆಗೆ ಬಂದಿದ್ದಾಗ ತುಂಬಾ ಜನ ಆಸ್ಪತ್ರೆ ಕೊಠಡಿಗೆ ಬಂದಾಗ ಡಾಕ್ಟರ್ ಹೊರಹೋಗಿ ಎಂದು ಜೋರು ಮಾಡಿದ್ದಕ್ಕೆ ಮಹಿಳೆ ಕೆರಳಿ ವೈದ್ಯರ ಮೇಲೆ ಚಪ್ಪಲಿಯಿಂದ ಹಲ್ಲೆ ಮಾಡಿದ್ದಾಳೆ ಎಂದು ಪ್ರಕರಣ ದಾಖಲಾಗಿದೆ.
ಈ ನಡುವೆ ವೈದ್ಯರು ತನಗೆ ಜಾತಿನಿಂದನೆ ಮಾಡಿದರು ಅದರಿಂದ ಸಿಟ್ಟಿನಿಂದ ಹೀಗೆ ಮಾಡಿರುವುದಾಗ ಮಹಿಳೆ ಚಿಕ್ಕಮಗಳೂರು ಮಹಿಳಾ ಠಾಣೆಯಲ್ಲಿ ವೈದ್ಯರ ವಿರುದ್ಧ ದೂರು ನೀಡಿದ್ದಾರೆ.